ಬೀದಿನಾಯಿಗಳಿಂದ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ: ವಿಶ್ವನಾಥ ಹೊಸಮನಿ

KannadaprabhaNewsNetwork |  
Published : Dec 12, 2025, 02:30 AM IST
ಮುಂಡರಗಿಯ ತಾಪಂ ಸಾಮರ್ಥ್ಯಸೌಧದಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ತಾಪಂ ಇಒ ವಿಶ್ವನಾಥ ಹೊಸಮನಿ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಜರುಗಿತು. | Kannada Prabha

ಸಾರಾಂಶ

ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಸಂಬಂಧಿಸಿದಂತೆ ಈಗಾಗಲೆ ಪುರಸಭೆಯಿಂದ ಕ್ರಮ ವಹಿಸಿದ್ದು, ₹4.95 ಲಕ್ಷ ವೆಚ್ಚದಲ್ಲಿ 300 ಬೀದಿನಾಯಿಗಳಿಗೆ ಈ ಚಿಕಿತ್ಸೆ ನೀಡುವುದಕ್ಕೆ ಆನ್‌ಲೈನ್ ಮೂಲಕ ಟೆಂಡರ್ ಕರೆಯಲಾಗಿದೆ.

ಮುಂಡರಗಿ: ಬೀದಿನಾಯಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ, ಗ್ರಾಪಂ, ಆರೋಗ್ಯ ಇಲಾಖೆ ಸೂಕ್ತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ಬುಧವಾರ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಬೇಕು. ಬೀದಿನಾಯಿಗಳಿಂದ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು. ನವೆಂಬರ್ ತಿಂಗಳಿನಲ್ಲಿ ತಾಲೂಕಿನಲ್ಲಿ ಒಟ್ಟು 147 ನಾಯಿ ಕಡಿತದ ಪ್ರಕರಣ ವರದಿಯಾಗಿದೆ.

2025ರ ಜನವರಿಯಿಂದ ನವೆಂಬರ್ ವರೆಗೂ ತಾಲೂಕಿನಲ್ಲಿ ಒಟ್ಟು 1173 ಜನರಿಗೆ ನಾಯಿ ಕಡಿದ ಪ್ರಕರಣ ಜರುಗಿದ್ದು, ಅದಕ್ಕೆ ಚಿಕಿತ್ಸೆ ಸಹ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಔಷಧ ಸಹ ಆರೋಗ್ಯ ಕೇಂದ್ರದಲ್ಲಿ ಲಭ್ಯವಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞೆ ಡಾ. ತಸ್ಮೀಯಾ ವಿವರಿಸಿದರು.

ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಸಂಬಂಧಿಸಿದಂತೆ ಈಗಾಗಲೆ ಪುರಸಭೆಯಿಂದ ಕ್ರಮ ವಹಿಸಿದ್ದು, ₹4.95 ಲಕ್ಷ ವೆಚ್ಚದಲ್ಲಿ 300 ಬೀದಿನಾಯಿಗಳಿಗೆ ಈ ಚಿಕಿತ್ಸೆ ನೀಡುವುದಕ್ಕೆ ಆನ್‌ಲೈನ್ ಮೂಲಕ ಟೆಂಡರ್ ಕರೆಯಲಾಗಿದೆ. ಒಂದು ನಾಯಿಗೆ ಚಿಕಿತ್ಸೆಗೆ ₹1,650 ಖರ್ಚಾಗುತ್ತದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ವಹಿಸಿದ್ದೇವೆ ಎಂದು ಪುರಸಭೆ ಸಿಬ್ಬಂದಿ ಯಾಕೂಬ್ ಹೇಳಿದರು.

ಬೀದಿನಾಯಿ ಕಡಿತದಿಂದ ಮೃತಪಟ್ಟರೆ ಅವರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಗಾಯಗೊಂಡರೆ ಚಿಕಿತ್ಸೆಗಾಗಿ ₹5 ಸಾವಿರ ಸಹಾಯಧನ ನೀಡಬೇಕು. ಪುರಸಭೆ ವ್ಯಾಪ್ತಿ ಇದ್ದರೆ ಪುರಸಭೆಯಿಂದ ಪರಿಹಾರ ನೀಡಬೇಕು. ಗ್ರಾಮೀಣ ಭಾಗದಲ್ಲಿದ್ದರೆ ಆಯಾ ಗ್ರಾಪಂಯವರು ನೀಡಬೇಕು. ಈ ಬಗ್ಗೆ ಕಾನೂನು ಸಹ ಇದೆ. ಸಾಕು ನಾಯಿಗಳಿಂದ ಇಂತಹ ಘಟನೆ ಸಂಭವಿಸಿದರೆ ಅದಕ್ಕೆ ಅದರ ಮಾಲೀಕರೆ ಹೊಣೆ. ಅಧಿಕಾರಿಗಳು ಬೀದಿನಾಯಿಗಳ ಹಾವಳಿ ತಪ್ಪಿಸುವುದಕ್ಕೆ ಮುಂದಾಗಬೇಕು ಎಂದು ಇಒ ವಿಶ್ವನಾಥ ಸೂಚನೆ ನೀಡಿದರು.

ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ವಿಜಯಕುಮಾರ ಬೆಣ್ಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ