ಹುಬ್ಬಳ್ಳಿ: ಪ್ಲೈಓವರ್ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಚೆನ್ನಮ್ಮ ಸರ್ಕಲ್ನಿಂದ ಹೊಸೂರು ಹಾಗೂ ನವಲಗುಂದ ರಸ್ತೆ ಬಳಿಯ ಕಾಮಗಾರಿಯನ್ನು 120 ದಿನದೊಳಗೆ ಪೂರ್ಣಗೊಳಿಸಲೇಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಡಕ್ ಸೂಚನೆ ನೀಡಿದರು.
2022 ರಿಂದ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿದೆ. ವಿಜಯಪುರ ರಸ್ತೆ ಕಡೆಗೆ 650 ಮೀ, ಗದಗ ರಸ್ತೆಯ ಬಳಿ 320 ಮೀ, ಚನ್ನಮ್ಮ ವೃತ್ತದಿಂದ ಹೊಸೂರ ವೃತ್ತದವರೆಗೂ 850 ಮೀ, ಗೋಕುಲ ರಸ್ತೆಯ ವಿಮಾನ ನಿಲ್ದಾಣ ಕಡೆಗೆ 600 ಮೀ.ಸೇರಿ ಒಟ್ಟು 3.10 ಕಿಮೀ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ ಎಂದರು.
120 ದಿನದೊಳಗೆ ಪೂರ್ಣಗೊಳಿಸಿ:ಸದ್ಯ ಕಾಮಗಾರಿ ನಡೆಯಲು ಸಂಚಾರ ನಿಯಂತ್ರಣ ಮಾಡುವ ಅಗತ್ಯವಿದೆ. ಹಾಗಾಗಿ ಕೆಲ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಕಾಮಗಾರಿ ನಡೆಸಬೇಕು. ಏ.20ರಿಂದ ಆಗಸ್ಟ್ 19ರವರೆಗೆ ಸಂಚಾರ ಬದಲಾವಣೆ ಮಾಡಿ ಕಾಮಗಾರಿ ನಡೆಸಬೇಕು. ಚನ್ನಮ್ಮ ವೃತ್ತದಿಂದ ಹೊಸೂರು ವೃತ್ತದ ವರೆಗೂ 850 ಮೀಟರ್ ಚನ್ನಮ್ಮ ವೃತ್ತದ ಆಯ್ದ ಭಾಗಗಳಲ್ಲಿ ಪಿಲ್ಲರ್ ಕಾಮಗಾರಿಗಳಿಗೆ ಬ್ಯಾರಿಕೇಡಿಂಗ್ ಮಾಡಿಕೊಳ್ಳಲು, ವಿಜಯಪುರ ರಸ್ತೆಯಲ್ಲಿ ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ವರೆಗೂ 150 ಮೀ ಸಿವಿಲ್ ಕಾಮಗಾರಿ ನಡೆಸಬೇಕು ಎಂದು ಸೂಚನೆ ನೀಡಿದರು.
ಈ ಎರಡು ಕಡೆಯ ಮೇಲ್ಸೇತುವೆ 120 ದಿನದೊಳಗೆ ಪೂರ್ಣಗೊಳಿಸಲೇಬೇಕು. ಅಲ್ಲಿನ ಮೇಲ್ಸೇತುವೆ ಅಷ್ಟೇ ಅಲ್ಲ. ಕೆಳಗಿನ ರಸ್ತೆ ಕೂಡ ಮುಗಿಯಲೇಬೇಕು. ಅಷ್ಟರೊಳಗೆ ಮುಗಿಯದಿದ್ದರೆ ಸರಿಯಿರಲಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.
ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಪರಿಶೀಲನೆ ನಡೆಸುವಂತೆ ಇದೇ ವೇಳೆ ಜಿಲ್ಲಾಧಿಕಾರಿಗಳು, ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ಧಾರವಾಡ ಗ್ರಾಮೀಣ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯುವ ನೀರು ಸರಬಾರಾಜು ಮಾಡುತ್ತಿರುವ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಪ್ರಹ್ಲಾದ ಜೋಶಿ, ಕುಡಿವ ನೀರಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಲ್ಆ್ಯಂಡ್ಟಿ ಅವರು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಕೆಲವೊಂದು ಪ್ರದೇಶಗಳಿಗೆ 8-10 ದಿನಗಳಿಗೊಮ್ಮೆ ನೀರು ಸರಬರಾಜು ಆಗುವಂತಾಗಿದೆ. ಸಮರ್ಪಕವಾಗಿ ನಿಭಾಯಿಸಿದರೆ 4-5 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬಹುದು ಎಂದು ಸೂಚಿಸಿದರು.
ಬೇಸಿಗೆ ಕಾಲದಲ್ಲಿ ಯಾವುದೇ ಕಾರಣದಿಂದ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನೀರಿನ ಅಭಾವ ಇದ್ದಲ್ಲಿ ಟ್ಯಾಂಕರ್ಗಳ ವ್ಯವಸ್ಥೆ ಮಾಡಬೇಕು. ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿ ಏ.10 ಇಲ್ಲವೇ 11ರಂದು ನಗರದಲ್ಲಿ ಮತ್ತೆ ಸಭೆ ಕರೆಯುವುದಾಗಿ ತಿಳಿಸಿದರು.