ಒಂದೇ ಪ್ರಶ್ನೆ 7 ಬಾರಿ ಕೇಳಿದರೂ ಉತ್ತರಿಸದ ತಹಸೀಲ್ದಾರ್‌

KannadaprabhaNewsNetwork | Published : Jun 5, 2025 11:50 PM
ಎರಡು ತಿಂಗಳಿಗಿಂತ ಹೆಚ್ಚಿನ ಕಾಲ ಯಾವುದೇ ಕಡತಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದರೂ ಹೇಗೆ ನೀವು ಎರಡು ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದೀರಿ ಎಂದು ರೇಗಿದರು. ಸರ್ಕಾರ ನಿಮ್ಮನ್ನು ನೇಮಿಸಿರುವುದು ಜನರ ಸೇವೆ ಮಾಡಲು. ಅದು ಬಿಟ್ಟು ಅವರನ್ನು ಕಚೇರಿಗೆ ಅಲೆಸುವುದಕ್ಕಲ್ಲ, ನಿಮಗೆ ಸ್ವಲ್ಪವಾದರೂ ಮಾನವೀಯತೆ ಇರಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಉಪ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರನೆ ಪಟ್ಟಣದ ತಾಲೂಕು ಕಚೇರಿ, ಪುರಸಭೆ, ಉಪನೋಂದಣಾಧಿಕಾರಿ ಕಚೇರಿ,ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಬೆವರಿಳಿಸಿದರ.ಉಪ ಲೋಕಾಯುಕ್ತ ವೀರಪ್ಪ ಮತ್ತು ಅವರ ತಂಡ ಪಟ್ಟಣ ತಾಲೂಕು ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ಮಾಡಿದರು. ಎಷ್ಟು ವರ್ಷಗಳಿಂದ ಎಷ್ಟು ಕಡತಗಳನ್ನು ವಿಲೇವಾರಿ ಮಾಡದೆ ಉಳಿಸಿಕೊಂಡಿದ್ದೀರಿ ಎಂದು ತಹಸೀಲ್ದಾರ್ ವೆಂಕಟೇಶ್‌ ರವರನ್ನು ೭ ಬಾರಿ ಪ್ರಶ್ನಿಸಿದರೂ ತಹಸೀಲ್ದಾರ್ ರಿಂದ ಸಮರ್ಪಕವಾದ ಉತ್ತರ ದೊರೆಯಲಿಲ್ಲ.

ಕಡತ ಪರಿಶೀಲಿಸಿದ ಉಪಲೋಕಾಯುಕ್ತ

ಬಳಿಕ ಉಪಲೋಕಾಯುಕ್ತರೇ ಕಡತಗಳ ಪರೀಶಿಲನೆ ನಡೆಸಿದಾಗ ಸುಮಾರು ೩೦ಕ್ಕೂ ಹೆಚ್ಚಿನ ಕಡತಗಳು ವಿಲೇವಾರಿ ಮಾಡದೆ ಎರಡು ವರ್ಷಗಳಿಂದ ಧೂಳು ತಿನ್ನುತಿರುವುದನ್ನು ಗಮನಿಸಿ ಗರಂ ಆದರು. ಎರಡು ತಿಂಗಳಿಗಿಂತ ಹೆಚ್ಚಿನ ಕಾಲ ಯಾವುದೇ ಕಡತಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದರೂ ಹೇಗೆ ನೀವು ಎರಡು ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದೀರಿ ಎಂದು ರೇಗಿದರು. ಸರ್ಕಾರ ನಿಮ್ಮನ್ನು ನೇಮಿಸಿರುವುದು ಜನರ ಸೇವೆ ಮಾಡಲು. ಅದು ಬಿಟ್ಟು ಅವರನ್ನು ಕಚೇರಿಗೆ ಅಲೆಸುವುದಕ್ಕಲ್ಲ, ನಿಮಗೆ ಸ್ವಲ್ಪವಾದರೂ ಮಾನವೀಯತೆ ಇರಬೇಕು ಎಂದು ತರಾಟೆಗೆ ತೆಗೆದುಕೊಂಡರು.

ರೆಕಾರ್ಡ್ ರೂಂ ಪರಿಶೀಲನೆ

ಕಚೇರಿಯ ರೆಕಾರ್ಡ್ ಕೋಣೆಗೆ ಬೀಗ ಹಾಕಿರುವುದನ್ನು ಕಂಡ ಉಪಲೋಕಾಯುಕ್ತರು, ರೆಕಾರ್ಡ್ ರೂಂ ಅಧಿಕಾರಿ ವಿನೋದ್ ಎಲ್ಲಿ ಎಂದು ಪ್ರಶ್ನಿಸಿದರು. ಆರೋಗ್ಯ ಸರಿಯಿಲ್ಲದ ಕಾರಣ ರಜೆ ಹಾಕಿದ್ದಾರೆ ಎಂಬ ಉತ್ತರಕ್ಕೆ ಕೆರಳಿದ ಉಪಲೋಕಾಯುಕ್ತರು, ತಾವು ಕಚೇರಿಗೆ ಬೇಟಿ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸಹ ಹೇಗೆ ರಜೆ ಕೊಟ್ಟಿರಿ, ಕೊಠಡಿ ಬೀಗ ಹಾಕಿದರೆ ಸಾರ್ವಜನಿಕರ ಕೆಲಸ ಮಾಡುವುದ ಯಾರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕೊಠಡಿಯ ಬಾಗಿಲನ್ನು ತೆಗೆಸಿ ಕಡತಗಳ ನಿರ್ವಹಣೆ ಪರಿಶೀಲಿಸಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ

ಇದಕ್ಕೂ ಮೊದಲು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ರೋಗಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿದೆಯೋ ಇಲ್ಲವೋ ಎಂಬುದನ್ನು ಎಲ್ಲಾ ವಾರ್ಡುಗಳಿಗೆ ತೆರೆಳಿ ರೋಗಿಗಳಿಂದ ಮಾಹಿತಿ ಪಡೆದುಕೊಂಡರು. ರೋಗಿಗಳಿಗಾಗಿ ಅಳವಡಿಸಿರುವ ವಾಟರ್ ಪಿಲ್ಟರ್ ಎತ್ತರದಲ್ಲಿರುವ ಬಗ್ಗೆ ಹಾಗೂ ಸೋರುತ್ತಿರುವುದರ ಬಗ್ಗೆ ಅಸಮಾಧಾನವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪ ಲೋಕಾಯುಕ್ತರ ಜೊತೆ ಲೋಕಾಯುಕ್ತ ಎಸ್ಪಿ ಸುನೀಲ್, ವೃತ್ತನಿರೀಕ್ಷಕಿ ರೇಣುಕಾ, ತಹಸೀಲ್ದಾರ್ ವೆಂಕಟೇಶ್ ಇದ್ದರು.