ಹಾವೇರಿ: ದೇಶದಲ್ಲಿ ಕಾನೂನು ಅರಿವು, ಜಾಗೃತಿ ಹಾಗೂ ಸಂಘಟನೆಯ ಮೂಲಕ ರಾಷ್ಟ್ರೀಯ ಸಂಘಟನೆಯಾಗಿ ಅಧಿವಕ್ತಾ ಪರಿಷತ್ ಬೆಳೆಯುತ್ತಿದ್ದು, ಜಿಲ್ಲೆಯಲ್ಲಿ ಸಂಘಟನೆಗೆ ಎಲ್ಲಾ ವಕೀಲರು ಸಹಕಾರ ನೀಡುವಂತಾಗಲಿ ಎಂದು ಅಧಿವಕ್ತಾ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಪಾಟೀಲ ಹೇಳಿದರು.
ದೇಶದಲ್ಲಿ ಕಾನೂನು ಜಾಗೃತಿ ಹಾಗೂ ವಕೀಲ ಬಳಗದವರಿಗೆ ನಿರಂತರವಾಗಿ ಕಾನೂನು ತರಬೇತಿ ನೀಡುತ್ತಾ ವರ್ಷದಲ್ಲಿ ೬ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ ಎಂದರು.
ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷ ಪಿ.ಆರ್. ಮುಂಜೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿವಕ್ತಾ ಪರಿಷತ್ ರಾಷ್ಟ್ರ- ರಾಜ್ಯದಲ್ಲಿನ ವಿಶಾಲ ವ್ಯಾಪ್ತಿಯ ಸಂಘಟನೆಯಾಗಿದೆ. ಅಧಿವಕ್ತಾ ಎಂದರೆ ಕಾನೂನು ಬಲ್ಲವರು- ಕಾನೂನು ತಿಳುವಳಿಕೆಯಳ್ಳವರು ಎಂಬುದಾಗಿದೆ. ಎರಡು ವರ್ಷದಿಂದ ಜಿಲ್ಲೆಯಲ್ಲಿ ಸಂಘಟನೆ ಮಾಡುತ್ತಿದ್ದೇವೆ. ಎಲ್ಲಾ ತಾಲೂಕಿನಲ್ಲಿ ಸಂಘಟನೆ ಮಾಡಲು ವಕೀಲರ ಸಹಕಾರ ನೀಡಬೇಕೆಂದು ಕೇಳಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿದ್ದನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೃತ್ತಿಯನ್ನು ನಿರ್ವಹಣೆ ಮಾಡಲು ತರಬೇತಿಗಳು ಬಹಳ ಮುಖ್ಯ. ರಾಷ್ಟ್ರದ ಮಟ್ಟದಲ್ಲಿ ವಕೀಲರ ಪರವಾಗಿ ಕೆಲಸ ಮಾಡುವ ಅಧಿವಕ್ತಾ ಪರಿಷತ್ ನಿರಂತರವಾಗಿ ವಕೀಲರಿಗೆ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಬಡಿಗೇರ, ಪಿ.ಎಂ. ಬೆನ್ನೂರ, ಎಂ.ಬಿ. ನೀರಲಗಿಮಠ, ಸಿ.ಪಿ. ಜಾವಗಲ್, ನಾರಾಯಣ ಸಾಳಂಕಿ, ಪಿ.ಜಿ. ಪಾಟೀಲ, ಎಂ. ವಿ. ಕುಂಟೆ, ಮೋಹನಸಿಂಗ್ ರಜಪೂರ, ಅಧಿವಕ್ತಾ ಪರಿಷತ್ ಸವಣೂರ ತಾಲೂಕಾಧ್ಯಕ್ಷ ಜಿ.ಎಂ. ಮರಿಗೌಡ್ರ, ಹಾನಗಲ್ ತಾಲೂಕಾಧ್ಯಕ್ಷ ಸತೀಶ ತಿಳವಳ್ಳಿ, ಅಶ್ವಿನಿ ಬೆಳಕರ, ವಿನಾಯಕ ಕುರುಬರ ಇತರರು ಇದ್ದರು.