ಗದಗ: ಪಂಡಿತ ಜವಾಹರಲಾಲ್ ನೆಹರು ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಬ್ಬರ ಕೊಡುಗೆ ಅನನ್ಯ. ಮಾಜಿ ಪ್ರಧಾನಿ ನೆಹರೂ ಅವರು ತಮ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಬಯಸಿದರು. ಅದೇ ರೀತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ತಿಳಿಸುವ ಮೂಲಕ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಹರ ವಲಯದ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಪೋಷಕರು, ಶಿಕ್ಷಕರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ನಾಳೆಯನ್ನು ಕಾಣುವವರು ನಾವುಗಳಾದರೆ ಮಕ್ಕಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಹೊತ್ತವರು ಶಿಕ್ಷಕರು. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳಿಗೆ ತಿದ್ದಿ ತೀಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಇಂದು ನಾವೆಲ್ಲ ಇಲ್ಲಿ ಸೇರಿರುವುದಕ್ಕೆ ಕಾರಣ ಮಕ್ಕಳ ದಿನಾಚರಣೆ ಹಾಗೂ ಪಾಲಕರ ಶಿಕ್ಷಕರ ಮಹಾಸಭೆ. ಮಕ್ಕಳ ಹಕ್ಕುಗಳಿಗೆ ಅವರ ಕನಸುಗಳಿಗೆ ಗೌರವ ನೀಡುವ ದಿನ. ಈ ವಿಶೇಷ ದಿನವನ್ನು ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಆಚರಿಸುತ್ತೇವೆ. ನೆಹರೂಜಿ ಮಕ್ಕಳನ್ನು ಮನಸಾರೆ ಪ್ರೀತಿಸುತ್ತಿದ್ದರು. ಮಕ್ಕಳ ಖುಷಿಯಲ್ಲಿ ರಾಷ್ಟ್ರದ ಭವಿಷ್ಯ ಅಡಗಿದೆ ಎಂದು ಪದೇ ಪದೇ ಹೇಳುತ್ತಿದ್ದರು. ಅದಕ್ಕಾಗಿಯೇ ಮಕ್ಕಳು ಅವರನ್ನು ಚಾಚಾ ನೆಹರೂ ಎಂದು ಕರೆಯುತ್ತಿದ್ದರು ಎಂದರು.ಕ್ರೀಡಾ ಸಾಧನೆ ಹಾಗೂ ಅತಿ ಹೆಚ್ಚು ಅಂಕ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಜತೆಗೆ ತಾರೆ ಜಮೀನ್ ಪರ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಿಟ್ ವಿತರಿಸಲಾಯಿತು.
ಈ ವೇಳೆ ಅವ್ವ ಟ್ರಸ್ಟ್ ರಾಜ್ಯ ಸಂಚಾಲಕ ಡಾ. ಬಸವರಾಜ ಧಾರವಾಡ, ಎಸ್ಡಿಎಂಸಿ ಅಧ್ಯಕ್ಷೆ ನಂದಾ ಕಟವಟಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ, ಬಿಇಒ ರವಿಂದ್ರ ಶೆಟ್ಟೆಪ್ಪನವರ, ವಾರ್ತಾಧಿಕಾರಿ ವಸಂತ ಮಡ್ಲೂರ, ರವಿ, ಮುಖ್ಯೋಪಾಧ್ಯಾಯಿನಿ ಜೆ.ಬಿ. ಅಣ್ಣಿಗೇರಿ, ಆನಂದ ಬದಿ ಸೇರಿದಂತೆ ಪಾಲಕರು- ಮಕ್ಕಳು ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.14ಜಿಡಿಜಿ7