ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ

KannadaprabhaNewsNetwork | Published : Apr 18, 2025 12:35 AM

ಸಾರಾಂಶ

ಗುರುವಿನ ಬಗ್ಗೆ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಪೂರ್ವಗ್ರಹ ಪೀಡಿತರಾಗದೇ ಎಲ್ಲರನ್ನೂ ಗೌರವಿಸಿರುವುದು ಆದರ್ಶ ವ್ಯಕ್ತಿತ್ವದ ಮಾದರಿ

ಶಿಗ್ಗಾಂವಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿಗಳಿವೆ ಎಂದು ಸಾಹಿತಿ ಬ.ಫ. ಯಲಿಗಾರ ತಿಳಿಸಿದರು.

ಪಟ್ಟಣದ ಮಾಮಲೆದೇಸಾಯಿ ಪ್ರೌಢಶಾಲೆಯಲ್ಲಿ ಜರುಗಿದ ೧೯೮೫- ೮೬ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಸಜ್ಜನರ ನಿರ್ಮಾಣದಲ್ಲಿ ತಾಯಿ ಮೊದಲ ಗುರುಗಳಾದರೆ ನಂತರದ ಸ್ಥಾನ ವಿದ್ಯೆ ಕಲಿಸಿದ ಗುರುಗಳದ್ದು. ಸದೃಢ ದೇಶ ನಿರ್ಮಾಣದಲ್ಲಿ ಗುರುಗಳು ಅತ್ಯಂತ ನಿರ್ಣಾಯಕ. ಈ. ಹಿನ್ನೆಲೆ ತಮ್ಮ ಗುರುಗಳನ್ನು ಮತ್ತು ಸಹಪಾಠಿಗಳನ್ನು ಮತ್ತೊಮ್ಮೆ ಕೂಡುವ ಇಂಥ ಕಾರ್ಯಕ್ರಮ ಪ್ರೇರಣಾದಾಯಕ ಎಂದರು.

ನಿವೃತ್ತ ಶಿಕ್ಷಕ ಪಿ.ಎಸ್. ಯಲಿಗಾರ ಮಾತನಾಡಿ, ಇದೊಂದು ಪವಿತ್ರ ದಿನ. ನಲವತ್ತು ವರ್ಷಗಳ ಬಳಿಕ ಮತ್ತೆ ಸೇರಿರುವುದು ಧನ್ಯತೆಯ ಕ್ಷಣ. ಗುರುವಿನ ಬಗ್ಗೆ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಪೂರ್ವಗ್ರಹ ಪೀಡಿತರಾಗದೇ ಎಲ್ಲರನ್ನೂ ಗೌರವಿಸಿರುವುದು ಆದರ್ಶ ವ್ಯಕ್ತಿತ್ವದ ಮಾದರಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ ದ್ಯಾವಪ್ಪನವರ, ನಮ್ಮ ಸಹಪಾಠಿ ಸ್ನೇಹಿತರನ್ನು ಮತ್ತೊಮ್ಮೆ ಒಗ್ಗೂಡಿಸುವ ಪ್ರಯತ್ನವನ್ನು ಕಳೆದ ಐದು ತಿಂಗಳಿಂದ ಮಾಡಿದೆವು. ಅದಕ್ಕಾಗಿ ವಾಟ್ಸ್‌ಆ್ಯಪ್ ಗ್ರುಪ್ ರಚಿಸಿ, ಜವಾಬ್ದಾರಿ ಹಂಚಿದೆವು. ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ಆದರೂ ನಮ್ಮ ಸೇವೆ ಮುಂದುವರಿಯುತ್ತದೆ ಎಂದರು.

ಹಳೆಯ ವಿದ್ಯಾರ್ಥಿಗಳ ಪೈಕಿ ಚಂದ್ರಕಾಂತ ಪೋಕಳೆ, ಯಲ್ಲಪ್ಪ ಉಪ್ಪಿನ, ಗೀತಾ ಹೂಗಾರ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ದತ್ತಣ್ಣ ವೆರ್ಣೇಕರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಪಿ. ಜೋಶಿ, ಆರ್.ಎಸ್. ಸಿಂಧೂರ, ಕೆ.ಡಿ. ಪಾಟೀಲ, ಎಲ್.ಜಿ. ಕಾಂಗೋ, ಬಿ.ಡಿ. ಚಾರಿ, ಸಿ.ಎಸ್. ಸುರಗಿಮಠ, ನಾಗೇಂದ್ರಪ್ಪ ಕಮ್ಮಾರ, ಜಿ.ಎನ್. ಯಲಿಗಾರ, ಆರ್.ಎಸ್. ಭಟ್, ಕೆ.ಬಿ. ಚನ್ನಪ್ಪ, ಜಯಣ್ಣ ಹೆಸರೂರ, ರಾಜು ಮಾಮಲೆದೇಸಾಯಿ ಉಪಸ್ಥಿತರಿದ್ದರು. ಆರ್.ಸಿ. ಹಿರೇಮಠ ಹಾಗೂ ವಿನೋದಾ ಪಾಟೀಲ ನಿರೂಪಿಸಿದರು. ಎಂ.ಎಚ್. ಬೆಂಡಿಗೇರಿ ಸ್ವಾಗತಿಸಿದರು. ಶಿವಾನಂದ ಕುನ್ನೂರ ವಂದಿಸಿದರು.

ಹೈಸ್ಕೂಲ್ ದಿನಗಳಲ್ಲಿ ನಮ್ಮ ಗುರುಗಳು ಸಾಧನೆಗೆ ಪ್ರೇರೇಪಿಸುತ್ತಿದ್ದರು. ಅವರ ಒತ್ತಾಸೆ ಹಾಗೂ ನಮ್ಮ ಪ್ರಯತ್ನದ ಫಲವಾಗಿ ನಾವು ಉನ್ನತ ಸ್ಥಾನ ಅಲಂಕರಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ ಹೇಳಿದರು.

Share this article