ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪೌರ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಿದರು.
ಈಗಾಗಲೇ ನವನಗರದಲ್ಲಿ 122 ನಿವೇಶನಗಳು ಕಾಯಂ ಪೌರಕಾರ್ಮಿಕರಿಗೆ ನೀಡಿದ್ದಾರೆ. ಅಲ್ಲದೇ ಮಂಟೂರ ರಸ್ತೆಯಲ್ಲಿ ಕಳೆದ 6 ವರ್ಷಗಳಿಂದ 320 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈವರೆಗೂ ಪೂರ್ಣಗೊಂಡಿಲ್ಲ. ಆದರೆ, ಸಮಾನ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಇತರೆ ಪೌರಕಾರ್ಮಿಕರಿಗೆ ವಸತಿ ಸೌಲಭ್ಯದಿಂದ ವಂಚಿಸಿ ತಾರತಮ್ಯ ಮಾಡಲಾಗುತ್ತಿದೆ. ಆದಷ್ಟು ಬೇಗನೆ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಸರ್ಕಾರದಿಂದ ಉಚಿತವಾಗಿ ಮನೆ ನಿರ್ಮಿಸಿಕೊಡುವ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿದರು. ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಡಾ.ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ದತ್ತಪ್ಪಾ ಆಪುಸಪೇಟ, ಲಕ್ಷ್ಮೀ ಬೇತಾಪಲ್ಲಿ, ರಾಜು ನಾಗರಾಳ, ಅನಿತಾ ಎನಗೊಂಡ, ಯಲ್ಲಪ್ಪ ಪಾಳೇದ, ರೇಣುಕಾ ನಾಗರಾಳ, ಕನಕಪ್ಪ ಕೊಟಬಾಗಿ, ಸುನೀಲ ದೊಡ್ಡಮನಿ, ಭಾಗ್ಯಲಕ್ಷ್ಮೀ ಮಾದರ ಮುಂತಾದರು ಉಪಸ್ಥಿತರಿದ್ದರು.