ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕ್ರಿಮಿನಾಲಜಿ ಮತ್ತು ಪೊರೆನ್ಸಿಕ್ ಸೈನ್ಸ್ ವಿಭಾಗದಿಂದ ಅಪರಾಧ ತನಿಖೆಯಲ್ಲಿ ವೈಜ್ಞಾನಿಕ ಮತ್ತು ಡಿಜಿಟಲ್ ನವೀನತೆಗಳು, ಆಧುನಿಕ ಯುಗದಲ್ಲಿ ಪೊಲೀಸ್ ಪಾತ್ರ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳೆಯ ಕಾಲದಲ್ಲಿ ತನಿಖೆಗಳು ಸಾಕ್ಷ್ಯಾಧಾರಗಳ ಮೇಲೆ ಮಾತ್ರ ಹೆಚ್ಚು ಅವಲಂಬಿತವಾಗಿದ್ದವು. ಈಗ ವೈಜ್ಞಾನಿಕ ವಿಧಾನಗಳ ಸಹಾಯದಿಂದ ಅವುಗಳ ತನಿಖೆಗೆ ಹೆಚ್ಚು ನಿಖರತೆ ಸಿಗುತ್ತಿದೆ. ಫಾರೆನ್ಸಿಕ್ ವಿಜ್ಞಾನ, ಡಿಎನ್ಎ ವಿಶ್ಲೇಷಣೆ, ಫಿಂಗರ್ಪ್ರಿಂಟ್ ತಂತ್ರಜ್ಞಾನ ಹಾಗೂ ಡಿಜಿಟಲ್ ಡೇಟಾ ವಿಶ್ಲೇಷಣೆ ಇತ್ಯಾದಿಗಳು ಅಪರಾಧ ಪತ್ತೆಯಲ್ಲಿ ಪ್ರಮುಖ ಸಾಧನಗಳಾಗಿ ಕೆಲಸ ಮಾಡುತ್ತಿವೆ. ಪ್ರಸ್ತುತ ಅಪರಾಧ ತನಿಖೆಯ ಹೈಟೆಕ್ ಸ್ವರೂಪ ಪಡೆಯುತ್ತಿದೆ. ನಮ್ಮ ತನಿಖೆಯ ಜಾಡು ಕೂಡ ನವೀನ ತಂತ್ರಜ್ಞಾನವನ್ನು ಆಶ್ರಯಿಸಿದೆ. ತಂತ್ರಜ್ಞಾನ ಹಾಗೂ ವೈಜ್ಞಾನಿಕ ವಿಧಾನಗಳ ಬಳಕೆ ಪೊಲೀಸ್ ಇಲಾಖೆಗೆ ಅಪರಾಧಗಳನ್ನು ಬೇಗ ಹಾಗೂ ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತಿವೆ. ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ, ಪೊಲೀಸರ ಪಾತ್ರ ಇನ್ನಷ್ಟು ಜವಾಬ್ದಾರಿಯುತವಾಗಿದೆ. ಪೊಲೀಸ್ ಇಲಾಖೆ ಈಗ ಡೇಟಾ ಅನಾಲಿಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆಗೂ ಒತ್ತು ನೀಡುತ್ತಿವೆ. ಇದರಿಂದ ಅಪರಾಧ ಮಾದರಿಗಳನ್ನು ವಿಶ್ಲೇಷಿಸಿ ಮುನ್ನೆಚ್ಚರಿಕಾ ಕ್ರಮಕ್ಕೆ ಹೆಚ್ಚು ಸಹಾಯಕಾರಿಯಾಗಿದೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರಿಮಿನಾಲಜಿ ಮತ್ತು ಪೊರೆನ್ಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ನಂದಿನಿ ದೇವರಮನಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನದ ಅಗತ್ಯತೆ ಹೆಚ್ಚಿದೆ. ಪ್ರಸ್ತುತ ಈ ಕೋರ್ಸ್ಗೆ ಹೆಚ್ಚು ಬೇಡಿಕೆಯಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊರೆನ್ಸಿಕ್ ಸೈನ್ಸ್ನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತಿದೆ ಎಂದರು.ರಾಚವಿ ಕ್ರಿಮಿನಾಲಜಿ ಮತ್ತು ಪೊರೆನ್ಸಿಕ್ ಸೈನ್ಸ್ ಪ್ರಾಧ್ಯಾಪಕ ಪ್ರೊ.ಆರ್.ಎನ್.ಮನಗೋಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪೊಲೀಸ್ ಮತ್ತು ಫೋರೆನ್ಸಿಕ್ ಕ್ಷೇತ್ರಗಳಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ವಿಭಾಗದ ಮುಖ್ಯಸ್ಥ ಡಾ.ಚಿದಾನಂದ ಹಾರುಗೇರಿ ಸ್ವಾಗತಿಸಿದರು, ಉಪನ್ಯಾಸಕರಾದ ಯೋಗೇಶ್ ಕಾಂಬಳೆ ಪರಿಚಯಿಸಿದರು, ಸಹನಾ ನರಗುಂದ ವಂದಿಸಿದರು, ವಿದ್ಯಾರ್ಥಿನಿಯರಾದ ರೇವತಿ ಮತ್ತು ಮಧುಪ್ರಿಯಾ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.