
-ಕೆಪಿಎಂಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪೂವಿತಾ ಸೂಚನೆ
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯಲ್ಲಿ ಕೆಪಿಎಮ್ಇ ಕಾಯ್ದೆಯಡಿ ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆಗಳು ಮತ್ತು ವ್ಯಸನ ಮುಕ್ತಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪೂವಿತಾ ಎಸ್. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಕೆಪಿಎಮ್ಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರವಾನಗಿ ಇಲ್ಲದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈದ್ಯರಲ್ಲದವರು ಅನಧಿಕೃತವಾಗಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ನಕಲಿ ವೈದ್ಯರ ಮಾಹಿತಿ ಪಡೆಯಬೇಕು. ವೈದ್ಯ ಪದವಿ ಪಡೆಯದೆ ಜನರ ಜೀವಕ್ಕೆ ತೊಂದರೆಯುಂಟು ಮಾಡುವುದನ್ನು ತಡೆಯಲು ಎಲ್ಲ ನಕಲಿ ವೈದ್ಯರನ್ನು ಗುರ್ತಿಸಿ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕವಾಗಿ ಹಾಗೂ ಕೆಪಿಎಮ್ಇ ಕಾಯ್ದೆ-2007ರ ಅಡಿ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಯಾವುದೇ ವೈದ್ಯಕೀಯ ಪದವಿ ಪಡೆದು ಆಸ್ಪತ್ರೆ ಆರಂಭಿಸುವ ಮೊದಲು ಕೆಪಿಎಮ್ಇ ಕಾಯ್ದೆ-2007ರಡಿ ಖಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಅನುಮತಿ ಪಡೆದ ನಂತರವೇ ಕ್ಲಿನಿಕ್, ಆಸ್ಪತ್ರೆ ಆರಂಭಿಸಬೇಕು. ಹಾಗೆಯೇ ಒಮ್ಮೆ ನೋಂದಣಿ ಮಾಡಿಸಿದ ನಂತರ 05 ವರ್ಷಗಳವರೆಗೆ ಆಸ್ಪತ್ರೆ ನಡೆಸಲು ಆನುಮತಿ ಇದ್ದು, ನೋಂದಣಿ ಅವಧಿ ಮುಗಿಯಲು ಇನ್ನೂ 03 ತಿಂಗಳು ಇರುವಾಗಲೇ ಪುನಃ ನೊಂದಣಿ ಮಾಡಿಸಲು ಸಂಬಂಧಿಸಿದ ಇಲಾಖೆಯ ಅಗತ್ಯ ಕ್ರಮವಹಿಸ ಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪ್ರಯೋಗಾಲಯಗಳ ವರದಿಯನ್ನು ಪೇಥಾಲಜಿಸ್ಟ್ ಅಥವಾ ಆಸ್ಪತ್ರೆಯ ಮುಖ್ಯ ವೈದ್ಯರ ಮೂಲಕ ಕಡ್ಡಾಯವಾಗಿ ದೃಢಪಡಿಸಿರಬೇಕು. ಜಿಲ್ಲೆಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರಕ್ತ ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳು, ಡಯಾಗ್ನೊಸ್ಟಿಕ್ಸ್ ಕೇಂದ್ರಗಳು ಕಡ್ಡಾಯವಾಗಿ ಕೆಪಿಎಮ್ಇ ಕಾಯ್ದೆಯಡಿ ನೋಂದಣಿ ಮಾಡಿಸಬೇಕು. ಮತ್ತು ಪ್ರಯೋಗಾಲಯದ ಪ್ರತಿ ವರದಿಗೂ ಪೇಥಾಲಜಿಸ್ಟ್ ಅವರ ದೃಢಿಕರಣವಾಗಿರಬೇಕು. ಮತ್ತು ಆಸ್ಪತ್ರೆ, ನರ್ಸಿಂಗ್ ಹೋಮ್ಗಳಲ್ಲಿ ರಕ್ತ ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳು, ಡಯಾಗ್ನೊಸ್ಟಿಕ್ಸ್ ಕೇಂದ್ರಗಳು ಇದ್ದಲ್ಲಿ ಪ್ರಯೋಗಾಲಯದ ಪ್ರತಿ ವರದಿಗೂ ಆಸ್ಪತ್ರೆಯ ಮುಖ್ಯ ವೈದ್ಯರು ದೃಢೀಕರಣ ಮಾಡಿರಬೇಕು. ಒಂದು ವೇಳೆ ನಿಯಮ ಮೀರಿದರೆ ಅಂತವರ ವಿರುದ್ಧ ಕೆಪಿಎಮ್ಇ ಕಾಯ್ದೆಯಡಿ ನಿಯಮಾನಯಸಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ 20 ನಕಲಿ ವೈದ್ಯರ ವಿರುದ್ಧ ಕ್ರಮ: ನಕಲಿ ವೈದ್ಯರು ಮತ್ತು ಕ್ಲಿನಿಕ್ಗಳ ವಿರುದ್ಧ ಗರಿಷ್ಠ ಪ್ರಮಾಣದ ದಂಡ ವಿಧಿಸಿ. ಕ್ಲಿನಿಕ್ಗಳನ್ನು ಮುಚ್ಚುವ ಜೊತೆಗೆ ಅಂತಹ ತಪ್ಪು ಮುಂದುವರಿಸುವವರ ವಿರುದ್ಧ ಪ್ರಕರಣ ದಾಖಲಿsಸಲಾಗುವುದು. ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಲ್ಲಿ 20ಮಂದಿ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಂಡು, ಅವರ ಕ್ಲಿನಿಕ್ಗಳನ್ನು ಮುಚ್ಚಿಸಲಾಗಿದೆ. 2 ಲಕ್ಷದ 20 ಸಾವಿರ ದಂಡ ವಸೂಲು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಸಭೆಗೆ ಮಾಹಿತಿ ನೀಡಿದರು.