ಬೆಂಗಳೂರು : ಬಿಡುವಿಲ್ಲದ ಸರ್ಕಾರಿ ಕಚೇರಿಗಳು, ವಾಣಿಜ್ಯ ಕಟ್ಟಡಗಳ ನಡುವೆ ಹಚ್ಚ-ಹಸಿರಿನ ಗಿಡ-ಮರಗಳಿಂದ ವ್ಯಾಪಿಸಿರುವ ಕಬ್ಬನ್ ಪಾರ್ಕ್ ಗುರುವಾರ ಅಕ್ಷರಶಃ ಚಿಣ್ಣರ ಕಲರವದಿಂದ ತುಂಬಿ ಹೋಗಿತ್ತು.
ಬಣ್ಣ ಬಣ್ಣದ ಹೂವುಗಳು, ಕೆಂಪು-ಹಳದಿ ಬಣ್ಣ ಕನ್ನಡದ ಬಾವುಟಗಳು, ಹೂವು, ಹಣ್ಣು, ತರಕಾರಿಗಳಿಂದ ರೂಪುಗೊಂಡಿದ್ದ ಪ್ರಾಣಿ, ಪಕ್ಷಿಗಳ ಕಲಾಕೃತಿಗಳು, ಕಣ್ಣರಳಿಸಿ ಬೆರಗಿನಿಂದ ಹೂವು, ಗಿಡಗಳನ್ನು ನೋಡುತ್ತಾ ನಿಂತ ಪುಟಾಣಿಗಳು, ಶಾಲಾ ಕಾಲೇಜು ಹುಡುಗ, ಹುಡುಗಿಯರ ಕೇಕೇ.. ಇದರ ನಡುವೆ ಮಹಿಳೆಯರ ಡೊಳ್ಳು ಕುಣಿತದ ಹಿಮ್ಮೇಳ ಹಬ್ಬದ ವಾತಾವಣವನ್ನೇ ಸೃಷ್ಟಿಸಿತ್ತು.
ಹೌದು...ಕಬ್ಬನ್ಪಾರ್ಕ್ನಲ್ಲಿ ಆರಂಭವಾಗಿರುವ ತೋಟಗಾರಿಕೆ ಇಲಾಖೆಯcಯಾಗಿದ್ದು, ಸಾವಿರಾರು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಅದ್ಧೂರಿಯಾಗಿ ಪುಷ್ಪ ಪ್ರದರ್ಶನ ಆಯೋಜಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಚಾಲನೆ ನೀಡಿದರು.
ತಿರುಮಲ ನರ್ಸರಿ, ಇಂಡೋ ಅಮೇರಿಕನ್ ಹೈಬ್ರೀಡ್ ಸೀಡ್ಸ್, ಭಾಗ್ಯಲಕ್ಷ್ಮಿ ಫಾರ್ಮ್ಸ್ ಸಹಯೋಗದಲ್ಲಿ ಹಳದಿ, ಬಿಳಿ ಸೇವಂತಿಗೆ, ಕೆಂಪು ಗುಲಾಬಿ ಸೇರಿದಂತೆ ಅಲಂಕಾರಿಕ ಸಾವಿರಾರು ವೈವಿದ್ಯಮಯವಾದ ಹೂವುಗಳು ಹಾಗೂ ತೋಟಗಾರಿಕೆ ಇಲಾಖೆಯಿಂದ 25 ರಿಂದ 30 ಸಾವಿರ ಹೂಕುಂಡಗಳನ್ನು ಆಕರ್ಷಣೀಯವಾಗಿ ಜೋಡಿಸಲಾಗಿದ್ದು ಪುಷ್ಪ ಪ್ರದರ್ಶನಕ್ಕೆ ಮೆರುಗು ನೀಡುತ್ತಿದೆ.
ಕಬ್ಬನ್ಪಾರ್ಕ್ನಲ್ಲಿ ಇದೇ ಮೊದಲ ಬಾರಿಗೆ ಬಿಎಸ್ಎಫ್ ವತಿಯಿಂದ ಸೇನಾ ಶಸ್ತ್ರಾಸ್ತ್ರ ಹಾಗೂ ವಾಹನಗಳ ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ಮಾದರಿಯ ಗನ್ಗಳು, ರೈಫಲ್ಗಳು, ಯುದ್ಧ ರಕ್ಷಣಾ ಕವಚಗಳು, ಬಾಂಬ್ ಪತ್ತೆ ಮಾಡುವ ಉಪಕರಣ, ಯುದ್ಧದ ಟ್ಯಾಂಕರ್ಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಬಗೆಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸೇನಾ ಸಿಬ್ಬಂದಿ ವೀಕ್ಷಕರಿಗೆ ಈ ಎಲ್ಲ ಉಪಕರಣಗಳ ಮಾಹಿತಿ ಒದಗಿಸುತ್ತಿದ್ದು ಜನರಲ್ಲಿ ಕುತೂಹಲ ಹೆಚ್ಚಿಸಿದೆ.
20 ಕ್ಕೂ ಹೆಚ್ಚು ಕೆಪೆಕ್ ಮಳಿಗೆಗಳು
ಕಬ್ಬನ್ಪಾರ್ಕ್ ಪುಷ್ಪ ಪ್ರದರ್ಶನದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್) 20ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿದೆ. ಸಿದ್ಧ ಸಿರಿಧಾನ್ಯ ಉತ್ಪನ್ನಗಳು, ಚಟ್ನಿಪುಡಿ, ರಾಗಿ ಮಾಲ್ಟ್, ಹುರಿಹಿಟ್ಟು, ತೆಂಗು ಆಧಾರಿತ ಉತ್ಪನ್ನಗಳು, ಗಾಣದ ಎಣ್ಣೆ, ಸಂಬಾರು ಪುಡಿ, ಗಿಣ್ಣು, ಜೋಳದ ರೊಟ್ಟಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದಾಗಿದೆ.
ಗಿಡ-ಮರ, ಪುಷ್ಪ ಪ್ರದರ್ಶನ ಮಾತ್ರವೇ ಅಲ್ಲ, ಶಾಪಿಂಗ್ ಪ್ರಿಯರಿಗೆಂದೇ ಅಲಂಕಾರಿಕ ಗೃಹೋಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ವಿವಿಧ ಖಾದ್ಯಗಳು, ಹಣ್ಣು, ಪಾನೀಯಗಳ ಮಳಿಗೆಗಳು ಕೈಬೀಸಿ ಕರೆಯುತ್ತಿವೆ. ಅದಕ್ಕೆಂದೇ ನೂರು ಮಳಿಗೆಗಳನ್ನು ಹಾಕಲಾಗಿದೆ. ಕಬ್ಬನ್ಪಾರ್ಕ್ ಪುಷ್ಪ ಪ್ರದರ್ಶನ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಎಂ. ಜಗದೀಶ್, ಉಪ ನಿರ್ದೇಶಕಿ ಕುಸುಮಾ ಮತ್ತು ಕಬ್ಬನ್ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಅವರ ಉಸ್ತುವಾರಿಯಲ್ಲಿ ನಡೆಯುತ್ತಿದೆ.
ಉದ್ಯಾನದ ಸೌಂದರ್ಯ ಕಾಪಾಡಿ
ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕು. ಕಬ್ಬನ್ ಉದ್ಯಾನವನದ ಸುಂದರ ಪ್ರಕೃತಿಯಲ್ಲಿ ಆಯೋಜಿಸಲಾಗಿರುವ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಆಗಮಿಸಿ ವೀಕ್ಷಿಸುವ ಮೂಲಕ ಉದ್ಯಾನವನದ ಸೌಂದರ್ಯ ಕಾಪಾಡಬೇಕು.
- ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿ, ರಾಜ್ಯ ಸರ್ಕಾರ