ಕನ್ನಡಪ್ರಭ ವಾರ್ತೆ ವಿಜಯಪುರ
ಕೈವಾರ ತಾತಯ್ಯನವರು ತಮ್ಮ ಆಧ್ಯಾತ್ಮಕತೆಯಿಂದ ಸಮಾಜದ ಕಣ್ಣುಗಳಾಗಿ ಜಗಕ್ಕೆ ಸನ್ಮಾರ್ಗ ತೋರಿದ ಮಹಾನ್ ಯತಿಗಳಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸತ್ಪುರುಷರ ಬೋಧನೆ, ತತ್ವಸಿದ್ಧಾಂತಗಳು ಮಾನವ ಒಳಿತಿಗಾಗಿ ಬಿಟ್ಟು ಹೋದ ಅವರ ಚಿಂತನೆಗಳು ನಮಗೆ ಆದರ್ಶಪ್ರಾಯವಾಗಿವೆ. ಜಿಡ್ಡು ಹಿಡಿದ ಸಮಾಜವನ್ನು ತಿದ್ದಿ ತೀಡಿ ಶುದ್ಧಗೊಳಿಸಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಧಾರೆ ಎರೆದಿದ್ದಾರೆ. ಸಮಸಮಾಜವನ್ನು ನಿರ್ಮಿಸಿ ಎಲ್ಲ ಮಾನವ ಕುಲ ಒಂದೇ ಎಂದು ಪ್ರತಿಪಾದಿಸಿದ ಮಹಾನ ದಾರ್ಶನಿಕರಾಗಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ನಾವುಗಳು ಸಾಗಬೇಕಿದೆ ಎಂದು ತಿಳಿಸಿದರು.
ಅನಕ್ಷರತೆ, ಮೂಡನಂಬಿಕೆಗಳು ನಾಗರಿಕ ಸಮಾಜವನ್ನು ಹಿನ್ನಡೆಯತ್ತ ಕೊಂಡೊಯುತ್ತವೆ. ಇವುಗಳಿಂದ ಹೊರಬಂದು ಜ್ಞಾನಾರ್ಜನೆಯಲ್ಲಿ ತೊಡಗಿ ಸಮಾಜವನ್ನು ಮುನ್ನಡಿಸಬೇಕು ಎಂದು ಕೈವಾರ ತಾತಯ್ಯನವರು ತಮ್ಮ ಗೀತೆ, ವಚನಗಳಲ್ಲಿ ಸಾರಿದರು. ಸಾಧು ಸತ್ಪರುಷರು, ಶರಣರು ಮತ್ತು ದಾರ್ಶನಿಕರ ನುಡಿಗಳು ಇಂದಿಗೂ ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ಮತ್ತು ವಿಚಾರವಂತರನ್ನಾಗಿ ಮಾಡುವ ಮೂಲಕ ನೈತಿಕ ಪ್ರಜ್ಞೆಯನ್ನು ಅರಳಿಸುವ ನಿಟ್ಟಿನಲ್ಲಿ ಮಹನೀಯರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.ಕನ್ನಡನಾಡು ನಡೆಗೆ ಅನುಪಮ ಸೇವೆ ಸಲ್ಲಿಸಿದ ಮತ್ತು ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ ಮಹನೀಯರನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ಹಾಗೂ ಅವರ ವಿಚಾರಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಜನಮಾಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಜಯಂತಿ ಆಚರಣೆ ಮಹತ್ವದ್ದಾಗಿವೆ ಎಂದು ಹೇಳಿದರು.
ಉಪನ್ಯಾಸಕ ಕಾಶಿನಾಥ ಕೋಣೆನವರ ವಿಶೇಷ ಉಪನ್ಯಾಸ ನೀಡಿ, ಕೈವಾರ ತಾತ್ಯಯನವರು ಭೂಮಿ ಮೇಲಿನ ಕಂದಾಚಾರ ತೊಲಗಿಸಿ ಆಧ್ಯಾತ್ಮಿಕತೆಯನ್ನು ಬಿತ್ತಲು ಹುಟ್ಟಿಬಂದವರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವ ಗೀತೆಗಳನ್ನು ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ)ಅವರು ರಚಿಸಿದರು. ಮಾನವ ಜನಾಂಗಕ್ಕೆ ಸನ್ಮಾರ್ಗ ತೋರುತ್ತ ಕೈವಾರ ತಾತಯ್ಯನವರು ರಚಿಸಿದ ಕಾಲಜ್ಞಾನ ಇಂದಿನ ಕಾಲಕ್ಕೂ ಪ್ರಸ್ತುತವಾಗಿದೆ. ಇಂತಹ ಮಹನೀಯರ ಜಯಂತಿ ಆಚರಣೆಗಳ ಮೂಲಕ ಅವರ ವಿಚಾರಗಳನ್ನು ಪುನರ್ಮನನ ಮಾಡಿ ಜನರಿಗೆ ತಿಳಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.ಜಿಪಂ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ಡಿವೈಎಸ್ಪಿ ಡಿ.ಎಸ್.ಧನಗರ, ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್ ಸೌದಾಗರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಖಜಾನೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.