ಸವಣೂರು: ವೀರಶೈವ ಲಿಂಗಾಯತ ಸಮಾಜ ಸಾಗರದಂತೆ. ವೀರಶೈವ ಲಿಂಗಾಯತ ಪಂಗಡಗಳ ಪೈಕಿ ಅತ್ಯಂತ ಪ್ರಾಜ್ಞ ಸಮಾಜ ಬಣಜಿಗ ಸಮಾಜವಾಗಿದೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಸಮಾಜದ ಮುಖಂಡರು, ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ 2ಎ ಮೀಸಲಾತಿ ಪ್ರಮಾಣ ಪತ್ರವನ್ನು ಇನ್ನುಮುಂದೆ ಉದ್ಯೋಗ ಕ್ಷೇತ್ರಕ್ಕೂ ವಿಸ್ತರಿಸಬೇಕೆಂದು ಉಚ್ಚ ನ್ಯಾಯಾಲಯ ಆದೇಶಿಸಿರುವುದನ್ನು ಪ್ರಸ್ತಾಪಿಸಿ, ಈ ಕುರಿತಂತೆ ಸ್ಥಳೀಯ ಸಮಾಜ ಪ್ರಮುಖರು ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು. ಸಕಲ ಜಾತಿ-ಧರ್ಮಗಳೊಂದಿಗೆ ಸೌಹಾರ್ದಯುತವಾಗಿ ಬಾಳ್ವೆ ನಡೆಸುವ ಬಣಜಿಗ ಸಮಾಜ ಮತ್ತಷ್ಟು ಸುಸಂಘಟಿತಗೊಳ್ಳುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು. ಬಸವಣ್ಣನವರು ಹಾಗೂ ದ್ವಾದಶ ಶತಮಾನದ ಶರಣರ ವಚನೋಕ್ತಿಗಳಂತೆ ಆದರ್ಶಪ್ರಾಯ ಜೀವನ ನಡೆಸುತ್ತಿರುವ ಬಣಜಿಗ ಸಮಾಜ ಬಾಂಧವರ ನೇತೃತ್ವದಲ್ಲಿ, ವೀರಶೈವ ಲಿಂಗಾಯತ ಸಮಗ್ರ ಸಮಾಜವನ್ನೂ 2ಎ ವರ್ಗಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಹೋರಾಟ ಸಂಘಟಿಸುವ ಚಿಂತನ-ಮಂಥನ ನಡೆದಿದೆ ಎಂದರು.
ಸಚಿವ ರುದ್ರಪ್ಪ ಲಮಾಣಿ ಪಾಲ್ಗೊಂಡು ಮಾತನಾಡಿದರು.ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಶೆಟ್ಟರ ಅಧ್ಯಕ್ಷತೆ ವಹಿಸಿ, ಬಂಡಿವಾಡದ ಡಾ. ಎ.ಸಿ.ವಾಲಿ ಗುರೂಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧಾರವಾಡ ಬಸವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷೆ ರಾಜೇಶ್ವರಿ ಕಟ್ಟಿಮನಿ ಉಪನ್ಯಾಸ ನೀಡಿದರು.
ನಿವೃತ್ತ ಶಿಕ್ಷಕ ಎಸ್.ಎಸ್. ಕೋರಿಶೆಟ್ಟರ, ಸಮಾಜದ ಯುವ ಘಟಕದ ಅಧ್ಯಕ್ಷ ಕುಮಾರ ರಾಜಕುಮಾರ ಮೆಣಸಿನಕಾಯಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಸೊಪ್ಪಿನ, ಶಿಗ್ಗಾಂವಿ ತಾಲೂಕು ಘಟಕದ ಅಧ್ಯಕ್ಷ ಶಿವಪುತ್ರಪ್ಪ ಜವಳಿ, ಬಾಬಣ್ಣ ಹಂಚಿನ ಹಾಗೂ ಇತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಶೇಖರ ಅಂಗಡಿ ಹಾಗೂ ಚಂದ್ರಶೇಖರ ಗುತ್ತಲ ನಿರ್ವಹಿಸಿದರು.