ಬೆಂಗಳೂರು : ಉದ್ಯಾನ ನಗರಿಯ ಆಗಸದಲ್ಲಿ ಆರ್ಭಟಿಸಲು ದೇಶ-ವಿದೇಶಗಳ ಯುದ್ಧ ವಿಮಾನಗಳು ಯಲಹಂಕ ಏರ್ಫೋರ್ಸ್ ಸ್ಟೇಷನ್ಗೆ ಬಂದಿಳಿದಿವೆ. ಫೆ.10ರಿಂದ 14ರ ವರೆಗೆ ‘ಏರೋ ಇಂಡಿಯಾ-2025’ರಲ್ಲಿ ಮೈನವಿರೇಳಿಸುವ ಆಕರ್ಷಕ ಪ್ರದರ್ಶನ ನೀಡಲು ಸಜ್ಜಾಗಿದ್ದು, ಈಗಾಗಲೇ ತಾಲೀಮು ಆರಂಭವಾಗಿದೆ.
ರಷ್ಯಾದ ರಹಸ್ಯ ಕಾರ್ಯಾಚರಣೆಯ 5ನೇ ತಲೆಮಾರಿನ ಯುದ್ಧ ವಿಮಾನ ‘ಎಸ್ಯು-57’ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಮತ್ತೊಂದೆಡೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ತೇಜಸ್ ವೈಮಾನಿಕ ಪ್ರದರ್ಶನದ ಆಕರ್ಷಣೆಯಾಗಿರಲಿದೆ. ಪ್ರತಿಷ್ಠಿತ ಏರೋಬ್ಯಾಟಿಕ್ ತಂಡ ಸೂರ್ಯ ಕಿರಣ್ ಆಕಾಶದಲ್ಲಿ ಭಾರತ ಧ್ವಜದ ತ್ರಿವರ್ಣದ ಚಿತ್ತಾರವನ್ನು ಬಿಡಿಸಲಿದೆ. ಭಾರತೀಯ ವಾಯುಸೇನೆಯ ರಫೇಲ್, ಎಸ್ಯು-30, ಎಚ್ಎಎಲ್ ಧ್ರುವ ಹೆಲಿಕಾಪ್ಟರ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್ಯುಎಚ್), ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್ಸಿಎಚ್) ಸೇರಿದಂತೆ ವಿವಿಧ ಮಾದರಿಯ ಮಿಲಿಟರಿ ವಿಮಾನ, ಹೆಲಿಕಾಪ್ಟರ್ ಮತ್ತು ಸರಕು ವಿಮಾನಗಳು ಭಾಗವಹಿಸಲಿವೆ.
ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್, ಇಂಗ್ಲೆಂಡ್, ಜರ್ಮನಿ, ಸ್ವೀಡನ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು, ಮಿಲಿಟರಿ ಸಂಬಂಧಿಸಿದ ಉತ್ಪನ್ನಗಳು ಪ್ರದರ್ಶನಕ್ಕೆ ಇರಲಿವೆ. ದೇಶಿಯವಾಗಿ ಅಭಿವೃದ್ಧಿಪಡಿಸಿರುವ ವಿವಿಧ ಕಂಪನಿಗಳ 275ಕ್ಕೂ ಹೆಚ್ಚು ಮಿಲಿಟರಿ ಮತ್ತು ಬಾಹ್ಯಾಕಾಶ ಸಂಬಂಧಿಸಿದ ಉತ್ಪನ್ನಗಳು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ದೇಶ-ವಿದೇಶಗಳ 900ಕ್ಕೂ ಹೆಚ್ಚು ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿವೆ. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸೆಮಿನಾರ್ಗಳು, ಹೂಡಿಕೆ ಮತ್ತು ಜಂಟಿ ಸಹಭಾಗಿತ್ವಕ್ಕೆ ಸಂಬಂಧಿಸಿದ ಒಪ್ಪಂದಗಳು ಆಗಲಿವೆ.
ಏರೋ ಇಂಡಿಯಾದ ಪ್ರಮುಖಾಂಶಗಳು
-ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿ.
-900ಕ್ಕೂ ಹೆಚ್ಚು ಕಂಪನಿಗಳು, ಪ್ರದರ್ಶಕರಿಂದ ಮಿಲಿಟರಿ ಉತ್ಪನ್ನಗಳ ಪ್ರದರ್ಶನ.
-ಮಿಲಿಟರಿ ಉತ್ಪನ್ನಗಳ ಉತ್ಪಾದನೆ, ಖರೀದಿ, ತಂತ್ರಜ್ಞಾನ ವಿನಿಮಯ ಕುರಿತು ಒಪ್ಪಂದಗಳು.
-ಮಿಲಿಟರಿ ಉತ್ಪನ್ನಗಳಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳು.
ಪ್ರದರ್ಶನ ನೀಡುವ ವಿಮಾನಗಳು
ರಷ್ಯಾದ ಎಸ್ಯು-57, ರಫೇಲ್, ಎಸ್ಯು-30, ಎಚ್ಎಎಲ್ ತೇಜಸ್, ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ಹಾಕ್, ಎಚ್ಎಎಲ್ ಧ್ರುವ ಹೆಲಿಕಾಪ್ಟರ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್ಯುಎಚ್), ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್ಸಿಎಚ್), ಅಪಾಚೆ ಹೆಲಿಕಾಪ್ಟರ್, ಸರಕು ಸಾಗಣೆ ಸಿ-17 ಗ್ಲೋಬ್ ಮಾಸ್ಟರ್ ಸೇರಿದಂತೆ ಹಲವು ಯುದ್ಧ ಮತ್ತು ಸರಕು ಮತ್ತು ತರಬೇತಿ ವಿಮಾನಗಳು ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿವೆ.
ಪ್ರಯಾಣಿಕರೇ ಗಮನಿಸಿ: 14ರವರೆಗೆ
ವಿಮಾನ ಹಾರಾಟ ಸಮಯ ಬದಲು
ಯುದ್ಧ ವಿಮಾನ ತಾಲೀಮು । ನಾಗರಿಕ ವಿಮಾನ ವ್ಯತ್ಯಯ
ಕನ್ನಡಪ್ರಭ ವಾರ್ತೆ ಬೆಂಗಳೂರುಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 5ರಿಂದ ಫೆ. 14ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟದ ಸಮಯ ಬದಲಾವಣೆಯಾಗಲಿದೆ.
ಯಲಹಂಕ ವಾಯುನೆಲೆಯಲ್ಲಿ ಫೆ.10ರಿಂದ 14ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಫೆ.5ರಿಂದಲೇ ಪೂರ್ವಾಭ್ಯಾಸ ಆರಂಭಿಸಲಾಗಿದೆ. ಹೀಗಾಗಿ ಫೆ.5ರಿಂದ 14ರವರೆಗೆ ಕೆಲ ಸಮಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿನ ವಾಯುಯಾನ ಪ್ರದೇಶವನ್ನು ಮುಚ್ಚಲಾಗುತ್ತದೆ.
ಹೀಗಾಗಿ 10 ದಿನ ಪ್ರತಿದಿನ ಕೆಲ ಸಮಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈಗಾಗಲೇ ನಿಗದಿಯಾಗಿರುವ ವಿಮಾನಯಾನ ಸಮಯವನ್ನು ಪರಿಷ್ಕರಿಸಲಾಗುತ್ತಿದೆ.ಫೆ.5ರಿಂದ 8ರವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ. ಫೆ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಫೆ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ, ಫೆ.11 ಮತ್ತು 12ರಂದು ಮಧ್ಯಾಹ್ನ 12ರಿಂದ 3ರವರೆಗೆ ಹಾಗೂ ಫೆ.13 ಮತ್ತು 14ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶವನ್ನು ಮುಚ್ಚಲಾಗುತ್ತದೆ.
ಈ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದದಲ್ಲಿ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಪ್ರಯಾಣಿಕರು ತಮ್ಮ ವಿಮಾನ ಹಾರಾಟದ ಪರಿಷ್ಕೃತ ವೇಳಾಪಟ್ಟಿಯನ್ನು ವಿಮಾನಯಾನ ಸಂಸ್ಥೆ ಮೂಲಕ ಪಡೆಯುವಂತೆ ಬಿಐಎಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಏರ್ಶೋಗೆ ಉಚಿತ ವೋಲ್ವೋ ಬಸ್ ಸೇವೆ
ಬೆಂಗಳೂರು : ಯಲಹಂಕ ಏರ್ಫೋರ್ಸ್ ಸ್ಟೇಷನ್ನಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ವೀಕ್ಷಣೆಗೆ ತೆರಳುವವರಿಗಾಗಿ ಮೆಜೆಸ್ಟಿಕ್, ಶಿವಾಜಿನಗರ, ಹೆಬ್ಬಾಳ, ಐಟಿಪಿಎಲ್, ಕೆಂಗೇರಿ ಸೇರಿದಂತೆ 9 ಪ್ರಮುಖ ಸ್ಥಳಗಳಿಂದ ಉಚಿತ ವೋಲ್ವೋ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಚಾರ ದಟ್ಟಣೆ ತಪ್ಪಿಸಲು ರಕ್ಷಣಾ ಸಚಿವಾಲಯದಿಂದಲೇ ವೋಲ್ವೋ ಬಸ್ಗಳನ್ನು ಗುತ್ತಿಗೆ ಪಡೆಯಲಾಗಿದೆ.ವೈಮಾನಿಕ ಪ್ರದರ್ಶನವನ್ನು ಸುಸೂತ್ರವಾಗಿ ನಡೆಸಲು ರಕ್ಷಣಾ ಇಲಾಖೆ, ಭಾರತೀಯ ವಾಯುಸೇನೆ, ಜಿಲ್ಲಾಡಳಿತ, ಬಿಬಿಎಂಪಿ, ಸಿಐಎಸ್ಎಫ್, ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್, ಸಂಚಾರ ಪೊಲೀಸರು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿವೆ.
ಸುಗಮ ಸಂಚಾರಕ್ಕಾಗಿ ಪೊಲೀಸ್, ಬಿಬಿಎಂಪಿ, ಹೆದ್ದಾರಿ ಪ್ರಾಧಿಕಾರ ಮತ್ತು ಮೆಟ್ರೋ ರೈಲು ನಿಗಮಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲಾಗಿದೆ. ಯಲಹಂಕ ಸುತ್ತಲಿನ ರಸ್ತೆಗಳನ್ನು ಅಗಲೀಕರಣ ಮಾಡಲಾಗಿದೆ. ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು ದಟ್ಟಣೆ ಉಂಟಾಗುವ ಪ್ರದೇಶಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ದಟ್ಟಣೆಯನ್ನು ಪರಿಹರಿಸಲು ಜಂಟಿ ವೈಮಾನಿಕ ಸಮೀಕ್ಷೆಯನ್ನು ನಡೆಸಲಾಗುತ್ತದೆ. ರಿಯಲ್ ಟೈಮ್ ಮಾಹಿತಿಯನ್ನು ಸಂಚಾರ ಪೊಲೀಸರೊಂದಿಗೆ ಹಂಚಿಕೊಂಡು ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ.ಪ್ರದರ್ಶನ ಸ್ಥಳದಲ್ಲಿ ಆಗಮಿಸುವ ಮತ್ತು ನಿರ್ಗಮಿಸುವವರಿಗಾಗಿ ಪ್ರತ್ಯೇಕ ಮಾರ್ಗಗಳನ್ನು ಕಲ್ಪಿಸಲಾಗಿದೆ. ಭದ್ರತೆಗೆ ಪೊಲೀಸರು ಹಾಗೂ ಸೇನೆಯ ವಿವಿಧ ವಿಭಾಗಗಳು ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ತುರ್ತು ಪರಿಸ್ಥಿತಿ ಎದುರಿಸಲು ಅಣಕು ಪ್ರದರ್ಶನಗಳನ್ನು ನಡೆಸಲಾಗಿದೆ.
ಇಂದಿರಾ ಕ್ಯಾಂಟೀನ್ ವ್ಯವಸ್ಥೆ: ಪಾರ್ಕಿಂಗ್ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ಗಳು ಸೇರಿದಂತೆ ವಿವಿಧ ಉಪಹಾರ ಕೋರ್ಟ್ಗಳು, ಗೂಡಂಗಡಿಗಳು ಇರಲಿವೆ. ಕುಡಿಯುವ ನೀರಿನ ಕೇಂದ್ರಗಳು, ನೆರವಿನ ಕೇಂದ್ರಗಳು, ವೈದ್ಯಕೀಯ ಸಹಾಯ ಕೇಂದ್ರಗಳು, ಪ್ರಾಥಮಿಕ ಹೃದಯ ಚಿಕಿತ್ಸೆ ಕೇಂದ್ರ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.ಬಿಗಿ ಬಂದೋಬಸ್ತ್:ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುವವರ ಸುರಕ್ಷತೆಗಾಗಿ ಬಹುಹಂತದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗೃಹ ಸಚಿವಾಲಯ, ಬೆಂಗಳೂರು ಪೊಲೀಸ್, ಸಿಐಎಸ್ಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಾರ್ಯಾಚರಣೆ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ, ದಿನದ 24 ತಾಸು ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್, ಸಂದರ್ಶಕರು, ಪ್ರದರ್ಶಕರು ಮತ್ತು ವಿಐಪಿಗಳಿಗಾಗಿ ಮೀಸಲಾದ ತಪಾಸಣಾ ವಲಯಗಳು. ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿಗಳು, ತಡೆರಹಿತ ಸಂವಹನಕ್ಕಾಗಿ ತಾತ್ಕಾಲಿಕ ಮೊಬೈಲ್ ಟವರ್ ಮತ್ತು ನೆಟ್ವರ್ಕ್ ಬೂಸ್ಟರ್ಗಳನ್ನು ಅಳವಡಿಸಲಾಗಿದೆ.ಉಚಿತ ಬಸ್ ಹೊರಡುವ ಸ್ಥಳಗಳಿವುಮೆಜೆಸ್ಟಿಕ್, ಶಿವಾಜಿನಗರ, ಹೆಬ್ಬಾಳ, ಐಟಿಪಿಎಲ್, ಕೆಂಗೇರಿ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ವಿಜಯನಗರ ಟಿಟಿಎಂಸಿ, ಒರಾಯನ್ ಮಾಲ್ ರಾಜಾಜಿನಗರ ಬಸ್ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಕ್ಯಾಂಪಸ್.