ಕನ್ನಡಪ್ರಭ ವಾರ್ತೆ ಮೈಸೂರು
ಮೊದಲ ದಿನ ಶ್ರೀರಾಮನವಮಿ ಅಂಗವಾಗಿ ರಾಮಮಂದಿರದಲ್ಲಿ ಬೆಳಗ್ಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿತು. ನಂತರ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ಅಂದು ಸಂಜೆ ಆಲಮ್ಮನವರ ಛತ್ರದ ಆವರಣದಲ್ಲಿ ಸಂಗೀತೋತ್ಸವ-2026 ಆರಂಭವಾಯಿತು. ವಿದುಷಿ ಸೂರ್ಯಗಾಯತ್ರಿ ಅವರ ಹಾಡುಗಾರಿಕೆ ನೆರೆದಿದ್ದ ಅಪಾರ ವರ್ಗದ ಶ್ರೋತೃಗಳನ್ನು ರಂಜಿಸಿತು.
ಎರಡನೇ ದಿನ ವಿದ್ವಾನ್ ರಾಮಕೃಷ್ಣಮೂರ್ತಿ ಅವರ ಹಾಡುಗಾರಿಕೆಗೂ ಕೂಡಾ ಅಧಿಕ ಸಂಖ್ಯೆಯಲ್ಲಿ ಸಂಗೀತಾಸಕ್ತರು ನೆರೆದಿದ್ದರು. ಮೂರನೇ ದಿನ ಸೀತಾಕಲ್ಯಾಣ ರಾಮಮಂದಿರದಲ್ಲಿ ನೆರವೇರಿತು. ಅದೇ ದಿನ ಸಂಜೆ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಹಾಗೂ ವೃಂದದವರಿಂದ ಲಯಲಾವಣ್ಯ, ತಾಳವಾದ್ಯಗಳ ಕಛೇರಿ ವಿಶೇವಾಗಿ ನಡೆಯಿತು.ನಾಲ್ಕನೇ ದಿನ ಸಂಗೀತ ಕಲಾನಿಧಿ ಡಾ. ಜಯಂತಿ ಕುಮರೇಶ್ ಅವರ ವೀಣೆ ಹಾಗೂ ವಿದುಷಿ ಅಕ್ಕರೈ ಶುಭುಲಕ್ಷ್ಮಿ ಅವರ ಪಿಟೀಲು ಜುಗಲ್ ಬಂಧಿ ಕಾರ್ಯಕ್ರಮ ಹಾಗೂ ಈ ಸಾಲಿನ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಗೌರವಕ್ಕೆ ಪಾತ್ರರಾದ ಡಾ. ಜಯಂತಿ ಕುಮರೇಶ್ ಅವರಿಗೆ ಸಭಾದ ವತಿಯಿಂದ ಸನ್ಮಾನ ಏರ್ಪಾಡಾಗಿತ್ತು. ಅಂದಿನ ಈ ಎರಡೂ ಕಾರ್ಯಕ್ರಮಗಳಿಗೂ ಸಂಗೀತ ಪ್ರಿಯರ ಸ್ಪಂದನೆ ಉತ್ತಮವಾಗಿತ್ತು.
ಏಳನೇ ದಿನ ಹಿಂದೂಸ್ಥಾನಿ ಸಂಗೀತ ರಸಿಕರಿಗೆ ಪದ್ಮಶ್ರೀ ಪಂಡಿತ್, ವೆಂಕಟೇಶ್ ಕುಮಾರ್ ಅವರ ಪಾಂಡಿತ್ಯ ಪೂರ್ಣ ಗಾಯನವನ್ನು ಸವಿಯುವ ಅವಕಾಶ ಕೂಡಿಬಂದಿತ್ತು. ಅದೇ ದಿನ ಮೈಸೂರಿನ ವಿ.ವಿ. ಮೊಹಲ್ಲದ 8ನೇ ಕ್ರಾಸ್ ನ ಎಸ್.ಪಿವಿಜಿಎಂಸಿ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಶ್ರೀರಾಮಾಭ್ಯುದಯ ಸಭಾದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ನೆರವು ನೀಡಿದ ಸಿ.ಆರ್. ಹಿಮಾಂಶು ಅವರಿಗೆ ಶ್ರೀರಾಮ ಸಂಗೀತ ಸೇವಾ ರತ್ನ ಬಿರುದನ್ನು ನೀಡಿ ಗೌರವಿಸಲಾಯಿತು. ಅಂದಿನ ಈ ಎರಡೂ ಕಾರ್ಯಕ್ರಮಗಳಿಗೂ ಪ್ರೇಕ್ಷಕರು ಅಭೂತಪೂರ್ವ ಪ್ರೋತ್ಸಾಹ ನೀಡಿದರು.
ಹತ್ತನೇ ದಿನ ರಘುಲೀಲ ಸ್ಕೂಲ್ ಆಫ್ ಮ್ಯೂಸಿಕ್ ಅವರಿಂದ ವಿಶೇಷ ಕಾರ್ಯಕ್ರಮ ನಗರ ಸಂಕೀರ್ತನೆಗೆ ಸಾರ್ವಜನಿಕರಿಗೆ ಭಕ್ತಾದಿಗಳಿಂದ ಉತ್ತಮ ಸ್ಪಂದನೆ ದೊರಕಿತು. ಅದೇ ದಿನ ನಡೆದ ವಿದ್ವಾನ್ ಸಂದೀಪ್ ನಾರಾಯಣ್ ಅವರ ವಿದ್ವತ್ ಪೂರ್ಣ ಹಾಡುಗಾರಿಕೆ ನೆರೆದಿದ್ದ ಸಹಸ್ರ ಸಂಖ್ಯೆಯ ಪ್ರೇಕ್ಷಕರನ್ನು ಗಂಧರ್ವ ಲೋಕಕ್ಕೆ ಕರೆದೊಯಿತು.
ಏ.21ರಂದು ಶ್ರೀ ಶಂಕರ ಜಯಂತಿಯಂದು ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ ಎಂದು ಸಭಾದ ಅಧ್ಯಕ್ಷ ಡಾ.ಎನ್. ಶ್ರೀರಾಮ್ ತಿಳಿಸಿದ್ದಾರೆ.