(ಶಾಸಕ ಶ್ರೀನಿವಾಸ್ ಫೋಟೊ ಮಾತ್ರ ಬಳಸಿ)
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮುಖ್ಯಮಂತ್ರಿ ಬದಲಾವಣೆ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ ಐದು ಶಾಸಕರ ಪೈಕಿ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನದೊಂದಿಗೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ದೊರೆಯಲಿದೆಯೇ ಎಂಬ ಚರ್ಚೆ ಇದೀಗ ಜಿಲ್ಲೆಯಲ್ಲಿ ಶುರುವಾಗಿದೆ. ಅದರಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ 2ನೇ ಬಾರಿ ಆಯ್ಕೆಯಾಗಿರುವ ಶಾಸಕ ಜಿ.ಎಚ್. ಶ್ರೀನಿವಾಸ್ ಮುಂಚೂಣಿಯಲ್ಲಿರುವ ಪ್ರಬಲ ಆಕಾಂಕ್ಷಿಯಾಗಿದ್ದಾರೆ.2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಐದಕ್ಕೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರೂ ಯಾರೊಬ್ಬರಿಗೂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿರಲಿಲ್ಲ. ಹೀಗಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗಿತ್ತು.
ಇನ್ನು ಸಮುದಾಯದ ಲೆಕ್ಕಾಚಾರದಲ್ಲಿಯೂ ಮೂರು ಸಚಿವ ಸ್ಥಾನಗಳನ್ನು ಕುರುಬ ಸಮುದಾಯಕ್ಕೆ ನೀಡಲಾಗುತ್ತಿದೆ. ಈ ಪೈಕಿ ಶ್ರೀನಿವಾಸ್ ಅವರಿಗೂ ಸ್ಥಾನ ದೊರೆಯುವ ಅವಕಾಶ ಹೆಚ್ಚಾಗಿದೆ. ಅದಕ್ಕಿಂತ ಮುಖ್ಯವಾಗಿ 2 ಬಾರಿ ಶಾಸಕರಾದ ಸಮಯದಲ್ಲೂ ಕಳಂಕ ಮುಕ್ತ ಕಾರ್ಯ ನಿರ್ವಹಣೆಯಿಂದ ಶ್ರೀನಿವಾಸ್ ಅವರ ಮೇಲೆ ಒಲವು ಹೆಚ್ಚಾಗುವುದಕ್ಕೆ ಕಾರಣವಾಗಿದೆ.ಶೃಂಗೇರಿ ಕೇಸ್, ಶ್ರೀನಿವಾಸ್ ಪ್ರಬಲ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರದ ಜಿ.ಎಚ್.ಶ್ರೀನಿವಾಸ್ ಹಾಗೂ ಶೃಂಗೇರಿ ಕ್ಷೇತ್ರದ ಟಿ.ಡಿ.ರಾಜೇಗೌಡ ತಲಾ ಎರಡು ಬಾರಿ ಶಾಸಕರಾಗಿ ಗೆದ್ದಿದ್ದಾರೆ. ಇನ್ನುಳಿದಂತೆ ಚಿಕ್ಕಮಗಳೂರು ಕ್ಷೇತ್ರದ ಎಚ್.ಡಿ.ತಮ್ಮಯ್ಯ, ಕಡೂರು ಕ್ಷೇತ್ರದ ಕೆ.ಎಸ್.ಆನಂದ್ ಹಾಗೂ ಮೂಡಿಗೆರೆ ಕ್ಷೇತ್ರದ ನಯನಾ ಮೋಟಮ್ಮ ಮೊದಲ ಬಾರಿಗೆ ಶಾಸರಾಗಿ ಆಯ್ಕೆಯಾಗಿದ್ದಾರೆ.ಹೀಗಾಗಿ, ಸಚಿವ ಸಂಪುಟ ಪುನಾರಚನೆ ವೇಳೆ ಮೊದಲ ಆದ್ಯತೆಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆ ಯಾದವರನ್ನೇ ಪರಿಗಣಿಸಲಾಗುತ್ತದೆ. ಈ ಪಟ್ಟಿಯಲ್ಲಿ ಮೊದಲ ಹೆಸರು ಶ್ರೀನಿವಾಸ್ ಅವರದಾಗಿದೆ. ಕಾರಣ ಟಿ.ಡಿ.ರಾಜೇಗೌಡ ಅವರ ಶಾಸಕತ್ವವೇ ತೂಗುಯ್ಯಾಲೆಯಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ರಾಜೇಗೌಡ ಅವರ ವಿರುದ್ಧ ತೀರ್ಪು ಬಂದಿದ್ದೇ ಆದಲ್ಲಿ ಶಾಸಕತ್ವವೇ ಹೋಗಲಿದೆ. ಜತೆಗೆ, ಈಗಾಗಲೇ ಟಿ.ಡಿ. ರಾಜೇಗೌಡ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ, ತರೀಕೆರೆ ಶ್ರೀನಿವಾಸ್ ಮೊದಲ ಆದ್ಯತೆ ಎನ್ನಲಾಗುತ್ತಿದೆ.
ತರೀಕೆರೆ ವಿಧಾನಸಭಾ ಕ್ಷೇತ್ರದಿಂದ 2013 ಹಾಗೂ 2023ರಲ್ಲಿ ಕಾಂಗ್ರೆಸ್ನಿಂದ ಗೆದ್ದ ಶ್ರೀನಿವಾಸ್ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಅವರಿಗೆ 2018ರ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನೀಡುವುದಿಲ್ಲ. ಹೀಗಾಗಿ, ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಟಿಕೆಟ್ ನೀಡಿದ್ದರೆ ತರೀಕೆರೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸುತ್ತಿತ್ತು ಎಂಬ ಮಾತುಗಳು ಈಗಲೂ ಕೇಳಿ ಬರುತ್ತಿವೆ. ಈ ಎಲ್ಲ ಕಾರಣದಿಂದ ಡಿ.ಕೆ.ಶಿವಕುಮಾರ್ ಅವರ ನೂತನ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುವ ಅವಕಾಶ ಹೆಚ್ಚಾಗಿದೆ.
ಜಿಲ್ಲೆಯ ಹಿರಿಯ ಶಾಸಕನಾಗಿದ್ದೇನೆ. ಕಳಂಕ ಮುಕ್ತವಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ, ಪಕ್ಷದ ಮುಖಂಡರು ಮತ್ತು ಹೈಕಮಾಂಡ್ ಸಚಿವ ಸ್ಥಾನ ನೀಡುವ ಬಲವಾದ ವಿಶ್ವಾಸವಿದೆ. ಯಾವುದೇ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ.
--- ಬಾಕ್ಸ್--
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೂಡಿಗೆರೆ ಕ್ಷೇತ್ರದಲ್ಲಿ ನಯನಾ ಮೋಟಮ್ಮ ಆಯೋಜಿಸಿದ್ದ ಸಮಾರಂಭದಲ್ಲಿ ಬಹಿರಂಗ ಸಭೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲೆಯ ಶಾಸಕರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಒತ್ತಾಯಿಸುತ್ತೇನೆ ಎಂದು ಹೇಳಿದ್ದರು. ಹೀಗಾಗಿ, ಈ ಬಾರಿ ಜಿಲ್ಲೆಯ ಶಾಕರಿಗೆ ಸಚಿವ ಸ್ಥಾನದ ಸಿಗಲಿದೆ ಎಂಬ ಆಶಾ ಭಾವನೆ ಜಿಲ್ಲೆಯ ಜನರಲ್ಲಿ ಇದೆ.
2013-2023ರಲ್ಲಿ ಕಾಂಗ್ರೆಸ್ ಶಾಸಕರು ಸಚಿವರಾಗಿಲ್ಲ
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಗೀರ್ ಅಹಮದ್, ಡಿ.ಬಿ.ಚಂದ್ರೇಗೌಡ ಹಾಗೂ ಮೋಟಮ್ಮ ಸಚಿವರಾಗಿದ್ದು ಬಿಟ್ಟರೆ ಬಳಿಕ ಕಾಂಗ್ರೆಸ್ನಿಂದ ಶಾಸಕರಾದ ಯಾರಿಗೂ ಸಚಿವರಾಗುವ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್ 2013 ಮತ್ತು 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಜಿಲ್ಲೆಯ ಯಾವುದೇ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಧಾನ ಜಿಲ್ಲೆಯ ಜನರಲ್ಲಿದೆ.