ಮೂಲಭೂತ ಸೌಲಭ್ಯಕ್ಕೆ ಆಗ್ರಹ: ಎಸ್‌ಐಆರ್‌ ಜಾಗೃತಿ ಬೈಕ್‌ ರ್‍ಯಾಲಿಗೆ ತಡೆ

KannadaprabhaNewsNetwork |  
Published : Jul 07, 2026, 02:45 AM IST
ಹೂವಿನಹಡಗಲಿ ಪಟ್ಟಣದ ರಾಜೀವ್‌ನಗರ, ನಜೀರ್‌ ನಗರ ನಿವಾಸಿಗರು, ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ, ಎಸ್‌ಐಆರ್‌ ಬೈಕ್‌ ಜಾಗೃತಿ ರ್ಯಾಲಿಗೆ ತಡೆಯೊಡ್ಡಿದ್ದರು.  | Kannada Prabha

ಸಾರಾಂಶ

ಸಾಕಷ್ಟು ಜನ ಕೆಸರಿನಲ್ಲೇ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಸರಿಯಾಗಿ ಕುಡಿಯುವ ನೀರಿಲ್ಲ.

ಹೂವಿನಹಡಗಲಿ: ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬೈಕ್‌ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಥಾಕ್ಕೆ ತಾಲೂಕು ಕಚೇರಿ ಬಳಿ ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ, ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಬೈಕ್‌ ರ್‍ಯಾಲಿ ಜಾಥಾವು ಜರುಗಿತು.

ಪಟ್ಟಣದಲ್ಲಿರುವ ನಜೀರ್‌ ನಗರ ಮತ್ತು ರಾಜೀವ್‌ ನಗರಕ್ಕೆ ಬೈಕ್‌ ರ್‍ಯಾಲಿ ಹೊರಟಿತ್ತು. ಅದೇ ವೇಳೆಗೆ ಅಲ್ಲಿನ ನಿವಾಸಿಗರು ಮೊದಲ ನಮಗೆ ಸೌಲಭ್ಯ ಕೊಡಿ ನಂತರ ರ್‍ಯಾಲಿಗೆ ಅವಕಾಶ ನೀಡುತ್ತೇವೆಂದು ದಿಢೀರ್‌ ರ್‍ಯಾಲಿ ತಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆ ವೇಳೆ ಎಸ್‌ಐಆರ್‌ ಬೈಕ್‌ ಜಾಗೃತಿ ರ್‍ಯಾಲಿ ಪಟ್ಟಣದ ಬೇರೆ ಕಡೆಗೆ ತನ್ನ ಮಾರ್ಗ ಬದಲಿಸಿತು. ರಾಜೀವ್‌ನಗರ, ನಜೀರ್‌ ನಗರದಲ್ಲಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ. ಬೈಕ್‌ನಲ್ಲಿ ಓಡಾಡಲು ಆಗುತ್ತಿಲ್ಲ. ಸಾಕಷ್ಟು ಜನ ಕೆಸರಿನಲ್ಲೇ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಸರಿಯಾಗಿ ಕುಡಿಯುವ ನೀರಿಲ್ಲ. ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಚರಂಡಿಗಳ ದುರಸ್ತಿ ಇಲ್ಲ. ಈ ರಸ್ತೆ ಕಾಮಗಾರಿ ಮಾಡಲು ಕಳೆದ 2 ತಿಂಗಳ ಹಿಂದೆಯೇ ಶಾಸಕ ಕೃಷ್ಣನಾಯ್ಕ ಭೂಮಿ ಪೂಜೆ ಮಾಡಿದ್ದಾರೆ. ಆದರೆ ಈವರೆಗೂ ಕಾಮಗಾರಿ ಆರಂಭವಾಗಿಲ್ಲ. ನಾವೆಲ್ಲ ರೋಸಿ ಹೋಗಿದ್ದೇವೆ. ನಮ್ಮ ಪ್ರದೇಶಕ್ಕೆ ಎಸ್‌ಐಆರ್‌ ಬೈಕ್‌ ರ್‍ಯಾಲಿ ಬರುವುದು ಬೇಡ ಎಂದು ನಡು ರಸ್ತೆಗೆ ಟ್ರ್ಯಾಕ್ಟರ್‌ ನಿಲ್ಲಿಸಿ ತಡೆಯೊಡ್ಡಿದ ಪ್ರಸಂಗ ಜರುಗಿತು.

ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ, ನಿವಾಸಿಗರ ಸಮಸ್ಯೆಯನ್ನು ಆಲಿಸಿ, ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ನಿವಾಸಿಗಳಾದ ವಲಿಸಾಬ್‌, ಪೀರ್‌ಸಾಬ್‌, ಸುಮಂತ, ಖಾಸಿಂಸಾಬ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯ ಅಭಿವೃದ್ಧಿ ಪಡಿಸುವುದೇ ಕಲಾ ಉತ್ಸವದ ಉದ್ದೇಶ: ತಹಸೀಲ್ದಾರ
ಮಿಡಿ ಸೌತೆ ಕಂಪನಿಯಿಂದ ರೈತರಿಗೆ ಬಾಕಿ ಹಣ ನೀಡದೇ ವಂಚನೆ: ಆರೋಪ