ಲಕ್ಷ್ಮೇಶ್ವರ: ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ಶ್ರಾವಣ ಮಾಸದ ಜ್ಞಾನೇಶ್ವರಿ ಪಾರಾಯಣದ ರಜತ ಮಹೋತ್ಸವ ಹಾಗೂ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಇತ್ತೀಚೆಗೆ ಶಾಸ್ತ್ರೋಕ್ತವಾಗಿ ನೆರವೇರಿತು.
ಕಾಕಡಾ ಆರತಿ ಹಾಗೂ ಪೋಥಿ ಸ್ಥಾಪನೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಮಂಚರಿಗಾಥಾ ಭಜನೆ, ಸಂಜೆ ಪ್ರವಚನ ಹಾಗೂ ನಾಮಜಪ ಮತ್ತು ರಾತ್ರಿ ಕೀರ್ತನೆ ನೆರವೇರಿತು.
ಎರಡನೇ ದಿನ ಕಾಕಡಾ ಆರತಿ, ಪಾರಾಯಣ ಕಾರ್ಯಕ್ರಮ, ಆನಂತರ ಸರಿಯಾಗಿ ಮುಂಜಾನೆ ೭.೫೦ಕ್ಕೆ ಪಂಡರಪುರದ ಚೈತನ್ಯ ಸದ್ಗುರು ಗೋಪಾಲ ಮಹಾರಾಜ ಹಾಗೂ ಪ್ರಭಾಕರ ದಾದಾ ಭುಜಂಗರಾವ್ ಬೋಧಲೆ ಮಹಾರಾಜ ಅವರ ಅಮೃತಹಸ್ತದಿಂದ ಪ್ರತಿಷ್ಠಾಪನೆ ನೆರವೇರಿತು. ಚಿಕ್ಕರಸ ಪೂಜಾರ ನೇತೃತ್ವದ ಋತ್ವಿಜರ ಬಳಗ ವಾಸ್ತು ಹೋಮ, ಪ್ರತಿಷ್ಠಾಪನೆ ಹೋಮ ನೆರವೇರಿಸಿತು. ಪುರೋಹಿತರ ವೇದ-ಘೋಷಗಳ ಮಧ್ಯೆ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ಜರುಗಿತು.ಕಾಂಗ್ರೆಸ್ ಮುಖಂಡ ಆನಂದ ಗಡ್ಡದೇವರಮಠ ಮತ್ತು ದೀಪಾ ಗಡ್ಡದೇವರಮಠ ದಂಪತಿ, ರಮೇಶ ನವಲೆ ದಂಪತಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು, ಹೋಮದಲ್ಲಿ ಪೂರ್ಣಾಹುತಿ ಅರ್ಪಿಸಿದರು.
ಬಸವೇಶ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ, ಗಿರೀಶ ತಟ್ಟಿ, ಗಿರೀಶ ಅಗಡಿ, ಲೋಹಿತ್ ನೆಲವಿಗಿ, ವಿಜಯ ಹತ್ತಿಕಾಳ ಆಗಮಿಸಿ, ದರ್ಶನಾಶೀರ್ವಾದ ಪಡೆದುಕೊಂಡರು.