ಕೊಪ್ಪಳ: ಕಂದಾಯಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಎಲ್ಲ ವಾರ್ಡ್ನ ಕರ ವಸೂಲಿಗಾರರು ಬಾಕಿ ಇರುವ ತೆರಿಗೆ ಪಟ್ಟಿ ಸಿದ್ಧಪಡಿಸಿ, ನಗರಸಭೆಯ ಆದಾಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಹೇಳಿದರು.
ಕರ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರುಗಳಿಗೆ ಕ್ರಮವಾಗಿ ನೋಟಿಸ್ ಜಾರಿ ಮಾಡಿ ಆಸ್ತಿ ಕರ ವಸೂಲಾತಿ ಮಾಡಬೇಕು. ಅದೇ ರೀತಿ ನೀರಿನ ಕರ ವಸೂಲಾತಿ, ಉದ್ದಿಮೆ ಪರವಾನಗಿ ಶುಲ್ಕ ವಸೂಲಾತಿ, ಉದ್ದಿಮೆ ಪರವಾನಗಿ ನವೀಕರಣ, ಜಾಹೀರಾತು ಶುಲ್ಕ ವಸೂಲಾತಿ, ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ಮಾಡಲು ಅಗತ್ಯ ಕ್ರಮವಹಿಸಬೇಕು. ನಗರದಲ್ಲಿರುವ ಎಲ್ಲ ಸಾರ್ವಜನಿಕ ಸ್ವತ್ತುಗಳಿಗೆ ಇ-ಖಾತಾ ತಂತ್ರಾಂಶದಲ್ಲಿ ಆಸ್ತಿಗಳ ಮಾಹಿತಿ ನಮೂದಿಸಲು ಪ್ರತಿ ಸೋಮವಾರ ವಾರ್ಡ್ಗಳಲ್ಲಿ ಶಿಬಿರ ಏರ್ಪಡಿಸಿ ದಾಖಲಾತಿ ಸಂಗ್ರಹಿಸಿಕೊಂಡು 500 ಆಸ್ತಿಗಳಿಗೆ ಗುರಿ ನಿಗದಿಪಡಿಸಬೇಕು. ಆಸ್ತಿಯ ಮಾಲೀಕರುಗಳು ಆಸ್ತಿ ತೆರಿಗೆ ಪಾವತಿ ಮಾಡಿದ ತೆರಿಗೆ ವಿವರ ಸ್ಥಾನಿಕವಾಗಿ ಪರಿಶೀಲನೆ ಮಾಡಿ ಜತೆಗೆ ಕಟ್ಟಡದ ವಿನ್ಯಾಸ ಸಹ ಪರಿಶೀಲನೆ ಮಾಡಿ ವ್ಯತ್ಯಾಸ ಕಂಡು ಬಂದಲ್ಲಿ ಅದನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ತಿಕರ ಆನ್ಲೈನ್ ಮುಖಾಂತರ ಪೇಮೆಂಟ್ ಮಾಡಲು ಹಾಗೂ ತಾಂತ್ರಿಕ ವಿಭಾಗದ ಕಿರಿಯ ಅಭಿಯಂತರರಿಗೆ ನಗರದಲ್ಲಿ ಅನಧೀಕೃತ ಕಟ್ಟಡಗಳ ನಿರ್ಮಾಣ, ಸಾರ್ವಜನಿಕ ದೂರು ಸಲ್ಲಿಸಲು ಸಹಾಯವಾಣಿಗಾಗಿ ವಾಟ್ಸ್ಆ್ಯಪ್ ನಂಬರ್ ಸಿದ್ದಪಡಿಸಲು ಅಗತ್ಯ ಕ್ರಮವಹಿಸಿ ಜತೆಗೆ ನಗರದಲ್ಲಿ ಸಮರ್ಪಕವಾಗಿ ಬೀದಿ ದೀಪಗಳ ವ್ಯವಸ್ಥೆಯ ಇರುವಂತೆ ನೋಡಿಕೊಳ್ಳಬೇಕು. ನಗರಸಭೆಯ ಆರೋಗ್ಯ ನಿರೀಕ್ಷಕರು ಮನೆ ಕಸ ಸಂಗ್ರಹಣೆಯ ಬಗ್ಗೆ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಶಾಲಾ ಕಾಲೇಜುಗಳಲ್ಲಿ ಐಇಸಿ ಕಾರ್ಯಕ್ರಮ ಹಮ್ಮಿಕೊಂಡು, ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಮಾಹಿತಿ ನೀಡಬೇಕು ಎಂದರು.ನಗರದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ತಯಾರಿಸುವ ಕಾಂಪೋಸ್ಟ್ ಗೊಬ್ಬರವನ್ನು 1 ಕೆಜಿ.,5 ಕೆಜಿ.,ಮತ್ತು 10 ಕೆಜಿ ಪ್ಯಾಕ್ ಮಾಡಿ, ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ನಗರಸಭೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಕೊಪ್ಪಳ ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರು ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.