ಬದುಕಿನ ಪಾಠ ಹೇಳುವುದು ಶಿಕ್ಷಕನ ನೈತಿಕ ಹೊಣೆ: ಪ್ರಾಚಾರ್ಯ ಪಂಚಾಕ್ಷರಿ

KannadaprabhaNewsNetwork | Published : Apr 2, 2024 1:02 AM

ಸಾರಾಂಶ

ಚಿತ್ರದುರ್ಗದ ಎಸ್ ಜೆಎಂ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪ್ರೊ.ಜಿ.ಎನ್ ಬಸವರಾಜಪ್ಪ ನವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿಕ್ಷಕನಾದವನು ವೃತ್ತಿಯಿಂದ ನಿವೃತ್ತನಾಗಬಹುದು. ಆದರೆ ಅವನು ಜೀವನ ಪೂರ್ತಿ ಶಿಕ್ಷಕನೇ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮವನ್ನು ಬೋಧಿಸುವುದಲ್ಲ, ಅದರೊಂದಿಗೆ ಬದುಕಿನ ಪಾಠವನ್ನು ಹೇಳುವುದು ಶಿಕ್ಷಕನ ನೈತಿಕ ಜವಾಬ್ದಾರಿಯಾಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಹೆಚ್ ಪಂಚಾಕ್ಷರಿ ಹೇಳಿದರು.

ನಗರದ ಚಂದ್ರವಳ್ಳಿಯ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪ್ರೊ.ಜಿ.ಎನ್.ಬಸವರಾಜಪ್ಪನವರಿಗೆ ಏರ್ಪಡಿಸಲಾದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕ ರಾಷ್ಟ್ರದ ಬೆನ್ನೆಲುಬು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದು ಆತನ ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಕ ಉತ್ತಮ ನಾಗರೀಕನನ್ನು ಸೃಷ್ಟಿಸುತ್ತಾನೆ ಎಂದರು.

ರಾಣೆಬೆನ್ನೂರು ಎಸ್‍ಜೆಎಂ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಆರ್.ವಿ.ಹೆಗಡಾಳ್ ಮಾತನಾಡಿ, ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ನೇರ ನಡೆನುಡಿಗಳನ್ನಾಡುವಂತಹ ಸಹೋದ್ಯೋಗಿ ಮಿತ್ರರಲ್ಲಿ ಜಿ.ಎನ್.ಬಸವರಾಜಪ್ಪ ಅವಿಸ್ಮರಣೀಯರು. ಸುಮಾರು 15 ವರ್ಷಗಳ ಅವರ ಒಡನಾಟದಲ್ಲಿ ಅವರಿಂದ ನಾನು ಕಲಿತ ಬದುಕಿನ ಪಾಠಗಳು ಬಹಳ. ಎಂತಹ ಕಠಿಣ ಸಂದರ್ಭದಲ್ಲೂ ಅವರು ಕೊಡುತ್ತಿದ್ದ ಸಲಹೆ, ಧೈರ್ಯ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿವೆ. ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳಾಗಲಿ ಶಿಸ್ತು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಇವರ ದೊಡ್ಡಗುಣವನ್ನು ನಾನು ಅವರಿಂದ ಕಲಿತೆ.

ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಮಲ್ಲಿಕಾರ್ಜುನ, ಸಂತೆಬೆನ್ನೂರು ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಗಿರಿಸ್ವಾಮಿ ಮಾತನಾಡಿ, ಬಸವರಾಜಪ್ಪ ಸದಾ ಲವಲವಿಕೆಯಿಂದ ಎಲ್ಲರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತ ಎಲ್ಲರ ಮನಸ್ಸನ್ನು ಗೆಲ್ಲುವ ಒಬ್ಬ ಸ್ನೇಹಜೀವಿ. ವೃತ್ತಿ ಬದುಕಿನಾಚೆಗೆ ಇವರ ಪ್ರವೃತ್ತಿಗಳು ನಮ್ಮೆಲ್ಲರಿಗೂ ಅನುಕರಣೀಯ ಎಂದು ಬಣ್ಣಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಎನ್. ಬಸವರಾಜಪ್ಪ, 34ವರ್ಷಗಳ ಸುದೀರ್ಘ ಸೇವೆಯ ಕ್ಷಣಗಳನ್ನು ನೆನಪು ಮಾಡಿಕೊಂಡರು. ವೃತ್ತಿಬದುಕಿನಲ್ಲಿ ಆಶ್ರಯ, ಅವಕಾಶ ನೀಡಿದ ಶ್ರೀ ಮುರುಘಾಮಠ ಹಾಗು ವಿದ್ಯಾಪೀಠವು ತೋರಿಸಿದ ಪ್ರೀತಿ, ವಿಶ್ವಾಸ, ಮಮತೆಯನ್ನು ಸ್ಮರಿಸಿದರು.

ಕಾಲೇಜಿನ ವಿಶ್ರಾಂತ ಪ್ರಾಚಾರ್ಯರುಗಳಾದ ಹೆಚ್.ಸಿ ಗಂಗಾಂಬಿಕೆ, ಡಾ.ಕೆ.ಸಿ ರಮೇಶ್, ಸಿ. ಬಸವರಾಜಪ್ಪ, ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ.ಎಂ.ಕೆ ಪ್ರಭುದೇವ್, ಕೊಟ್ರೇಶಪ್ಪ, ಹೆಚ್.ಕೆ. ಶಿವಪ್ಪ, ಎಸ್.ಬಿ. ಶಿವಕುಮಾರ್, ಹಿರಿಯ ಸಂಶೋಧಕರಾದ ಡಾ.ಬಿ ರಾಜಶೇಖರಪ್ಪ, ನಿವೃತ್ತ ಪ್ರಾಧ್ಯಾಪಕರುಗಳಾದ ಡಾ.ಪಿ ಯಶೋದ, ಪ್ರೊ. ಸಿ.ಎಂ. ಚಂದ್ರಪ್ಪ, ಪ್ರೊ.ಶ್ರೀನಿವಾಸರೆಡ್ಡಿ, ಪ್ರೊ. ವಿ.ಟಿ. ಹಿರೇಮಠ್, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ಇದ್ದರು.

Share this article