ಉತ್ಕೃಷ್ಟ ಸೇವೆಗೆ ತಂತ್ರಜ್ಞಾನ ಅನಿವಾರ್ಯ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Jun 23, 2025, 11:47 PM IST
ಬ್ಯಾಡಗಿಯ ಪ್ರವಾಸಿಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಗ್ರಾಮ ಆಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ವತಿಯಿಂದ ನೀಡಲಾದ ಲ್ಯಾಪ್‌ಟಾಪ್‌ ಹಸ್ತಾಂತರಿಸಿದರು. | Kannada Prabha

ಸಾರಾಂಶ

ಕಂದಾಯ ಇಲಾಖೆ ಸರ್ಕಾರದ ಜೀವನಾಡಿಯಾಗಿದೆ. ಅಲ್ಲಿರುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಬ್ಯಾಡಗಿ: ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಸೇರಿದಂತೆ ಸಾರ್ವಜನಿಕರಿಗೆ ಅತಿ ವೇಗವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ. ಸರ್ಕಾರ ಅದಕ್ಕೆ ಸಂಬಂಧಿಸಿದ ಎಲ್ಲ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ವತಿಯಿಂದ ಲ್ಯಾಪ್‌ಟಾಪ್‌ ವಿತರಿಸಿ ಮಾತನಾಡಿದರು.

ಕಂದಾಯ ಇಲಾಖೆ ಸರ್ಕಾರದ ಜೀವನಾಡಿಯಾಗಿದೆ. ಅಲ್ಲಿರುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕಾಗಿದೆ. ಆದರೆ ಗ್ರಾಮ ಆಡಳಿತಾಧಿಕಾರಿಗಳು ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದು ಅತ್ಯಂತ ಬೇಸರದ ಸಂಗತಿ. ಸೌಲಭ್ಯಗಳನ್ನು ಕೊಟ್ಟು ಅವರಿಂದ ಉತ್ತಮ ಕಾರ್ಯ ನಿರ್ವಹಣೆ ನಿರೀಕ್ಷೆ ಮಾಡಬಹುದು ಎಂದರು.

ಕಳೆದ ಮೂರ್ನಾಲ್ಕು ದಶಕಗಳಿಂದ ಕಂದಾಯ ಇಲಾಖೆಯಲ್ಲಿ ಅನುಕಂಪದ ಅಧಾರದ ಮೇಲೆ ಭರ್ತಿಯಾದ ಹುದ್ದೆ ಸಂಖ್ಯೆ ಹೆಚ್ಚು. ಆದರಲ್ಲೂ ಕೆಲಸಕ್ಕೆ ಸೇರ್ಪಡೆಯಾದವರಲ್ಲಿ ವಿಧವೆಯರ ಸಂಖ್ಯೆ ಮುಂಚೂಣಿಯಲ್ಲಿದೆ. ಅಡುಗೆ ಮನೆಯಿಂದ ನೇರವಾಗಿ ತಹಸೀಲ್ದಾರ್ ಕಚೇರಿಗೆ ಸೇರ್ಪಡೆಯಾಗಿದ್ದಾರೆ. ಕಾನೂನುನಲ್ಲಿ ಅವಕಾಶ ಇರುವುದರಿಂದ ಇಂತಹ ಪ್ರಕ್ರಿಯೆ ಅನಿವಾರ್ಯ. ಪ್ರಸ್ತುತ ವೇಗಕ್ಕೆ ಸಮರ್ಥವಾಗಿ ಕೆಲಸ ನಿರ್ವಹಿಸುವಂತೆ ಮಾಡಿಕೊಳ್ಳಲು ಕಾಲಾವಕಾಶದ ಅವಶ್ಯಕತೆಯಿದೆ ಎಂದರು.

ದುರುಪಯೋಗವಾಗದಿರಲಿ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕೊಟ್ಟಿರುವ ಲ್ಯಾಪ್‌ಟಾಪ್‌ ಜನರಿಗೆ ವೇಗವಾಗಿ ಕೆಲಸ ನಿರ್ವಹಿಸಲು ಬಳಕೆಯಾಗಬೇಕೆ ವಿನಾ ದುರುಪಯೋಗವಾಗದಿರಲಿ ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್‌ ಖಾದ್ರಿ, ಅಪರ ಜಿಲ್ಲಾಧಿಕಾರಿ ಎಲ್. ನಾಗೇಂದ್ರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಅಂಶುಕುಮಾರ, ತಹಸೀಲ್ದಾರ್ ಫಿರೋಜಶಾ ಸೋಮನಕಟ್ಟಿ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಶಿಗ್ಗಾಂವಿ: ಪರಿಸರ ನಾಶವಾದರೆ ಮನುಕುಲಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ಪರಿಸರ ಉಳಿವಿಗೆ ಮುಂದಾಗಬೇಕು ಎಂದು ಶಿಕ್ಷಕ ವಿ.ಬಿ. ಕುರಬರ ತಿಳಿಸಿದರು.ತಾಲೂಕಿನ ಹುಲಗೂರಿನ ಖಾದರಲಿಂಗ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ ಎಂದರು.ಕೃಷಿ ಮೇಲ್ವಿಚಾರಕ ಮಂಜುನಾಥ ಮಾತನಾಡಿದರು. ಹುಲಗೂರು ವಲಯದ ಮೇಲ್ವಿಚಾರಕ ನಿರಂಜನ್, ಶಾಲೆಯ ಶಿಕ್ಷಕರು ಇತರರು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!