ಕೊಪ್ಪಳ:
ಜಿಲ್ಲೆಯಲ್ಲಿ ಗಾಂಜಾ, ಚರಸ್ ಅವ್ಯಾಹತವಾಗಿ ದೊರೆಯುತ್ತಿದೆ. ವಿದ್ಯಾರ್ಥಿಗಳು ಅದಕ್ಕೆ ದಾಸರಾಗುತ್ತಿದ್ದಾರೆ ಮತ್ತು ಆನೆಗೊಂದಿ ಸುತ್ತಮುತ್ತಲು ಇದು ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಆರೋಪದ ನಡುವೆಯೇ ಗಂಗಾವತಿ ಬಳಿ ಥೈಲ್ಯಾಂಡ್ನಿಂದ ತಂದಿದ್ದ ಹೈಡ್ರೋ ಗಾಂಜಾ ಪತ್ತೆಯಾಗಿದೆ.ಕಾರ್ನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು 1806 ಗ್ರಾಂ ಗಾಂಜಾ ಹಾಗೂ 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಗುರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ ೨೮ರಂದು ಸೂರ್ಯ ನಾಯಕ್ ತಾಂಡಾಗೆ ಹೋಗುವ ರಸ್ತೆಯಲ್ಲಿ ಎರಡು ಕಾರ್ನಲ್ಲಿ ಥೈಲ್ಯಾಂಡ್ನಿಂದ ತಂದಿದ್ದ ಹೈಡ್ರೋ ಗಾಂಜಾ ಮಾರಾಟ ಮಾಡುವ ಖಚಿತ ಮಾಹಿತಿ ದೊರೆಯಿತು. ಆಗ ನಮ್ಮ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳಾದ ಸೌಜೇಶ, ಸಲೀಂ, ಬಿ. ದುರ್ಗಾಪ್ರಸಾದ, ಬಾದಷಾ, ಮದನ್, ಸೂರ್ಯ ಪ್ರತಾಪ್ ರಡ್ಡಿ, ಮಹ್ಮದ್ ಅಮೀದ್, ಮಣಿಕಂಠ ಎನ್ನುವವರನ್ನು ವಶಕ್ಕೆ ಪಡೆದಿದ್ದು ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.ಈ ಹಿಂದೆ ಇಂಥದ್ದೇ ಪ್ರಕರಣವೊಂದರಲ್ಲಿ ೧೩ ಗ್ರಾಂ ಗಾಂಜಾ ಪತ್ತೆಯಾಗಿತ್ತು. ಆಗ ವಿಚಾರಣೆ ಮಾಡಿದಾಗ ಹೈಡ್ರೋ ಗಾಂಜಾ ಮಾರಾಟ ಮಾಡಿದ್ದನ್ನು ಪತ್ತೆ ಮಾಡಲಾಗಿತ್ತು. ಆದರೆ, ಎಲ್ಲಿಂದ ಬರುತ್ತಿದೆ ಎನ್ನುವ ಮಾಹಿತಿ ಗೊತ್ತಾಗಿರಲಿಲ್ಲ. ಆದರೆ, ಈಗ ಥೈಲ್ಯಾಂಡ್ನಿಂದ ತರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಮಾಹಿತಿ ನೀಡಿದರು.
ಗಾಂಜಾ ವಶ:ಆರೋಪಿತರಿಂದ ₹1,06,600 ಮೌಲ್ಯದ 1806 ಗ್ರಾಂ ಗಾಂಜಾ, ಎರಡು ಕಾರು, ೮ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿರುವ ಎಸ್ಪಿ, ಕಾಲೇಜು ಯುವಕರನ್ನು ಗುರಿಯಾಗಿಸಿಕೊಂಡು ಈ ಗಾಂಜಾ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಡಿಎಸ್ಪಿ ಸಿದ್ಧನಗೌಡ ಪಾಟೀಲ್, ಪಿಐ ಪ್ರಕಾಶ ಮಾಳೆ, ಡಿಸಿಆರ್ಬಿ ಶಿವರಾಜ, ಸಬ್ ಇನ್ಸೆಕ್ಟರ್ ನಾಗರಾಜ, ವೀರಭದ್ರಪ್ಪ, ಚಿರಂಜೀವಿ, ಮರಿಶಾಂತೇಗೌಡ, ವಿಶ್ವನಾಥ, ರಾಘವೇಂದ್ರ, ವಿಶ್ವನಾಥ, ಭೀಮಪ್ಪ, ಪರಶುರಾಮ, ಮೈಲಾರಪ್ಪ, ಶ್ರೀಕಾಂತ, ಮಂಜುನಾಥ ಪ್ರಕರಣವನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಹೇಮಂತಕುಮಾರ, ಡಿಎಸ್ಪಿ ಸಿದ್ದನಗೌಡ ಪಾಟೀಲ್ ಇದ್ದರು. ನಿರಂತರ ಸಭೆ:
ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತವೆಯಾದರೂ ಪ್ರಕರಣ ದಾಖಲಾಗುತ್ತಿಲ್ಲ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ, ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯಗಳ ಪ್ರಕರಣಗಳ ಕುರಿತು ನಿರಂತರ ಸಭೆ ನಡೆಸಲಾಗುತ್ತದೆ. ಅಂಥ ಯಾವುದೇ ಕೇಸ್ ಇದ್ದರೂ ಕಾನೂನು ಅಡಿ ಕ್ರಮವಹಿಸಲಾಗುವುದು. ಈ ಕುರಿತು ಜಾಗೃತಿ ಮೂಡಿಸಲಾಗಿದೆ. ಈ ಹಿಂದೆಯೂ ಈ ಕುರಿತು ವರದಿಗಳು ಬಂದಾಗ ಖುದ್ದು ಸಚಿವರ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಸಿದ್ದೇವೆ ಎಂದರು.