ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅತಿವೃಷ್ಟಿ ಅನಾವೃಷ್ಟಿಗಳಿಗೂ ಪರಿಹಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಬಜೆಟ್ಟಿನಲ್ಲಿ ಕಾದಿರಿಸಿದ ಅನುದಾನವನ್ನು ಕೂಡ ಕೊಡದೆ ವಂಚಿಸುತ್ತಿದ್ದು, ಸಾಮಾನ್ಯ ಜನರಿಗೆ ಈ ವಿಚಾರಗಳು ಅರಿವಿಗೇ ಬರುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.ವಕ್ಫ್ ಬೋರ್ಡ್ ವಿಚಾರ ಸೇರಿದಂತೆ ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದಲೇ ನೋಡುವ ಬಿಜೆಪಿ ಜನರ ಭಾವನೆಯನ್ನು ಕೆರಳಿಸುವ ಯತ್ನ ಮಾಡುತ್ತಿದೆ. ವಕ್ಫ್ ಬೋರ್ಡಿನ ಹೆಸರಿನಲ್ಲಿ ಇರುವ ಭೂಮಿ ಬಗ್ಗೆ ತನಿಖೆಯಾಗಲಿ. ದಾಖಲೆಯ ದೃಷ್ಟಿಯಿಂದ ಇದು ಸರಿ ಇದ್ದರೆ ಉಳಿಯುತ್ತೆ ಇಲ್ಲವಾದರೆ ಹೋಗುತ್ತೆ. ಆದರೆ ಈ ದೇಶದಲ್ಲಿ ವಾಸ ಮಾಡುವವರಿಗೆ ಸುರಕ್ಷತೆ ಇಲ್ಲಾ ಎಂಬಂತಹ ಸ್ಥಿತಿ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಓಟು, ಅಧಿಕಾರ ಮತ್ತು ಹಣಕ್ಕಾಗಿಯೇ ರಾಜಕೀಯ ಮಾಡುವ ಬಿಜೆಪಿ, ವಕ್ಫ್ ಬೋರ್ಡ್ ರದ್ದು ಮಾಡೋದಾಗಿದ್ದರೆ ಮಾಡಲಿ. ಕೇಂದ್ರ ಸರ್ಕಾರದ ಅಧಿಕಾರವೂ ಬಿಜೆಪಿ ಕೈಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ರದ್ದು ಮಾಡಬಹುದಿತ್ತು. ಅಧಿಕಾರದಲ್ಲಿದ್ದಾಗ ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿಯವರು ಕೂಡಾ ಮುಸ್ಲೀಮರಿಗೆ ರಕ್ಷಣೆ ನೀಡುವ ಭರವಸೆ ನೀಡಿಲ್ಲವೇ ಎಂದು ಪ್ರಶ್ನಿಸಿ ಜನರ ಭಾವನೆಯನ್ನು ಕೆರಳಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಟೀಕೆ ಮಾಡುತ್ತಾರೆ ಎಂದೂ ಆರೋಪಿಸಿದರು.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಸೇರಿದಂತೆ ಚುನಾಯಿತ ಸರ್ಕಾರವನ್ನು ಬೀಳಿಸುತ್ತೇವೆ ಎಂಬ ಭ್ರಮೆಯಲ್ಲಿರುವ ಬಿಜೆಪಿಯವರು ಶಾಸಕರ ಖರೀದಿಸುವ ಸಲುವಾಗಿ ಹಣದ ಆಮಿಷ ನೀಡುತ್ತಿದ್ದಾರೆ. 2008 ರಲ್ಲಿ ಹಾಗೂ 2018 ರಲ್ಲಿ 17 ಶಾಸಕರನ್ನು ಖರೀದಿಸಿ ಸರ್ಕಾರವನ್ನು ಬೀಳಿಸಿದ್ದರು. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ಭ್ರಷ್ಟಾಚಾರವನ್ನು ದೇಶವ್ಯಾಪಿ ಸಾರಿದ್ದ ಪ್ರಧಾನಿ ನರೇಂದ್ರ ಮೋದಿ ನಂತರ ದೋಸ್ತಿ ಸರ್ಕಾರದಲ್ಲಿ ಅಜಿತ್ ಪವಾರ್ರನ್ನು ಉಪಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿರಲಿಲ್ಲವೇ ಎಂದರು.40 ವರ್ಷಗಳಿಂದ ಸುಳ್ಳಿನ ಸರಮಾಲೆ ಹೆಣೆದು ಸಾರ್ವಜನಿಕ ಕ್ಷೇತ್ರದಲ್ಲಿರುವ ಶಾಸಕರಿಗೆ ದ್ವೇಷದ ರಾಜಕಾರಣ ಹೊರತು ಪಡಿಸಿ ಕನಿಷ್ಠ ಜ್ಞಾನವೂ ಇಲ್ಲ ಎಂದು ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ವಿರುದ್ದ ಹರಿಹಾಯ್ದರು.
ತಾನು ಸದಾ ಪಕ್ಷದ ಕಾರ್ಯಕರ್ತರ ಪರ ಎನ್ನುವ ಶಾಸಕರು ಈ ಕ್ಷೇತ್ರದ ಜನರ ಪರ ಇದ್ದಾರೋ ಅಥವಾ ಬಿಜೆಪಿ ಕಾರ್ಯಕರ್ತರಿಗಷ್ಠೇ ಶಾಸಕರೇ ಎಂಬದನ್ನು ಸ್ಪಷ್ಟಪಡಿಸಬೇಕು. ಮರಳು ಸಾಗಾಣಿಕೆ ಸೇರಿದಂತೆ ಬಿಜೆಪಿ ಕಾರ್ಯಕರ್ತರಿಗೆ ಎಲ್ಲಾ ಅಕ್ರಮಗಳಿಗೂ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಅರೆಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಮೇಗರವಳ್ಳಿಯಲ್ಲಿ ಅರಣ್ಯ ಇಲಾಖೆ ವಿರುದ್ಧ ಧರಣಿ ನಡೆಸಿರುವುದನ್ನು ಖಂಡಿಸಿದರು.ಕೆಪಿಸಿಸಿ ಮುಖಂಡ ಜಿ.ಎಸ್.ನಾರಾಯಣರಾವ್, ಬಗರ್ಹುಕುಂ ಸಮಿತಿ ಸದಸ್ಯ ಡಿ.ಎಸ್. ವಿಶ್ವನಾಥ ಶೆಟ್ಟಿ, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್ ಇತರರು ಇದ್ದರು.