ಬ್ಯಾಡಗಿ: ಬಡವರಿಗೆ ಮನೆ ವಿತರಿಸುವ ಆಶ್ರಯ ಯೋಜನೆ ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರ್ಕಾರ. ಅಷ್ಟೇ ಏಕೆ..? ಸದರಿ ಯೋಜನೆ ಈಗಾಗಲೇ ದೇಶವ್ಯಾಪಿ ಅನುಷ್ಟಾನಗೊಳ್ಳುತ್ತಿದ್ದು ಇದೊಂದು ಪಕ್ಷದ ಹೆಮ್ಮೆಯ ಕಾರ್ಯಕ್ರಮ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಂದಿಗೂ ಬಡವರ ಪರವಾದ ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಳ್ಳತ್ತಾ ಬಂದಿದೆ. ಹೀಗಾಗಿಯೇ ಕಾಂಗ್ರೆಸ್ ಬಡವರ ಪಕ್ಷವೆಂದು ಮೊದಲಿನಿಂದಲೂ ನಾಮಧೇಯ ಪಡೆದುಕೊಂಡಿದ್ದು ಈಗಲೂ ಸಹ ನಮ್ಮ ಪಕ್ಷ ಎಲ್ಲೆಲ್ಲಿ ಅಧಿಕಾರದಲ್ಲಿದೆ ಅಲ್ಲಿಯೂ ಬಡವರ ಪರವಾದ ಕಾರ್ಯಕ್ರಮಗಳನ್ನೇ ಪ್ರಕಟಿಸುತ್ತಾ ಬಂದಿದೆ ಎಂದರು.
ಶೇ.80ರಷ್ಟು ಬಡವರಿರುವ ದೇಶ: ಭಾರತ ಶೇ.80ರಷ್ಟು ಬಡವರಿರುವ ದೇಶವಾಗಿದ್ದು, ಹೀಗಾಗಿಯೇ ಕಳೆದ 65 ವರ್ಷಗಳ ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು ಬಡವರನ್ನುದ್ದೇಶಿಸಿಯೇ ಮಾಡಿದ್ದಿದೆ, ಹೀಗಾಗಿ ನಮ್ಮ ಪಕ್ಷದ ಉದ್ದೇಶಗಳು ಜನರಿಗೆ ಅರ್ಥವಾಗಿದ್ದು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ, ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರೆದಿದ್ದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ ಎಂದರು.ಸಮಸ್ಯೆಗೆ ಪರಿಹಾರ:ಕಂದಾಯ ಇಲ್ಲದಿರುವ ಕಡೆಗಳಲ್ಲಿ ಕಟ್ಟಿಕೊಂಡಿರುವ ಮನೆಗಳು ಹಾಗೂ ನಿವೇಶನಗಳ ಮಾಲೀಕರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಂತಹ ಪ್ರಕರಣಗಳನ್ನು ನಮ್ಮ ಸರ್ಕಾರ ಮುಕ್ತಿಗೊಳಿಸಿದ್ದು ಪ್ರತಿಯೊಬ್ಬರಿಗೂ ಮಾಲೀಕತ್ವದ ಹಕ್ಕನ್ನು ನೀಡಲಾಗುತ್ತಿದೆ, ಇನ್ಮುಂದೆ ಸದರಿ ನಿವೇಶನ ಮಾಲೀಕತ್ವ ದೃಢೀಕರಣ ಸೇರಿದಂತೆ ಕೆಲವೆಡೆ ಖಾಲಿ ಇರುವ ನಿವೇಶನಗಳನ್ನು ಸರ್ಕಾರ ವಿತರಿಸುವ ಮೂಲಕ ಸೂರು ಒದಗಿಸಿದೆ ಎಂದರು. ಈ ಸಂದರ್ಭದಲ್ಲಿ ತಾಪಂ ಇಓ ಕೆ.ಎಂ. ಮಲ್ಲಿಕಾರ್ಜುನ, ತಹಸೀಲ್ದಾರ್ ಸೇರಿದಂತೆ ಮುಖಂಡರಾದ ದಾನಪ್ಪ ಚೂರಿ, ವಿ.ವಿ. ಹಿರೇಮಠ, ಲಕ್ಷ್ಮೀ ಜಿಂಗಾಡೆ ಹಾಗೂ ಇನ್ನಿತರರಿದ್ದರು.