ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಸಾಣೇಹಳ್ಳಿಯ ಶ್ರೀ ಮಠದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ, ಮಕ್ಕಳಿಗೆ ಯುವಕರಿಗೆ ಬಾಲ್ಯದಲ್ಲಿ ಸಂಸ್ಕಾರಗಳನ್ನು ಕಲಿಸಿದರೆ ಟೀಕೆ ಟಿಪ್ಪಣಿಗಳನ್ನು ಹೆದರಿಸುವ ಶಕ್ತಿ ಬರುತ್ತದೆ ಎಂಬ ಉದ್ದೇಶದಿಂದ ಪ್ರತಿದಿನ ಬೆಳಗ್ಗೆ ಇಷ್ಠಲಿಂಗ ದೀಕ್ಷೆ ನೀಡಲಾಗುವುದು. ಅಲ್ಲದ ನಾಟಕೋತ್ಸವದ ನಾಲ್ಕು ದಿನಗಳಲ್ಲಿ ಆರೋಗ್ಯ , ಶಿಕ್ಷಣ, ಧರ್ಮ, ಸಂಸ್ಕೃತಿ ಸಂಸ್ಕಾರದ ಬಗ್ಗೆ ಚಿಂತನ ಮಂಥನ ನಡೆಯುತ್ತದೆ ಉಳಿದಂತೆ ಶಿವಸಂಚಾರದ ಮೂರು ನಾಟಕಗಳು ಹಾಗೂ ಇತರೆ ಜಿಲ್ಲೆಯ ಮೂರು ನಾಟಕಗಳು ಒಟ್ಟು ಆರು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಕೃಷಿಕರಿಗೆ ಅನುಕೂಲವಾಗುವಂತೆ ನ.5ರಂದು ಬೆಳಗ್ಗೆ ಸಾವಯವ ಕೃಷಿಯ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ ಅಲ್ಲದೆ ಅಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಈ ಬಾರಿ ಯುಗದ ಉತ್ಸಾಹವ ನೋಡಿರೇ ಎಂಬ ಘೋಷವಾಕ್ಯದೊಂದಿಗೆ ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ಅರಂಭಗೊಳ್ಳಲಿದೆ.ಸಭಾ ಕಾರ್ಯಕ್ರಮದಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಕುರಿತು ನಿರ್ಧರಿಸಲಾದ ವಿಷಯಗಳ ಮೇಲೆ ವಿಚಾರ ಮಂಡನೆ ನಡೆಯಲಿದೆ. ನಾಡಿನ ವಿಚಾರವಾದಿಗಳು, ಸಾಹಿತಿಗಳು, ಪ್ರಮುಖ ಮಠಾಧೀಶರು, ರಾಜಕಾರಣಿಗಳು, ಕಲಾವಿಧರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
ನ.3 ರಂದು ಹೊಸದುರ್ಗ ಕನಕಿಗುರು ಪೀಠದ ಈಶ್ವರಾನಂದಪುರಿ ಸ್ವಾಮಿಜಿ ಸಾನ್ನಿಧ್ಯ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಜೈವಿಕ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥ ಪಿ ಜಿ ಆರ್ ಸಿಂಧ್ಯಾ, ಚಿಂತಕ ಎಸ್ ಜಿ ಸಿದ್ಧರಾಮಯ್ಯ, ನಟಿ ಪೂಜಾ ಗಾಂಧಿ, ಚಲನಚಿತ್ರ ನಟಿ, ನಟ ನೀನಾಸಂ ಸತೀಶ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಭಾಗವಹಿಸುವರು.
ನ.5 ರಂದು ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಜಗಳೂರು ಶಾಸಕ ದೇವೇಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ರಾಯಚೂರು ವಾಲ್ಮೀಕಿ ವಿವಿಯ ಕುಲಪತಿ ಶಿವಾನಂದಕೆಳಗಿನ ಮನಿ, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಉದ್ಯಮಿ ಹೆಚ್ ಓಂಕಾರಪ್ಪ, ಸಂಪಾದಕ ರಾಜೀವ ಭಾಗವಹಿಸುವರು. ನ. 6 ರಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಸಚಿವ ಶಿವರಾಜ್ ತಂಗಡಗಿ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯರಾದ ನವೀನ್, ಧನಂಜಯ ಸರ್ಜಿ, ಮಾಜಿ ಶಾಸಕ ಸುರೇಶ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ, ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ತುಮ್ಕೋಸ್ ಅಧ್ಯಕ್ಷ ಶಿವಕುಮಾರ್ ಭಾಗವಹಿಸುವರು.