ಶಿವಯೋಗ ಸಾಧನೆಗೆ ಶರೀರ ಮುಖ್ಯ ಪಾತ್ರ

KannadaprabhaNewsNetwork | Published : Jul 13, 2024 1:34 AM

ಸಾರಾಂಶ

ಮಾನವ ಶರೀರದ ಮಹತ್ವ ಅರಿತುಕೊಳ್ಳಬೇಕಿದೆ. ಮಾನವ ಜನ್ಮ ತಾಳಿ ಏನು ಮಾಡಬೇಕು ಎಂಬುದನ್ನು ನಾವು ಮರೆತಿದ್ದೇವೆ.

ಗದಗ: ಶಿವಯೋಗದ ಸಾಧನೆಗೆ ಶರೀರ ಮುಖ್ಯ ಪಾತ್ರ ವಹಿಸುತ್ತದೆ. ಶರೀರವನ್ನು ಕಾಪಾಡಿಕೊಂಡು ಹೋದಾಗ ಮಾತ್ರ ಶಿವಯೋಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾಶಿ ಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಅವರು ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜ. ಪಂಚಾಚಾರ್ಯ ಸೇವಾ ಸಂಘ, ಜ.ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜ. ವಿಶ್ವಾರಾಧ್ಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗಿದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಶರೀರದ ಮಹತ್ವ ಅರಿತುಕೊಳ್ಳಬೇಕಿದೆ. ಮಾನವ ಜನ್ಮ ತಾಳಿ ಏನು ಮಾಡಬೇಕು ಎಂಬುದನ್ನು ನಾವು ಮರೆತಿದ್ದೇವೆ. ಆದ್ದರಿಂದ ನಮ್ಮ ಸಂಸ್ಕೃತಿ, ವೀರಶೈವ ಪರಂಪರೆಯ ಸಂಪ್ರದಾಯ ಅರಿತುಕೊಂಡು ಶಿವಯೋಗ ಸಾಧನೆ ಮಾಡಬೇಕು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ದೇಶಾಭಿಮಾನ, ಧರ್ಮಾಭಿಮಾನ ಹಾಗೂ ಮಾನವೀಯತೆ ಬೆಳೆಸಬೇಕಿದೆ ಎಂದರು.

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥವು ಶಿವಯೋಗದ ಮಹತ್ವ ತಿಳಿಸಿಕೊಂಡು ಬರುತ್ತಿದೆ. ನಾವು ಮಾಡುವ ಇಷ್ಟಲಿಂಗ ಪೂಜೆ ಶಿವಯೋಗ ಎಂತಲೂ ಕರೆಯುತ್ತಾರೆ. ಅಂಗ ಗುಣಗಳನ್ನು ಕಳೆದುಕೊಂಡು ಲಿಂಗ ಗುಣಗಳನ್ನು ಅಳವಡಿಸಿಕೊಳ್ಳುವವನ್ನು ಯೋಗಿಯಾಗುತ್ತಾನೆ. ಲಿಂಗ ಗುಣಗಳಾದ ಅಹಿಂಸೆ, ದಾನ, ಕ್ಷಮೆ ಅಳವಡಿಸಿಕೊಂಡಾಗ ಜೀವಾತ್ಮ ಪರಮಾತ್ಮನಾಗುತ್ತಾನೆ ಎಂದು ತಿಳಿಸಿದರು.

ದೇಹ ಎಂದರೆ ದಹಿಸಲ್ಪಡುವುದರಿಂದ ಶರೀರವನ್ನು ದೇಹ ಎಂದು ಕರೆದರು. ಕಾಯ ಎಂದರೆ ಕಷ್ಟ ಸಹಿಸಿಕೊಂಡು ಬರುವುದರಿಂದ ಕಾಯ. ಅಂಗ ಎಂದರೆ ವೀರೇಶ್ವರ ಧರ್ಮದ ಪಾರಮಾರ್ಥಿಕ ಭಾಷೆ ಪರಮಾತ್ಮನನ್ನು ಕೂಡುವ ಸ್ಥಳವಾಗಿದ್ದರಿಂದ ಶರೀರಕ್ಕೆ ಅಂಗ ಎಂದು ಕರೆಯಲಾಗಿದೆ. ಪರಮಾತ್ಮ ಕೊಟ್ಟಿರುವ ಈ ಶರೀರವನ್ನು ಶಿವಯೋಗ ಸಾಧನೆಗೆ ಬಳಸಿಕೊಳ್ಳಬೇಕು ಎಂದರು.

ಈ ವೇಳೆ ಶಹಪೂರದ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಗನಸೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಕಾರ್ಯಾಧ್ಯಕ್ಷ ಸಿದ್ದಲಿಂಗಪ್ಪ ಚಳಗೇರಿ, ಉಮಾಪತಿ ಭೂಸನೂರಮಠ, ಎಸ್.ಎಸ್.ಮೇಟಿ, ವೀರಭದ್ರಯ್ಯ ಧನ್ನೂರಹಿರೇಮಠ, ಆರ್.ಕೆ. ಮಠ, ಡಾ. ಶೇಖರ ಸಜ್ಜನರ ಸೇರಿ ಹಲವರು ಇದ್ದರು. ಅಕ್ಷತಾ ಹಿರೇಮಠ ಪ್ರಾರ್ಥಿಸಿದರು. ವೀರೇಶ ಕೂಗು ಸ್ವಾಗತಿಸಿದರು. ಜ. ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಗುರುಶಿದ್ದಯ್ಯ ಹಿರೇಮಠ ನಿರೂಪಿಸಿದರು.

Share this article