- ಕಾಂಗ್ರೆಸ್ ಸಚಿವರಿಂದ ಅರಣ್ಯ, ಕಂದಾಯ ಭೂಮಿ, ರೈತರ ಜಮೀನು ಕಬಳಿಕೆ: ಬಿಜೆಪಿ ಶಾಸಕ ಹರೀಶ ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ-ವಿಜಯ ನಗರ ಜಿಲ್ಲೆಗಳಲ್ಲಿ ಅರಣ್ಯ, ಕಂದಾಯ ಭೂಮಿ, ರೈತರ ಜಮೀನು ಕಬಳಿಕೆ ವಿರುದ್ಧ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಈ ಹಿನ್ನೆಲೆ ಬೆಂಗಳೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನೇತೃತ್ವದ ಮೂವರು ಅಧಿಕಾರಿಗಳ ತಂಡ ಸಂಬಂಧಿಸಿದ ಇಲಾಖೆಗಳ ಜೊತೆಗೆ ಜಂಟಿ ಸಮೀಕ್ಷೆಗೆ ಅ.27ರಂದು ಉಭಯ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಉಭಯ ಜಿಲ್ಲೆಗಳ ಗಡಿ ಭಾಗದಲ್ಲಿ ಅರಣ್ಯ, ಕಂದಾಯ ಭೂಮಿ ಕಬಳಿಕೆ ಬಗ್ಗೆ ದೂರಿದ್ದು, ಸದನದಲ್ಲೂ ಸಾಕಷ್ಟು ಸಹ ಈ ಬಗ್ಗೆ ಧ್ವನಿ ಎತ್ತಿದ್ದೆ. ಇನ್ನು 2 ದಿನಗಳಲ್ಲೇ ಎರಡೂ ಜಿಲ್ಲೆಗಳ ಅರಣ್ಯ-ಕಂದಾಯ ಇಲಾಖೆಗಳ ಜೊತೆಗೆ ಜಂಟಿ ಸಮೀಕ್ಷೆಗೆ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನೇತೃತ್ವದ ತಂಡ ಸಮೀಕ್ಷೆಗೆ ಬರಲಿದ್ದು, ನಾವೆಲ್ಲರೂ ಜೊತೆಗಿರುತ್ತೇವೆ ಎಂದರು.ಬಡರೈತರ ಜಮೀನು ಕಬಳಿಕೆ, ಅರಣ್ಯ-ಕಂದಾಯ ಭೂಮಿ ಕಬಳಿಕೆ, ನದಿಗೆ ಸೇರುವ ಹಳ್ಳವನ್ನೇ ಮುಚ್ಚಿ, ಕಾರ್ಖಾನೆ ತ್ಯಾಜ್ಯ ಹರಿಯುತ್ತಿರುವುದನ್ನೇ ಹಳ್ಳವೆಂದು ತೋರಿಸಿದ್ದಾರೆ. ನಮ್ಮ ಹೋರಾಟದ ಫಲದಿಂದ ಮುಚ್ಚಿದ್ದ ಹಳ್ಳವನ್ನು ರಾತ್ರೋರಾತ್ರಿ ಜೆಸಿಬಿಯಿಂದ ಮತ್ತೆ ತೆಗೆಸಿದ್ದು, ಈ ಕಾರ್ಯಕ್ಕೆ ಬಳಸಿದ್ದ ಜೆಸಿಬಿ ಯಂತ್ರ ಸಚಿವ ಮಲ್ಲಿಕಾರ್ಜುನರ ಕುಟುಂಬದ ಜಾಗಕ್ಕೆ ಹೋಗಿ ನಿಂತಿರುವ ಜಿಪಿಎಸ್ ಫೋಟೋ ತೆಗೆದಿದ್ದೇವೆ ಎಂದು ಹೇಳಿದರು.
ವಿಜಯನಗರ ಜಿಲ್ಲಾಧಿಕಾರಿ ಮಳೆ ಸುರಿಯುತ್ತಿರುವುದರಿಂದ 2 ತಿಂಗಳ ಕಾಲಾವಕಾಶ ಕೋರಿದ್ದರೆ, ದಾವಣಗೆರೆ ಜಿಲ್ಲಾಧಿಕಾರಿ ಎಲ್ಲವೂ ಸರಿ ಇದೆ. ಸರ್ವೇ ಮಾಡಿದ್ದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿದ್ದರು. ಸದನದಲ್ಲೂ ಅದೇ ರೀತಿ ಸರ್ಕಾರ ಉತ್ತರ ನೀಡಿತ್ತು. ರಾತ್ರೋರಾತ್ರಿ ಹಳ್ಳದ ಕಾಮಗಾರಿ ಬಗ್ಗೆ ಡಿಸಿಗೆ ಕರೆ ಮಾಡಿದರೆ ನೋಡುತ್ತೇನೆ ಎಂದಿದ್ದವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ದೂರಿದರು.ಗ್ರಾಮ ಲೆಕ್ಕಾಧಿಕಾರಿ, ಪೊಲೀಸರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ, ಯಥಾಸ್ಥಿತಿ ಕಾಪಾಡುವಂತೆ ಹೇಳಿದ್ದೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನರ ಒಡೆತನದ ಕಾರ್ಖಾನೆಗೆ ಬಡ ರೈತರ 150 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಪಡೆದು, ವಂಚಿಸಿದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೆ. ಆಗ ಸಚಿವ ಎಂ.ಬಿ.ಪಾಟೀಲ ರೈತರಿಗೆ ಸೇರಿದ ಜಾಗ ವಾಪಸ್ ಕೊಡಿಸುವ ಭರವಸೆ ನೀಡಿದ್ದರು. ರೈತರ ಭೂಮಿ ವಾಪಸ್ ಕೊಡಿಸಬೇಕು. ಅರಣ್ಯ ಮತ್ತು ಕಂದಾಯ ಭೂಮಿ ಕಬಳಿಕೆ ಮಾಡಿದ್ದನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯುವವರೆಗೂ ನನ್ನ ಹೋರಾಟವಂತೂ ನಿಲ್ಲುವುದಿಲ್ಲ ಎಂದು ಹರೀಶ್ ಸ್ಪಷ್ಟಪಡಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ₹400 ಕೋಟಿ ಭ್ರಷ್ಟಾಚಾರದ ಆಗಿರುವ ಬಗ್ಗೆ ಸಿಎಂ ಆರ್ಥಿಕ ಕಾರ್ಯದರ್ಶಿ, ಶಾಸಕ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ. ಅದು ಕೇವಲ ಒಂದೇ ಜಿಲ್ಲೆ ಕಥೆಯಾದರೆ, ಇಡೀ ರಾಜ್ಯದ ಪರಿಸ್ಥಿತಿ ಏನಿದ್ದೀತು? ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಒಡೆತನದ ಕಾರ್ಖಾನೆಗಳಿಂದ ರೈತರಿಗೆ, ಸರ್ಕಾರಕ್ಕೂ ಅನ್ಯಾಯವಾಗಿದೆ. ಅಲ್ಲಿರುವುದು ಕೇವಲ 1 ಎಕರೆ, 2 ಎಕರೆ ಜಮೀನು ಹೊಂದಿರುವ ರೈತರು. ಕಾರ್ಖಾನೆಗೆ 2500 ಎಕರೆ ಯಾಕ್ರೀ ಬೇಕು? ಅದೆಂತಹ ಆಸೆ? ತಮಗೆ ತಿಳಿದ ದರಕ್ಕೆ ಖರೀದಿಸುವ ದುಷ್ಟಬುದ್ಧಿ ಯಾಕೆ ಎಂದು ಪ್ರಶ್ನಿಸಿದರು.ಈ ಸಂದರ್ಭ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್, ಬಿ.ಎಸ್.ಜಗದೀಶ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ ಇತರರು ಇದ್ದರು.
- - -(ಬಾಕ್ಸ್)
* ಹುಚ್ಚುನಾಯಿ ಯಾರೆಂದು ದಿನೇಶ ಶೆಟ್ಟಿ ಹೇಳಲಿ ಗಂಗೆ, ಭೂಮಿಗೆ ದ್ರೋಹ ಬಗೆದವರು ಯಾರಿಗೂ ಒಳ್ಳೆಯದಾಗಿಲ್ಲ. ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಬಗ್ಗೆ ದಿನಕ್ಕೊಂದು ಪತ್ರಿಕಾಗೋಷ್ಠಿ ಮಾಡುವ ಅನಿವಾರ್ಯತೆ ಇದೆ. ನನಗೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹುಚ್ಚುನಾಯಿ ಕಡಿದಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ. ನಿಜವಾಗಲೂ ಆ ಹುಚ್ಚುನಾಯಿ ಯಾರೆಂದು ದಿನೇಶ ಶೆಟ್ಟಿ ಬಹಿರಂಗಪಡಿಸಲಿ. ನಿಮ್ಮ ಸಚಿವರಾ? ರೈತರು, ಕಂದಾಯ, ಅರಣ್ಯ ಭೂಮಿ ಕಬಳಿಸಿದ ನಿಮ್ಮ ನಾಯಕರಾ?- ಬಿ.ಪಿ.ಹರೀಶ, ಶಾಸಕ, ಹರಿಹರ ಕ್ಷೇತ್ರ.
- - --25ಕೆಡಿವಿಜಿ3, 4.ಜೆಪಿಜಿ:
ದಾವಣಗೆರೆಯಲ್ಲಿ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿ ನಡೆಸಿ, ದಾವಣಗೆರೆ-ವಿಜಯ ನಗರ ಗಡಿ ಜಿಲ್ಲೆಯಲ್ಲಿ ರೈತರ ಜಮೀನು, ಅರಣ್ಯ, ಕಂದಾಯ ಭೂಮಿ ಕಬಳಿಸಿದ ಬಗ್ಗೆ ಜಿಪಿಎಸ್ ಚಿತ್ರಗಳನ್ನು ಪ್ರದರ್ಶಿಸಿದರು.