ದೇಶ ಸದೃಢವಾಗಿ ನಿಂತಿರುವುದಕ್ಕೆ ಸಂವಿಧಾನ ಕಾರಣ

KannadaprabhaNewsNetwork | Published : Apr 15, 2025 12:53 AM

ಸಾರಾಂಶ

ದೇಶ ಸದೃಢ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದಕ್ಕೆ ಅಂಬೇಡ್ಕರ್‌ ನೀಡಿರುವ ಸಂವಿಧಾನ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು ದೇಶ ಸದೃಢ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದಕ್ಕೆ ಅಂಬೇಡ್ಕರ್‌ ನೀಡಿರುವ ಸಂವಿಧಾನ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು. ನಗರದ ಟೌನ್‌ಹಾಲ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲಾದ ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್ ಮಾದರಿಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದಾಗಿನಿಂದ ಬಾಬಾ ಸಾಹೇಬ್‌ರ ಪ್ರತಿಮೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಬಾಬಾ ಸಾಹೇಬ್ ಪ್ರತಿಮೆ ಇಡಲಾಗಿತ್ತು. ಬೆಂಗಳೂರಿಗೆ ಹತ್ತಿರವಿರುವ ತುಮಕೂರಿನಲ್ಲಿ ಇಡಲಾಗಿಲ್ಲ ಎಂಬ ಕೊರಗು ಇತ್ತು. ಪ್ರತಿಮೆ ಇಡಲು ಎಲ್ಲರೂ ಸಹಕರಿಸಿದರು‌ ಎಂದರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಹೋಗಿದ್ದರೆ ಭಾರತ ಯಾವ ಸ್ಥಾನಮಾನದಲ್ಲಿ ಇರುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ‌‌. ಸ್ವಾತಂತ್ರ್ಯ ದ ನಂತರ ಪ್ರತಿಯೊಂದು ಜಾತಿ, ಧರ್ಮ ಸಮಾನವಾಗಿ ಬಾಳಬೇಕೆಂಬ ಮಾತುಗಳು ಕೇಳಿ ಬಂದಾಗ ಸಂವಿಧಾನ ರಚಿಸುವ ಜವಾಬ್ದಾರಿ ಅಂಬೇಡ್ಕರ್ ರವರ ಹೆಗಲ ಮೇಲೆ ಬೀಳುತ್ತದೆ ಆಗ ಅದಕ್ಕೆ ತಕ್ಕಂತೆ ಕೆಲಸ ಮಾಡಿದ ಅವರು ಶ್ರೇಷ್ಠ ಸಂವಿಧಾನ ನೀಡಿದರು ಎಂದರು. ಈ ದೇಶದಲ್ಲಿ ಸಮಾನತೆ ಬರಬೇಕು. ಜಾತಿವ್ಯವಸ್ಥೆ ನಮ್ಮ ತಿನ್ನುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್‌ರು ಹಿಂದೂ ವಿರೋಧಿಯಲ್ಲ. ಹಿಂದೂ ಸಮಾಜವನ್ನು ಬದಲಾವಣೆ ಮಾಡಲು ಮುಂದಾದರು. ಮನುಸ್ಮೃತಿಯನ್ನು ಸುಟ್ಟರು. ಆದರು ಬದಲಾವಣೆ ಆಗಲಿಲ್ಲ. ಜಾತಿವ್ಯವಸ್ಥೆ, ಸಮಾಜ ಬದಲಾಗಲಿಲ್ಲ. ಇದರಿಂದ ಮನನೊಂದು, ಆಕಸ್ಮಿಕವಾಗಿ ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯಲಾರೇ ಎನ್ನುತ್ತಾರೆ. ಸಹೋದರತ್ವ ಭಾವನೆ ಬರಲಿಲ್ಲವಲ್ಲ ಎಂದು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗುತ್ತಾರೆ ಎಂದರು.

ಒಂದು ಕಾಲಕ್ಕೆ ಬಡತನದ ದೇಶವಾಗಿದ್ದ ಭಾರತ, ಇಂದು ವಿಶ್ವದಲ್ಲಿ 4ನೇ ಆರ್ಥಿಕ ದೇಶವಾಗಿ ಬೆಳೆದಿರುವುದಕ್ಕೆ ಸಂವಿಧಾನ ಕಾರಣ. ರಿಸರ್ವ್ ಬ್ಯಾಂಕ್ ಇಲ್ಲವಾಗಿದ್ದರೆ ನಮ್ಮ ಆರ್ಥಿಕ ಮಟ್ಟ ಏನಾಗಿರುತ್ತಿತ್ತು ಎಂದು ಊಹಿಸಲು ಅಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಬದಲಾವಣೆ ಆಗುತ್ತಿವೆ. ವಿದ್ಯಾವಂತರಾಗುತ್ತಿದ್ದಾರೆ ಮನಸ್ಸು ಬದಲಾಗುತ್ತಿಲ್ಲ. ಸಮಾಜ ಅರ್ಥ ಮಾಡಿಕೊಳ್ಳಬೇಕು‌. ಇಲ್ಲವಾದರೆ ಹೀಗೆ ಉಳಿದುಬಿಡುತ್ತೇವೆ. ಬದಲಾವಣೆ ಎಂಬುದು ಸಂವಿಧಾನದ ಪುಟದಲ್ಲಿ ಇದ್ದರೆ ಸಾಲದು ಎಂದರು.

ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನವನ್ನು ಏಪ್ರಿಲ್ 5ರಂದು ಸಾಂಕೇತಿಕವಾಗಿ ಆಚರಿಸಿದ್ದೇವೆ. ಎಲ್ಲರ ಸಲಹೆ ಮೇರೆಗೆ ಇಂದು ಆಚರಿಸಲಾಗುತ್ತಿದೆ. ದೇಶದಲ್ಲಿ ಕ್ಷಾಮ, ಬಡತನವಿದ್ದಾಗ ಕೃಷಿ ಇಲಾಖೆಯನ್ನು ತೆಗೆದುಕೊಂಡು ಹಸಿರು ಕ್ರಾಂತಿ ಮಾಡಿದರು. ಎಲ್ಲ ಬಡವರಿಗೆ ಹತ್ತು ಕೆ‌.ಜಿ‌. ಅಕ್ಕಿ ನೀಡುತ್ತಿರುವ ಶಕ್ತಿ ಬಂದಿರುವುದು ಬಾಬು ಜಗಜೀವನ್ ರಾಮ್ ರವರ ಕೊಡುಗೆಯಿಂದ ಸಾಧ್ಯವಾಗಿದೆ ಎಂದರು.ಕೇಂದ್ರ ಸಚಿವ ವಿ.ಸೋಮಣ್ಣ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ,ಶಾಸಕ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಡಾ. ಎಚ್.ಡಿ.ರಂಗನಾಥ್, ಎಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಇತರರಿದ್ದರು.

Share this article