ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿರಲಿ : ರವಿಶಂಕರ್‌

KannadaprabhaNewsNetwork | Published : Apr 29, 2025 12:49 AM

ಸಾರಾಂಶ

ಜಯಪುರ, ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿರಬೇಕು. ಆಕರ್ಷಕ ಕೇಂದ್ರಗಳಾಗಬಾರದು. ದೇವಾಲಯಗಳಲ್ಲಿ ಭಕ್ತಿಯ ಪೂಜೆ ಗಿಂತ ಆಡಂಬರದ ಪೂಜೆ ಹೆಚ್ಚಾಗುತ್ತಿದೆ. ಇದರಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಪೂಜೆಯಲ್ಲಿ ಭಕ್ತಿ ಹೆಚ್ಚಾಗಿ ರಬೇಕು ಎಂದು ರಾಜ್ಯ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದರು.

ಸೀಗೋಡು ನಾಗಲಕ್ಷ್ಮಿ ಸಭಾ ಭವನದಲ್ಲಿ ಮಲೆನಾಡು ವೈಭವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಜಯಪುರ

ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿರಬೇಕು. ಆಕರ್ಷಕ ಕೇಂದ್ರಗಳಾಗಬಾರದು. ದೇವಾಲಯಗಳಲ್ಲಿ ಭಕ್ತಿಯ ಪೂಜೆ ಗಿಂತ ಆಡಂಬರದ ಪೂಜೆ ಹೆಚ್ಚಾಗುತ್ತಿದೆ. ಇದರಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಪೂಜೆಯಲ್ಲಿ ಭಕ್ತಿ ಹೆಚ್ಚಾಗಿ ರಬೇಕು ಎಂದು ರಾಜ್ಯ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದರು.

ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಘಟಕ ಸೀಗೋಡು ನಾಗಲಕ್ಷ್ಮಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ "ಮಲೆನಾಡು ವೈಭವ " ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜದ ದೇವತೆ ವಾಸವಿ ದೇವಿ ತ್ಯಾಗದ ಸಂಕೇತ ಆಗಿದ್ದಾರೆ. ಅದರಂತೆ ನಾವು ತ್ಯಾಗದ ಮನೋಭಾವದಲ್ಲಿ ಬದುಕಬೇಕು. ಇನ್ನೊಬ್ಬರನ್ನು ತೇಜೋವಧೆ ಮಾಡುವ ಬದಲು ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಾದಷ್ಟು ಸಹಕಾರ ನೀಡಬೇಕು. ಸಹಾಯ ಮಾಡಲು ಕಷ್ಟವಾದಲ್ಲಿ ಸುಮ್ಮನಿರುವುದು ಒಳ್ಳೆಯದು ಎಂದರು.

ರಾಮಾಯಣ ಕಾಲದಲ್ಲಿ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಐದು ಜನ ಮುಖ್ಯಸ್ಥರಲ್ಲಿ ಆರ್ಯವೈಶ್ಯ ಮಂಡಳಿಯವರು ಒಬ್ಬರಾಗಿದ್ದರು. ಅಂದಿನ ಕಾಲದಿಂದಲೂ ಆರ್ಯವೈಶ್ಯರು ಇರುವುದಕ್ಕೆ ಪುರಾವೆಗಳಿವೆ. ಸ್ವತಂತ್ರ ಪೂರ್ವದಲ್ಲಿ 1908 ರಲ್ಲಿ ಕರ್ನಾಟಕ ರಾಜ್ಯ ಆರ್ಯವೈಶ್ಯ ಮಂಡಳಿ ಪ್ರಾರಂಭವಾಗಿದ್ದು, 1927 ರಲ್ಲಿ ಮೈಸೂರು ಮಹಾರಾಜರು ಮಂಡಳಿಗೆ ಬೆಂಗಳೂರಿನಲ್ಲಿ ಜಾಗ ನೀಡಿದ್ದರು. ಮಂಡಳಿ ಚಟುವಟಿಕೆಗೆ ಸ್ವಂತ ಕಟ್ಟಡ ಹೊಂದಿದೆ. ವಾಸವಿ ಕೋ ಆಪರೇಟಿವ್ ಬ್ಯಾಂಕ್ ನಮ್ಮ ಮಂಡಳಿ ಹೆಮ್ಮೆಯ ಹಣಕಾಸಿನ ಸಂಸ್ಥೆ. ಈ ಸಂಸ್ಥೆ ಪ್ರತಿ ತಾಲೂಕಿನಲ್ಲಿ ಶಾಖೆಗಳು ಹೊಂದಬೇಕು. ಇದಕ್ಕೆ ಆರ್ಯವೈಶ್ಯ ಮಂಡಳಿ ಪ್ರತಿಯೊಬ್ಬರು ಸದಸ್ಯರಾಗಬೇಕೆಂದರು.

ಆರ್ಯವೈಶ್ಯ ಮಹಾಸಭಾದಿಂದ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದು, 518 ವಿಧವಾ ಮಾತೆಯರಿಗೆ, 347 ಅಂಗವಿಕಲರಿಗೆ ಮಾಸಾಶನ ನೀಡುತ್ತಿದ್ದೇವೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಪ್ರಸ್ತುತ ದಿನದವರೆಗೆ 1,100 ಜನರಿಗೆ ಈ ಯೋಜನೆಯಲ್ಲಿ ಸಾಲ ನೀಡಿದ್ದೇವೆ. ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಗಳಿದ್ದು, ಇಲ್ಲಿಯವರೆಗೆ 1,400 ಲ್ಯಾಪ್ ಟಾಪ್ ನೀಡಲಾಗಿದೆ ಎಂದು ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಸಮಿತಿ ಅಧ್ಯಕ್ಷ ವೆಂಕಟೇಶ್ ಕಡೂರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಯಪುರ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಿ.ಎಂ. ಗಣೇಶ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಪಾರ್ಥಸಾರಥಿ, ಅನಂತ್, ಎಂ. ವಿ. ಸುಬ್ಬರಾಜು, ನಾಗೇಂದ್ರ ಶೆಟ್ಟಿ, ದಿನೇಶ್ ಗುಪ್ತ, ಮಂಜುನಾಥ್ ಗುಪ್ತ, ಕುಮಾರಸ್ವಾಮಿ, ಜಿಲ್ಲಾ ವಾಸವಿ ಯುವಜನ ಸಂಘದ ಅಧ್ಯಕ್ಷ ಪುನೀತ್, ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷ ಆಕಾಶ್, ಜಿಲ್ಲಾ ಸಮಿತಿ ಸದಸ್ಯರಾದ ಜೆ.ಆರ್‌. ಗಣೇಶ್ ಪ್ರಸಾದ್, ಪಿ.ಎಸ್. ರಜತ್ ಸೇರಿದಂತೆ ತಾಲೂಕು ಸಮಿತಿ ಅಧ್ಯಕ್ಷರು, ಸದಸ್ಯರು ಭಾಗಿಯಾಗಿದ್ದರು. 28 ಕೆಸಿಕೆಎಂ 1

ಜಯಪುರದ ಸೀಗೋಡು ನಾಗಲಕ್ಷ್ಮಿ ಸಭಾ ಭವನದಲ್ಲಿ ನಡೆದ ಮಲೆನಾಡು ವೈಭವ ಕಾರ್ಯಕ್ರಮವನ್ನು ರಾಜ್ಯ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಉದ್ಘಾಟಿಸಿದರು. ಡಿ.ಎಂ. ಗಣೇಶ್‌, ವೆಂಕಟೇಶ್‌, ರವಿಕುಮಾರ್‌ ಇದ್ದರು.

Share this article