ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರಿ ಶಾಲಾ ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳಿದ್ದರೆ ಆ ಶಿಕ್ಷಕರು ಉತ್ತಮ ಸೇವೆ ನೀಡಿದ್ದಾರೆ ಎನ್ನುವುದು ಜನತೆಗೆ ತಿಳಿಯಲಿದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೇಗೌಡ ತಿಳಿಸಿದರು.ತಾಲೂಕಿನ ಗುಲಸಿಂದ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲೇಗೌಡರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರನ್ನು ವಿದ್ಯಾರ್ಥಿಗಳು ಜೀವಿತಾವಧಿಯಲ್ಲಿ ನೆನಪು ಮಾಡಿಕೊಳ್ಳುತ್ತಾರೆ, ಇದನ್ನು ಮನಗಂಡು ಶಿಕ್ಷಕರು ತಮ್ಮ ಸೇವೆ ನೀಡಬೇಕು. ಈ ನಿಟ್ಟಿನಲ್ಲಿ ಮಲ್ಲೇಗೌಡರ ಸೇವೆ ಅವಿರತವಾದುದ್ದು ಎಂದು ಹೇಳಿದರು.
ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮೇಲೆ ಆ ವ್ಯಕ್ತಿಗೆ ಜನತೆಯಿಂದ ಗೌರವ ದೊರೆಯುವುದು ಕಡಿಮೆ. ಆದರೆ ಶಿಕ್ಷಣ ವೃತ್ತಿಯಿಂದ ನಿವೃತ್ತಿಯಾದರೆ ಆತ ಬದುಕಿರುವವರೆಗೂ ಆತನಿಗೆ ಗೌರವ ದೊರೆಯುತ್ತದೆ, ಇಂತಹ ಸೇವೆಯನ್ನು ಮಾಡುವ ಭಾಗ್ಯ ಶಿಕ್ಷಕರದ್ದಾಗಿದೆ, ಆದರೆ, ಕೆಲವರು ಮಾಡುವ ತಪ್ಪಿಗೆ ಅವರು ನಿವೃತ್ತಿ ಬದುಕಿನಲ್ಲಿಯೂ ಸಾಕಷ್ಟು ತೊಂದರೆ ಅನುಭವಿಸುತ್ತಾರೆ ಎಂದರು.ಶಿಕ್ಷಕರು ತಮ್ಮ ವೃತ್ತಿ ಜೀವನದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಾಗ ಅವರ ಆತ್ಮಕ್ಕಾದರೂ ಮಾಡಿರುವ ಸೇವೆ ಸರಿ ಎನ್ನಿಸಬೇಕು. ವೃತ್ತಿ ಮಾಡುವಾಗ ಸಂಘಟನೆ ಮಾಡಿಕೊಂಡು ನಿವೃತ್ತಿಯಾದ ಮೇಲೆ ಮಕ್ಕಳಿಗೆ ಮಾಡಿದ ತಪ್ಪು ಅರಿವಾಗುತ್ತದೆ, ಇದನ್ನು ಅರಿತು ಸೇವೆಯ ವೇಳೆಯಲ್ಲಿ ಶಿಕ್ಷಕನ ಬೋಧನೆ ಮಾಡುವುದು ಒಳಿತು, ಒರ್ವ ಪ್ರಾಥಮಿಕ ಶಿಕ್ಷಕ ತಪ್ಪು ಮಾಡಿದರೆ ಕೇವಲ ಒಂದು ಕುಟುಂಬಕ್ಕೆ ತೊಂದರೆಯಾಗುವುದಿಲ್ಲ, ಬದಲಾಗಿ ಸಾಕಷ್ಟು ಕುಟುಂಬಗಳ ನೆಮ್ಮದಿ ಹಾಳಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಮಾತನಾಡಿ, ನಿವೃತ್ತಿ ಸಮಯ ಸಮೀಪಿಸುವಾಗ ಪ್ರತಿಯೊಬ್ಬ ಶಿಕ್ಷಕನಿಗೂ ಸಾಕಷ್ಟು ನೋವಾಗುತ್ತದೆ, ಒಂಟಿತನ ಕಾಡುತ್ತದೆ. ಆದ್ದರಿಂದ ನಿವೃತ್ತಿ ಬದುಕಿನಲ್ಲಿಯೂ ಶಿಕ್ಷಕರು ಇತರ ಚಟುವಟಿಕೆಯಲ್ಲಿ ತೊಡಗಿಕೊಂಡು ನೆಮ್ಮದಿ ಬದುಕು ಕಟ್ಟಿಕೊಳ್ಳಲಿ ಎಂದು ಹೇಳಿದರು.ಶಿಕ್ಷಣ ಇಲಾಖೆಯಲ್ಲಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಗುಲಸಿಂದ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮಲ್ಲೇಗೌಡರನ್ನು ಗ್ರಾಮಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ಶಿಕ್ಷಣ ಸಂಘಟನೆ ಪದಾಧಿಕಾರಿಗಳು ಅಭಿನಂದಿಸಿದರು.
ಗ್ರಾಪಂ ಸದಸ್ಯರಾದ ಉಮೇಶ್, ಶ್ವೇತಾ ಮಂಜುನಾಥ್, ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ, ಟಿಎಪಿಸಿಎಂಎಸ್ ನಿರ್ದೇಶಕ ಜಗದೀಶ್, ಕಸಾಪ ತಾಲುಕು ಉಪಾಧ್ಯಕ್ಷ ಶಾಮಸುಂದರ್, ಕಾರ್ಯದರ್ಶಿ ಗೋವಿಂದರಾಜ್, ಜಂಟಿ ಕಾರ್ಯದರ್ಶಿ ಜಬ್ಬಿಉಲ್ಲಾ, ಸರ್ಕಾರಿ ನೌಕರರ ಕಾರ್ಯದರ್ಶಿ ಕಾಳೇಗೌಡ, ಖಜಾಂಚಿ ಕೃಷ್ಣೇಗೌಡ, ನಿರ್ದೇಶಕರಾದ ಪ್ರಮೋದ್, ರಂಗಸ್ವಾಮಿ, ಬಾಬು, ಜಿಲ್ಲಾ ನೌಕರ ಸಂಘದ ಉಪಾಧ್ಯಕ್ಷ ಪಾರ್ಥೇಶ್, ಪ್ರಾಥಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಕಾಳೇಗೌಡ, ಸರ್ಕಾರ ನೌಕರರ ಗೃಹ ಮಂಡಳಿ ಜಿಲ್ಲಾ ಉಪಾಧ್ಯಕ್ಷ ಹಿರಿಯಣ್ಣ, ಡಿಡಿಪಿಐ ಕೃಷ್ಣೇಗೌಡ, ನಿವೃತ್ತ ಡಿಡಿಪಿಐಗಳಾದ ಶಂಕರ್, ನರಸಿಂಹಯ್ಯ ಇದ್ದರು.