ಸಾಮಾಜಿಕ ಸುಧಾರಣೆಗಳಿಗೆ ಹೆಚ್ಚಿನ ಅದ್ಯತೆ ನೀಡುವ, ಜೀವನ ಮೌಲ್ಯಗಳನ್ನು ತಿಳಿಸುವ ಅರ್ಥಗರ್ಭಿತವಾದ ಹಾಡುಗಳ ಮೂಲಕ ಜನರನ್ನು ರಂಜಿಸುವ ಕಲೆಗಳು ತುಂಬಾ ವಿರಳವಾಗಿದ್ದು, ಇಂತಹ ಕಲೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಸಹಕಾರ ನೀಡಲಿದೆ ಎಂದು ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಸಾಮಾಜಿಕ ಸುಧಾರಣೆಗಳಿಗೆ ಹೆಚ್ಚಿನ ಅದ್ಯತೆ ನೀಡುವ, ಜೀವನ ಮೌಲ್ಯಗಳನ್ನು ತಿಳಿಸುವ ಅರ್ಥಗರ್ಭಿತವಾದ ಹಾಡುಗಳ ಮೂಲಕ ಜನರನ್ನು ರಂಜಿಸುವ ಕಲೆಗಳು ತುಂಬಾ ವಿರಳವಾಗಿದ್ದು, ಇಂತಹ ಕಲೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಸಹಕಾರ ನೀಡಲಿದೆ ಎಂದು ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ತಿಳಿಸಿದರು.
ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ನಯನ ಆಸ್ಪತ್ರೆ ಸಭಾಂಗಣದಲ್ಲಿ ಜನ್ನಾಪುರ ಡಾ.ಬಿ.ಆರ್.ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ವತಿಯಿಂದ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಆಯೋಜಿಸಲಾಗಿದ್ದ ಗಾಯಕ ನಾದ ಮಣಿನಾಲ್ಕೂರುರವರ ಕತ್ತಲಹಾಡು ಗಾಯನ ಕಾರ್ಯಕ್ರಮ ಏಕತಾರಿ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಶಿಷ್ಟ ಕಲೆಯನ್ನು ಹೊಂದಿರುವ ನಾದ ಮಣಿನಾಲ್ಕೂರುರವರು ಹಾಡುಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು.
ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿಶೇಷವಾದದ್ದು. ಕಾರಣ ಯಾವುದೇ ಹೆಚ್ಚು ಶಬ್ದವಿಲ್ಲದೇ ಹಾಡು ಕೇಳುವುದು. ಇಂತಹ ಕಾರ್ಯಕ್ರಮಗಳು ಬಯಲು ಸ್ಥಳಗಳಲ್ಲಿ ಅಥವಾ ದೊಡ್ಡ ವೇದಿಕೆಗಳಲ್ಲಿ ನಡೆಸಿ ಹೆಚ್ಚು ಜನರಿಗೆ ಆಲಿಸಲು ಅನುಕೂಲವಾಗುವಂತೆ ಆಯೋಜಿಸಿದರೆ ಒಳ್ಳೆಯದು ಎಂದರು.
ಸ್ತ್ರೀ ರೋಗ ತಜ್ಞೆ ಡಾ.ವೀಣಾ ಭಟ್ ಉಪಸ್ಥಿತರಿದ್ದರು. ಅಂಬೇಡ್ಕರ್ ಜಾನಪದ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಶಂಕರ್ ಬಾಬು ಪ್ರಾರ್ಥಿಸಿ, ಕಲಾವಿದ ಜಿ. ದಿವಾಕರ್ ಸ್ವಾಗತಿಸಿದರು. ಆಕಾಶವಾಣಿಯ ನಳಿನಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ರಾಘವೇಂದ್ರ ಪ್ರಭು.ಎಂ.ಯು. ಗಾಯನ ಕಾರ್ಯಕ್ರಮಕ್ಕೆ ತಬಲ ವಾದನ ನೀಡಿಸಿದರು.
ಸಂಘದ ಪದಾಧಿಕಾರಿಗಳಾದ ಹಿರಿಯ ರಂಗ ಕಲಾವಿದ ಕೆ.ಎಸ್ ರವಿಕುಮಾರ್, ಬಿ. ಪ್ರವೀಣ್ ಕುಮಾರ್, ಜೆ. ಅಭಿನವ, ಬಿ. ಚಿದಾನಂದ, ಎಂ. ಮಂಜುಳ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಲಾಸಕ್ತರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.