ಶಿವಮೊಗ್ಗ: ರಾಜ್ಯವನ್ನು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳಿ, ಅಭಿವೃದ್ಧಿಗೆ ಎಳ್ಳುನೀರು ಬಿಟ್ಟ ಕಾಂಗ್ರೆಸ್ ಸರ್ಕಾರದ ‘ದಿವಾಳಿ ಬಜೆಟ್’ ಎಂದು ರಾಜ್ಯ ಸರ್ಕಾರ ಬಜೆಟ್ನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಟೀಕಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್ ನ ಕೇವಲ ಶೇ.16.6ರಷ್ಟು ಮಾತ್ರ ಹಣ ಮೀಸಲಿಟ್ಟಿರುವುದು ಈ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ SCSP/TSP ನಿಧಿಯ ಸುಮಾರು ಶೇ. 97ರಷ್ಟು ಹಣವನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಸಂಸದರು ಆಕ್ಷೇಪಿಸಿದ್ದಾರೆ. ಅಬಕಾರಿ ಟಾರ್ಗೆಟ್ ಅನ್ನು 45,000 ಕೋಟಿ ರೂ.ಗಳಿಗೆ ಏರಿಸಿ, ಮದ್ಯದ ಕಂಪನಿಗಳಿಗೇ ಬೆಲೆ ನಿರ್ಧರಿಸುವ ಹಕ್ಕು ನೀಡಿರುವುದು ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯನ್ನು ತನ್ನ ATM ಆಗಿ ಬಳಸಿಕೊಳ್ಳಲು ಮಾಡಿರುವ ವ್ಯವಸ್ಥಿತ ಸಂಚು ಎಂದು ರಾಘವೇಂದ್ರ ಹೇಳಿದ್ದಾರೆ. ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ನೀಡಲು ಕೇವಲ 25 ಕೋಟಿ ರು. ನೀಡಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿರುವ ಅವರು, ಇದು ಈ ಸರ್ಕಾರದ ಆದ್ಯತೆ ಮತ್ತು ಕಾಳಜಿಗಳನ್ನು ತೋರಿಸುತ್ತಿದೆ ಎಂದಿದ್ದಾರೆ. ಒಟ್ಟಾರೆಯಾಗಿ, ಇದು ಕನ್ನಡಿಗರ ಜೇಬಿಗೆ ಕತ್ತರಿ ಹಾಕುವ, ಭವಿಷ್ಯವಿಲ್ಲದ ಕೇವಲ ‘ಗ್ಯಾರಂಟಿ’ ಕೇಂದ್ರಿತ ಸಾಲದ ಬಜೆಟ್ ಎಂದು ಹೇಳಿದ್ದಾರೆ.