ಕಲಾ ಉತ್ಸವ 2026 ಉದ್ಘಾಟನೆ ಮಾಡಿದ ಫಿರೋಜಷಾ ಸೋಮನಕಟ್ಟಿ
ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಕ್ರೀಡೆಗಳು ಜೀವಂತಿಕೆಯಿರುವ ಊರು ಸಮೃದ್ಧ, ಉತ್ಸಾಹಿಯಾಗಿರುತ್ತದೆ ಎಂದು ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲ್ಪನಾ ರಶ್ಮಿ ಕಲಾಲೋಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕಲಾ ಉತ್ಸವ-2026 ಉದ್ಘಾಟಿಸಿ ಮಾತನಾಡಿದರು.ಕಲೆಯು ನಮ್ಮ ಸಮಾಜದ ಆಭರಣ, ಅದು ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮತ್ತು ಚಿತ್ತಾರಗಳ ಮೂಲಕ ಭಾವನೆಗಳನ್ನು ವ್ಯಕ್ತಗೊಳಿಸುತ್ತದೆ ಮತ್ತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು, ಆತ್ಮವಿಶ್ವಾಸ ವೃದ್ಧಿಸುವುದು ಹಾಗೂ ಅವರಲ್ಲಿನ ಪ್ರತಿಭೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದೇ ಈ ಕಲಾ ಉತ್ಸವದ ಉದ್ದೇಶವಾಗಿದೆ ಎಂದರು.
ಸಾಧಕರಿಗೆ ಸನ್ಮಾನ:
ಕಲಾ ಉತ್ಸವದಲ್ಲಿ ಜಿಲ್ಲೆಯ ಹಾಗೂ ಸ್ಥಳೀಯ ಶ್ರೀ ದುರ್ಗಾ ನಾಟ್ಯಕಲಾ ಶಾಲೆಯ ತಂಡಗಳು ಪ್ರತಿಭೆಯನ್ನು ಪ್ರದರ್ಶಿಸಿ ಜನಮನಸೆಳೆದರು. ಕಲ್ಪನಾ ರಶ್ಮಿ ಕಲಾಲೋಕದ ಅಧ್ಯಕ್ಷ ಬಿ.ಎನ್. ಸೂರ್ಯಪ್ರಕಾಶ ನಿರೂಪಿಸಿದರು. ಶ್ರೀ ದುರ್ಗಾ ನಾಟ್ಯಕಲಾ ಶಾಲೆಯ ಪಾಲಕ ವೃಂದದವರು ಕಾರ್ಯಕ್ರಮ ಸಂಯೋಜಿಸಿ ಸಹಕರಿಸಿದರು.