ಧಾರವಾಡ:
ನಗರದ ಹೋಮಿಯೋಪಥಿ ಸೆಮಿನಾರ್ ಹಾಲ್ನಲ್ಲಿ ನಡೆದ ಕಾರ್ಯಕ್ರಮವನ್ನು ಯುಕೆಟಿ ಮಂಗಳೂರು ಟ್ರಸ್ಟಿ ಅಶ್ವಿನಿ ಎನ್. ನಾಯಕ ಉದ್ಘಾಟಿಸಿ, ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲೇ ರೂಪುಗೊಳ್ಳುತ್ತದೆ ಎಂದು ಅನೇಕ ಮಹನೀಯರು ಹೇಳಿದ್ದಾರೆ. ಆ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರ ಕೈಯಲ್ಲಿದೆ. ಆದ್ದರಿಂದ ಶಿಕ್ಷಕರನ್ನು ಸದೃಢ, ಸೃಜನಾತ್ಮಕ ಹಾಗೂ ಆತ್ಮವಿಶ್ವಾಸಿ ವ್ಯಕ್ತಿಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಪಾಲಿಕೆಯ ಸಭಾನಾಯಕ ಈರೇಶ ಅಂಚಟಗೇರಿ ಮಾತನಾಡಿ, ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತವಾಗದೇ, ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ಗುಣ ಹಾಗೂ ಸೃಜನಾತ್ಮಕ ಚಿಂತನೆ ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ. ಇಂತಹ ಅಭಿಮುಖೀಕರಣ ಕಾರ್ಯಕ್ರಮಗಳು ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದರು.ರಾಜೀವ್ ಗಾಂಧಿ ಸಿಬಿಎಸ್ಇ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕಾರ್ಯದರ್ಶಿ ಎಸ್. ರಾಧಾಕೃಷ್ಣನ್ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ಜಿ. ಹಿರೇಮಠ ಇದ್ದರು. ಮುಖ್ಯ ಉಪನ್ಯಾಸಕರಾಗಿ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ಕ್ರಿಯಾ ಸಮಿತಿ ಸದಸ್ಯರಾದ ವೇದವತಿ ಪುರೋಹಿತ್ ಶಿಕ್ಷಕರ ಅಭಿವೃದ್ಧಿ, ಬೋಧನಾ ವಿಧಾನಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಕುರಿತು ಉಪನ್ಯಾಸ ನೀಡಿದರು. ಪ್ರಾಂಶುಪಾಲರಾದ ವೀಣಾ ತುಪ್ಪದ, ಡಾ. ಗ್ರೆಟ್ಟಾ ಕೆ., ಡಾ. ಆನಂದ ಹೊಸೂರ ಹಾಗೂ ಮಧುಮತಿ ಗುರವ ಇದ್ದರು.