ನಾಳೆಗೆ.. ಕೊಬ್ಬರಿ ಬೆಂಬಲ ಬೆಲೆಯ ಶ್ರೇಯಸ್ಸು ಪಡೆಯುವುದು ನಾಚಿಕೆಗೇಡು: ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ.ಗೊಪಾಲಸ್ವಾಮಿ

KannadaprabhaNewsNetwork |  
Published : Jan 19, 2024, 01:46 AM IST
ಸಿಆರ್‌ಪಿ೧ಪೋಟೋಸುದ್ದಿ: ಚನ್ನರಾಯಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಿಧಾನಪರಿಷತ್ ಸದಸ್ಯ ಎಂ. ಎ. ಗೊಪಾಲಸ್ವಾಮಿ. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ರೈತರ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದೆ ಆದರೆ ಸ್ಥಳೀಯ ಶಾಸಕರಾದ ಡಾ.ಸಿ.ಎನ್.ಬಾಲಕೃಷ್ಣರವರೇ ಕೊಡಿಸಿದ ಹಾಗೆ ಪೋಸ್ ಕೊಡುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಂ. ಎ. ಗೊಪಾಲಸ್ವಾಮಿ ಲೇವಡಿ ಮಾಡಿದರು. ಚನ್ನರಾಯಪಟ್ಟಣ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ರೈತರ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದೆ ಆದರೆ ಸ್ಥಳೀಯ ಶಾಸಕರಾದ ಡಾ.ಸಿ.ಎನ್.ಬಾಲಕೃಷ್ಣರವರೇ ಕೊಡಿಸಿದ ಹಾಗೆ ಪೋಸ್ ಕೊಡುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಂ. ಎ. ಗೊಪಾಲಸ್ವಾಮಿ ಲೇವಡಿ ಮಾಡಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ನಾವು ಮತ್ತು ಶಾಸಕ ಶಿವಲಿಂಗೇಗೌಡರು ಜಿಲ್ಲೆಯ ರೈತರ ಪರವಾಗಿ ದೆಹಲಿಗೆ ಕೃಷಿ ಸಚಿವರಾದ ಕೃಷ್ಣಬೈರೇಗೌಡರ ಜೊತೆಗೂಡಿ ಕೇಂದ್ರ ಕೃಷಿ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ನಾಫೆಡ್ ಕೇಂದ್ರವನ್ನು ತೆರೆಯಲು ಮನವಿ ಮಾಡಿದ್ದೆವು. ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ತಾಲೂಕಿನ ಶಾಸಕ ದೆಹಲಿಯಲ್ಲಿ ಪೋಟೋ ತೆಗೆಸಿಕೊಂಡು ಬಂದು ಜನರಿಗೆ ಟೋಪಿ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರ ಮತ್ತು ಕೊಬ್ಬರಿ ಖರೀದಿ ಕೇಂದ್ರವನ್ನು ತೆರೆಯಲು ಅನೇಕ ಬಾರಿ ಅಧಿಕಾರಿಗಳೊಂದಿಗೆ ಹಾಗೂ ವಿಧಾನ ಪರಿಷತ್‌ನಲ್ಲಿ ಚರ್ಚಿಸಿದ್ದೆ. ಶಾಸಕರು ಕೊಬ್ಬರಿಯಲ್ಲಿ ರಾಜಕೀಯ ಮಾಡದೆ ನಿಜವಾದ ರೈತರಿಗೆ ಕೊಬ್ಬರಿ ಹಣ ಕೊಡಿಸುವಲ್ಲಿ ಕೆಲಸ ಮಾಡಲಿ ಕೇವಲ ತಮ್ಮ ರಾಜಕೀಯ ಬೆಂಬಲಿಗರನ್ನು ಇಟ್ಟುಕೊಂಡು ದಲ್ಲಾಳಿ ಕೆಲಸ ಮಾಡುವುದನ್ನು ಬಿಡಬೇಕು. ಜ.೨೦ರಂದು ನಾಫೆಡ್ ಕೇಂದ್ರಕ್ಕೆ ಭೇಟಿ ನೀಡುತ್ತೇವೆ. ಈಬಾರಿ ರೈತರಿಗೆ ಯಾವುದೇ ಸಮಸ್ಯೆಗಳಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ, ಅಧಿಕಾರಿಗಳು ನಾಫೆಡ್ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಶಾಸಕರ ಸ್ವಗ್ರಾಮದಲ್ಲೇ ಕಳೆದ ೩೦ ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಚುನಾವಣೆ ನಡೆದಿಲ್ಲ ಎಂದು ತಮ್ಮ ಗ್ರಾಮದವರೇ ಆರೋಪಿಸಿದ್ದಾರೆ, ಶಾಸಕರಾದವರು ಡೈರಿ ಅಧ್ಯಕ್ಷರಾಗಿ ಕೆಲಸ ಮಾಡುವುದು ಅಂದರೆ ಏನು ಅರ್ಥ? ರಾಜ್ಯದ ಯಾವ ತಾಲೂಕಿನಲ್ಲೂ ಈ ಸ್ಥಿತಿ ಇಲ್ಲ, ಅದರಲ್ಲೂ ಚುನಾವಣೆ ನಡೆದಿದೆ ಎಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿರುವುದು ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರುಗಳೇ ಪ್ರತಿಭಟನೆ ನಡೆಸಿರುವುದು ಜಿಲ್ಲೆಗೆ ಗೊತ್ತಾಗಿದೆ ಎಂದು ಹೇಳಿದರು.

‘ಯಾರು ಪ್ರಶ್ನೆ ಮಾಡುತ್ತಾರೆ ಅವರನ್ನು ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡಿ ಗೂಂಡಾಗಿರಿ ಮಾಡುತ್ತಾರೆ. ಡೈರಿ ಚುನಾವಣೆಗಳನ್ನು ಅಧಿಕಾರಿಗಳು ಸರಿಯಾಗಿ ನಡೆಸಬೇಕು, ಸ್ಥಳೀಯ ಶಾಸಕರಾಗಿ ತಮ್ಮ ಗ್ರಾಮದ ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ಇದುವರೆಗೂ ಯಾವ ಅನುದಾನವು ನೀಡಿಲ್ಲ. ಲೆಕ್ಕಪತ್ರಗಳನ್ನು ನೀಡಿಲ್ಲ. ತಾಲೂಕಿನಲ್ಲಿ ಈಗಾಗಲೇ ಹಡೇನಹಳ್ಳಿ, ಜೊಗೀಪುರ, ತಗಡೂರು ಗ್ರಾಮಗಳಲ್ಲಿ ಬಹಿರಂಗವಾಗಿ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. ಇದೆಲ್ಲಾ ನೋಡಿದರೆ ಹಾಲು ಉತ್ಪಾದಕರ ಸಂಘಗಳು ಮುಕ್ತವಾಗಿ ಚುನಾವಣೆ ನಡೆದರೆ ನಿಜವಾದ ರೈತರಿಗೆ ನ್ಯಾಯ ದೊರಕುತ್ತದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಎ. ಮಂಜೇಗೌಡ, ಮಾಜಿ ಅಧ್ಯಕ್ಷ ಮೂರ್ತಿ, ಗುಲಸಿಂದ ಶಿವರಾಜು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಪುಟ್ಟಣ್ಣ, ಜಗದೀಶ್ ಮತ್ತಿತರಿದ್ದರು.ಚನ್ನರಾಯಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಿಧಾನಪರಿಷತ್ ಸದಸ್ಯ ಎಂ. ಎ. ಗೊಪಾಲಸ್ವಾಮಿ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ