ಕೆರೆಯ ಕಲುಷಿತ ನೀರೇ ಕುಡಿಯಲು ಆಸರೆ

KannadaprabhaNewsNetwork | Published : May 10, 2024 11:51 PM

ಸಾರಾಂಶ

ನವಲಗುಂದ ತಾಲೂಕಿನ ಅರಹಟ್ಟಿ, ಸೊಟಕನಾಳ, ಕೊಂಗವಾಡ ಗ್ರಾಮಗಳಲ್ಲಿ ನೀರಿನ ಬರ ಎದುರಾಗಿದೆ. ಗ್ರಾಮೀಣ ಪ್ರದೇಶದ ರೈತರಿಗೆ ನೀರಿನ ಬರ ಎದುರಾಗಿದೆ.

ಈಶ್ವರ ಜಿ. ಲಕ್ಕುಂಡಿ

ಕನ್ನಡಪ್ರಭ ವಾರ್ತೆ ನವಲಗುಂದ

ತಾಲೂಕಿನ ಕೆಲ ಗ್ರಾಮಗಳಲ್ಲಿ ಬರಗಾಲದ ಛಾಯೆ ಬೀರಿದೆ. ಕುಡಿಯಲೂ ನೀರಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಇದ್ದ ನೀರನ್ನು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ಭೀತಿಯಲ್ಲಿ ಜನರಿದ್ದಾರೆ.

ತಾಲೂಕಿನ ಅರಹಟ್ಟಿ, ಸೊಟಕನಾಳ, ಕೊಂಗವಾಡ ಗ್ರಾಮಗಳಲ್ಲಿ ನೀರಿನ ಬರ ಎದುರಾಗಿದೆ. ಗ್ರಾಮೀಣ ಪ್ರದೇಶದ ರೈತರಿಗೆ ನೀರಿನ ಬರ ಎದುರಾಗಿದೆ. ಅರಹಟ್ಟಿ ಗ್ರಾಮದ ಕೆರೆಯಲ್ಲಿ ಇನ್ನೆರಡು ತಿಂಗಳಿಗಾಗುವಷ್ಟು ಮಾತ್ರ ನೀರಿದೆ. ಆದರೆ, ಕಲುಷಿತ ನೀರನ್ನೇ ಅನಿವಾರ್ಯವಾಗಿ ಕುಡಿಯಬೇಕಿದೆ. ಇನ್ನು ಪಕ್ಕದ ತಡಹಾಳ ಗ್ರಾಮದಿಂದ ಬೈಕ್ ಅಥವಾ ಸೈಕಲ್ ಮುಖಾಂತರ ಕೆಲವರು ಕುಡಿಯುವ ನೀರು ತರುತ್ತಾರೆ.

ಸೊಟಕನಾಳದಲ್ಲಿ ಬಳಕೆ ಮಾಡಲು, ಕುಡಿಯಲು ಕೆರೆಯ ನೀರೇ ಆಸರೆಯಾಗಿದೆ. ಕೆರೆಯಲ್ಲಿರುವ ನೀರು ತುಂಭಾ ಕಲುಷಿತವಾದರೂ ಅದನ್ನೇ ಬಡವರು, ರೈತರು ಕುಡಿಯಲು ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವರು ಶುದ್ಧ ನೀರಿನ ಘಟಕದಿಂದ ನೀರು ತರುತ್ತಿದ್ದಾರೆ.

ಕೊಂಗವಾಡ ಗ್ರಾಮದಲ್ಲಿಯೂ ನೀರಿನ ಬರ ಎದುರಾಗಿದ್ದರೂ ಯಾವೊಬ್ಬ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಇದರಿಂದ ಸುಮಾರು 2 ಕಿಮೀ ದೂರದ ಕೊಂಗವಾಡ ಹಳೆಯ ಗ್ರಾಮಕ್ಕೆ ತೆರಳಿ ನೀರನ್ನು ತರಬೇಕಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ತಿಳಿಸಿದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.ಅಲೆದಾಟಜಾನುವಾರುಗಳು ಬಿಸಿಲಿನ ಬೇಗೆಯಿಂದ ಬಾಯ್ತೆರೆದು ಅಲೆದಾಡುವಂತಾಗಿದೆ. ಕೃಷಿ ಹೊಂಡ, ಹಳ್ಳ –ಕೊಳ್ಳಗಳಲ್ಲಿ ನೀರು ಇಲ್ಲದೆ ಜಾನುವಾರುಗಳು ಪರಿತಪಿಸುವಂತಾಗಿದೆ. ಶುದ್ಧೀಕರಿಸದೇ ನಲ್ಲಿ ಮುಖಾಂತರ ಮನೆಗೆ ನೀರು ಪೂರೈಸಲಾಗುತ್ತಿದ್ದು, ಅನಾರೋಗ್ಯ ಕಾಡುವ ಆತಂಕ ಎದುರಾಗಿದೆ.ಮಹೇಶ ಆನಂದಿ, ಗುಡಿಸಾರ ಗ್ರಾಪಂ ಮಾಜಿ ಸದಸ್ಯಅನಾರೋಗ್ಯದ ಭೀತಿ

ಕಲುಷಿತ ನೀರನ್ನು ಕುಡಿದರೆ ಅನಾರೋಗ್ಯದ ಭೀತಿಯಿಂದ ಬಳಲುವಂತಾಗುತ್ತದೆ. ನಮ್ಮ ಕೆರೆಗೆ ಈ ವರ್ಷ ಕಾಲುವೆ ಮುಖಾಂತರ ಕೆರೆಗೆ ನೀರನ್ನು ತುಂಬಿಸಿಕೊಳ್ಳದೆ ಇರುವುದರಿಂದ ಉಳಿದ ನೀರನ್ನೇ ಕುಡಿಯಲು ಮತ್ತು ಬಳಸಲು ಉಪಯೋಗಿಸುತ್ತಿದ್ದೇವೆ. ಕೆಲವರು ಪಕ್ಕದ ತಡಹಾಳ ಗ್ರಾಮದಿಂದಕ್ಕೆ ನೀರು ತರುತ್ತಾರೆ.

ಹನಮಂತಪ್ಪ ಸಂದೀಮನಿ ಅರಹಟ್ಟಿ ರೈತ

Share this article