ಹುಬ್ಬಳ್ಳಿ:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಭಯೋತ್ಪಾದಕ ಮನಸ್ಸುಳ್ಳವರಿಗೆ ಭಯವೇ ಇರುವುದಿಲ್ಲ. ಇದರಿಂದಾಗಿ ಕೃತ್ಯಗಳು ಹೆಚ್ಚುತ್ತಿವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಭಯೋತ್ಪಾದಕ ಮನಸ್ಸುಗಳು ಪಂಜರದ ಗಿಳಿ ಹೊರಬಂದಂತೆ ಮಾಡುತ್ತವೆ. ಈಚೆಗೆ ನಾಗಮಂಗಲ, ದಕ್ಷಿಣ ಕನ್ನಡ ಜಿಲ್ಲೆ, ಗುರುವಾರ ದಾವಣಗೆರೆಯೇ ಉದಾಹರಣೆ ಆಗಿದೆ. ಈ ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದ್ದವರ ವಿರುದ್ಧ ಅಂದು ನಮ್ಮ ಸರ್ಕಾರ ಕಠಿಣ ಕ್ರಮ ಜಾರಿ ಮಾಡಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲು ಮಾಡಿದ್ದು ಏನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಳೇ ಹುಬ್ಬಳ್ಳಿ ಗಲಾಟೆಕೋರರನ್ನು ಬಿಡಿಸುವ ಕೆಲಸ ಮಾಡಿತ್ತು. ಈ ಸರ್ಕಾರ ಪೊಲೀಸರಿಗೆ ಸ್ವಾತಂತ್ರ್ಯ ನೀಡುವುದಿಲ್ಲ. ಹಾಗೇನಾದರೂ ಸ್ವಾತಂತ್ರ್ಯನೀಡಿದ್ದರೆ ಕೋಮುವಾದಿಗಳು, ಭಯೋತ್ಪಾದಕರಿಗೆ ನಮ್ಮ ಪೊಲೀಸರು ಬುದ್ಧಿ ಕಲಿಸುತ್ತಾರೆ ಎಂದರು.ಸರ್ಕಾರದ ವೈಫಲ್ಯ:
ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದಾಗಿ ಗಲಾಟೆ, ಗಲಭೆಗಳು ಹೆಚ್ಚಾಗುತ್ತಿವೆ. ತುಷ್ಟೀಕರ ಹೀಗೆ ಮುಂದವರಿದರೆ ಇಂತಹ ಗಲಭೆಗಳು ಹೆಚ್ಚಾಗುತ್ತವೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಗೃಹ ಸಚಿವರಿಗೆ ಗಲಭೆ, ಗಲಾಟೆಗಳು ನಡೆದರೆ ಆಕಸ್ಮಿಕ ಎನ್ನುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.ಜವಾಬ್ದಾರಿಯ ಹೇಳಿಕೆ ನೀಡಲಿ:
ಪ್ಯಾಲಿಸ್ಟೈನ್ ಧ್ವಜ ಹಾರಿಸುವುದರಲ್ಲಿ ತಪ್ಪೇನಿದೆ ಎಂಬ ಸಚಿವ ಜಮೀರ ಅಹ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಜಮೀರ ಅಹ್ಮದ್ ಅವರು ಮೊದಲು ಯಾವುದು ತಪ್ಪು ಯಾವುದು ಸರಿ ಎಂಬುದನ್ನು ತಿಳಿದುಕೊಳ್ಳಲಿ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದಾಗ ಇದೇ ಕಾಂಗ್ರೆಸ್ನವರು ಹಾಗಂದಿಲ್ಲ ಅಂದಿದ್ದರು. ಭಾರತದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಓಡಾಡುವ ಅವಶ್ಯ ಏನಿದೆ? ಧರ್ಮಾಚರಣೆಯಲ್ಲಿ ಧರ್ಮದ ಧ್ವಜ ಹಿಡಿದು ಓಡಾಡಲಿ. ಅದು ಬಿಟ್ಡು ಪಾಕಿಸ್ತಾನ ಧ್ವಜ ಹಿಡಿದು ಓಡಾಡುವುದರ ಹಿಂದಿನ ಉದ್ದೇಶ ಏನು?. ಜಮೀರ ಅಹ್ಮದ್ ಅವರ ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.