ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯದ ಕೆಲಸಗಳಿಗೂ ಪುರಸಭೆ ಅಧಿಕಾರಿಗಳು ಸರ್ವ ಸಭೆ ಒಪ್ಪಿಗೆ ದೊರೆತಿದೆ ಎಂಬ ಷರ ಬರೆದಿದ್ದಾರೆಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ ಓದುವ ವೇಳೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಕಳೆದ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ಕಾಮಗಾರಿ ಹಾಗೂ ನಿವೇಶನ ಅಭಿವೃದ್ಧಿಗಳಿಗೆಲ್ಲ ಅಧಿಕಾರಿಗಳು ಸಭೆಯ ಒಪ್ಪಿಗೆ ದೊರೆತಿದೆ ಎಂಬ ಷರಾ ಬರೆದಿರುವುದು ಅಕ್ಷಮ್ಯ. ಈ ನಡವಳಿಗಳನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿ ಷರಾ ಬರೆಯಬೇಕು ಎಂದು ಆಗ್ರಹಿಸಿದರು.
ಪುರಸಭೆಯಲ್ಲಿ ಅನುದಾನವಿಲ್ಲದಿದ್ದರೂ ಸದಸ್ಯರಿಂದ ಕಾಮಗಾರಿಗೆ ಅರ್ಜಿ ತೆಗೆದುಕೊಳ್ಳುವುದು ಯಾವ ಕಾರಣಕ್ಕೆ ಎಂದು ಸದಸ್ಯ ಆದರ್ಶ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ ಜ್ಯೋತಿ ರಾಜ್ಕುಮಾರ್, ಅನುದಾನ ಬಿಡುಗಡೆಯಾದ ವೇಳೆ ಕಾಮಗಾರಿಗಳನ್ನು ಸೇರ್ಪಡೆಗೊಳಿಸವ ಉದ್ದೇಶದಿಂದ ಸದಸ್ಯರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.ಮುಂದುವರಿದ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಅಣ್ಣಪ್ಪ, ಹಳೇ ಬಸ್ ನಿಲ್ದಾಣದಲ್ಲಿದ್ದ ಪೆಟ್ಟಿಗೆ ಅಂಗಡಿ ಮಾಲೀಕರಿಂದ ಕಳೆದ ಮೂವತ್ತು ವರ್ಷಗಳ ಹಿಂದೆ ತಲಾ ೧೦ ಸಾವಿರದಂತೆ ಹಣ ಪಡೆದು ಬದಲಿ ಅಂಗಡಿಗಳ ನಿರ್ಮಾಣ ಮಾಡಿಕೊಡುವ ಭರವಸೆ ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯ ಸಹ ಮೊದಲ ಹಂತದಲ್ಲೆ ಇವರನ್ನು ಪರಿಗಣಿಸುವಂತೆ ಸೂಚನೆ ನೀಡಿದೆ. ಆದರೆ ಪುರಸಭೆ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ನೀಡುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಹಣ ನೀಡಿದವರಿಗೆ ಹಣ ವಾಪಸ್ಸ ನೀಡಲು ಪುರಸಭೆ ನಿಯಮದಲ್ಲಿ ಅವಕಾಶವಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದರು. ನಂತರ ನಡೆದ ಸಭೆಯಲ್ಲಿ ಆಷಾಢ ಮಾಸದಲ್ಲೆ ಹಳೇ ಬಸ್ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಉದ್ಘಾಟಿಸಲಾಗುವುದು ಹಾಗೂ ಮಳಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಸವಿಲೇವರಿ ಘಟಕ ಉದ್ಘಾಟಿಸಲಾಗುವ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಪುರಸಭೆ ಉಪಾದ್ಯಕ್ಷೆ ಝರೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.