''ದೇವನಹಳ್ಳಿಯಲ್ಲಿ ಹೋರಾಟಗಾರರ ಬಂಧನ ಕ್ರಮ ಖಂಡನೀಯ''

KannadaprabhaNewsNetwork |  
Published : Jun 28, 2025, 12:30 AM ISTUpdated : Jun 28, 2025, 02:12 PM IST
26ಕೆಡಿವಿಜಿ8, 9-ಬಲವಂತದ ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ಶಾಂತಿಯುತ ಹೋರಾಟ ನಡೆಸಿದ್ದ ನಾಯಕರು, ಹೋರಾಟಗಾರರನ್ನು ದೌರ್ಜನ್ಯದಿಂದ ಬಂಧಿಸಿದ ಪೊಲೀಸ್ ಇಲಾಖೆ, ಸರ್ಕಾರದ ಕ್ರಮವನ್ನು ಖಂಡಿಸಿ ದಾವಣಗೆರೆಯಲ್ಲಿ ಗುರುವಾರ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕ ಪ್ರತಿಭಟಿಸಿತು. | Kannada Prabha

ಸಾರಾಂಶ

 ದೇವನಹಳ್ಳಿಯಲ್ಲಿ ಶಾಂತಿಯುತ ಹೋರಾಟ ನಡೆಸಿದ್ದ ನಾಯಕರು, ಹೋರಾಟಗಾರರನ್ನು ದೌರ್ಜನ್ಯದಿಂದ ಬಂಧಿಸಿದ ಪೊಲೀಸ್ ಇಲಾಖೆ, ಸರ್ಕಾರದ ಕ್ರಮ ಖಂಡಿಸಿ ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

  ದಾವಣಗೆರೆ :  ಬಲವಂತದ ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ಶಾಂತಿಯುತ ಹೋರಾಟ ನಡೆಸಿದ್ದ ನಾಯಕರು, ಹೋರಾಟಗಾರರನ್ನು ದೌರ್ಜನ್ಯದಿಂದ ಬಂಧಿಸಿದ ಪೊಲೀಸ್ ಇಲಾಖೆ, ಸರ್ಕಾರದ ಕ್ರಮ ಖಂಡಿಸಿ ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ಮುಖಂಡರು ಮಾತನಾಡಿ, ರಾಜ್ಯ ಸರ್ಕಾರವು ಫಲವತ್ತಾದ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನ ಮಾಡಿಕೊಳ್ಳುವ ವಿರುದ್ಧ 1180 ದಿನಗಳಿಂದ 13 ಗ್ರಾಮಗಳ ರೈತರು ದೇವನಹಳ್ಳಿಯಲ್ಲಿ ಹೋರಾಟ ನಡೆಸಿದ್ದಾರೆ. ಕೃಷಿ, ಹೈನುಗಾರಿಕೆ, ಹಣ್ಣು, ತರಕಾರಿ, ಸೊಪ್ಪು ಬೆಳೆಯುತ್ತಾ, ಕೃಷಿ ಆಧಾರಿತ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಮೃದ್ಧ ಭೂಮಿ ಮೇಲೆ ಭೂಗಳ್ಳರ ಕರಿನೆರಳು ಬಿದ್ದಿದೆ. ಪರಿಣಾಮ ಭೂಮಿ ಅವಲಂಬಿತರ ಬದುಕೇ ನರಕವಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರವಿದ್ದಾಗ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಭೂ ಸುಧಾರಣಾ ನೀತಿಯನ್ನು ಆಗ ವಿರೋಧಿಸಿದ್ದ ಕಾಂಗ್ರೆಸ್ ಪಕ್ಷ ರೈತರೊಂದಿಗೆ ನಾವಿದ್ದೇವೆ. ಇಂತಹ ನೀತಿ ಹಿಮ್ಮೆಟ್ಟಿಸುತ್ತೇವೆಂದು ಹೇಳಿತ್ತು. ಈಗ ಅದೇ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದರೆ, ಅದೇ ನೀತಿ ಈಗ ತಾವು ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸುತ್ತಿರುವುದು ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವಾಗಿದೆ ಎಂದರು.

ರೈತರ ಒಪ್ಪಿಗೆ ಇಲ್ಲದೇ ಭೂಮಿ ಪಡೆಯುವಂತಿಲ್ಲವೆಂಬ ಕಾನೂನಿದ್ದರೂ ಒಂದು ಕಡೆ ದೌರ್ಜನ್ಯದಿಂದ, ಮತ್ತೊಂದು ಕಡೆ ಭೂಮಿಯ ಕಾನೂನುಗಳನ್ನು ತಮಗೆ ಬೇಕಾದ ರೀತಿ ಬದಲಿಸಿ, ಭೂ ಸ್ವಾಧೀನಕ್ಕೆಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಮಹಾದ್ರೋಹ ಎಸಗುತ್ತಿದೆ. ಬಂಧಿಸಿರುವ ಎಲ್ಲ ನಾಯಕರು, ಮುಖಂಡರು, ರೈತರನ್ನು ಸರ್ಕಾರ ಬೇಷರತ್ತಾಗಿ ತಕ್ಷಣ ಬಿಡುಗಡೆ ಮಾಡಬೇಕು. ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ತಾಕೀತು ಮಾಡಿದರು.

ಸಂಘಟನೆಗಳ ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ, ಮಧು ತೊಗಲೇರಿ, ಆವರಗೆರೆ ಚಂದ್ರು,‌ ಮರುಳಸಿದ್ದಯ್ಯ, ಸತೀಶ ಅರವಿಂದ, ಬುಳ್ಳಾಪುರ ಹನುಮಂತಪ್ಪ, ಇ.ಶ್ರೀನಿವಾಸ, ಕೆ.ಎಚ್.ಆನಂದರಾಜ, ಸಂತೋಷ್ ನಾಯಕ ಇತರರು ಇದ್ದರು.

 ರೈತರ ಮನವೊಲಿಸಲು ರಾಜ್ಯ ಸರ್ಕಾರ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ಮೂರು ಸುತ್ತಿನ ಸಭೆ ನಡೆಸಿ, ಬುಧವಾರ ಅಂತಿಮವಾಗಿ ತನ್ನ ನಿರ್ಧಾರ ಪ್ರಕಟಿಸಿದೆ. ರೈತರ ಜೀವನದೊಂದಿಗೆ ಚೆಲ್ಲಾಟವಾಡುವ ಇಂತಹ ನಿರ್ಧಾರ ಸಂಪೂರ್ಣ ರೈತವಿರೋಧಿಯಾಗಿದೆ. ಸರ್ಕಾರವು ಯಾರ ಪರ ಕೆಲಸ ಮಾಡುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

- ಜಿಲ್ಲಾ ಮುಖಂಡರು, ಸಂಯುಕ್ತ ಹೋರಾಟ ಕರ್ನಾಟಕ 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ