ಸಮಾಜದ ಏಳ್ಗೆಗೆ ಮಠಗಳ ಕೊಡುಗೆ ಅಪಾರ: ಡಿವೈಎಸ್ಪಿ ವೆಂಕಟಪ್ಪ ನಾಯಕ

KannadaprabhaNewsNetwork |  
Published : Feb 03, 2026, 02:45 AM IST
ಸಮಾವೇಶದಲ್ಲಿ ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರು ಅನ್ನದಾನೀಶ್ವರ ಸ್ವಾಮೀಜಿಯವರ ನೂರೊಂದು ಭಾವಚಿತ್ರಗಳಿರುವ ಛಾಯಾಚಿತ್ರವನ್ನು ಶ್ರೀಗಳಿಗೆ ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಠದ 8ನೇ ಪೀಠಾಧಿಪತಿಗಳಾದ ಸೊರಟೂರು ಅಜ್ಜನವರ ಲಿಂಗೈಕ್ಯ ಶತಮಾನೋತ್ಸವ ಹಾಗೂ ವಿದ್ಯಾ ಸಮಿತಿ ಶತಮಾನೋತ್ಸವ ಎರಡೂ ಏಕಕಾಲದಲ್ಲಿ ಆಚರಿಸಲಾಗುತ್ತಿದೆ ಎಂದರು.

ಮುಂಡರಗಿ: ಹಿಂದಿನ ಕಾಲದಲ್ಲಿ ಬಡವರು ಹಾಗೂ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲಿಯುವುದೆಂದರೆ ಬಹಳ ದುಸ್ತರವಾಗಿತ್ತು. ಮುಂಡರಗಿ ಅನ್ನದಾನೀಶ್ವರ ಮಠ ಸೇರಿದಂತೆ ಬಡವರ ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕನ್ನಡ ನಾಡಿನ ಅನೇಕ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ತಿಳಿಸಿದರು.

ಅನ್ನದಾನೀಶ್ವರ ಮಹಾಶಿವಯೋಗಿಗಳ 156ನೇ ಯಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ಜರುಗಿದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನ ಸಂಭ್ರಮದ ಸಮಾರೋಪ ಹಾಗೂ ಸಿಬ್ಬಂದಿ ಸಮಾವೇಶದಲ್ಲಿ ಶ್ರೀಮಠದಿಂದ ಅನ್ನದಾನೀಶ್ವರ ಪುರಸ್ಕಾರ ಪಡೆದು ಮಾತನಾಡಿದರು.

ನೆರೆಯ ಕೊಪ್ಪಳ ಜಿಲ್ಲೆಯಲ್ಲಿ ಹುಟ್ಟಿದ ನನಗೆ ಶಿಕ್ಷಣ ಕಲಿಯಲು ಇಂತಹ ಜಾಗ ದೊರೆತಿದ್ದರಿಂದಾಗಿ ನಾನು ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವೆ. ಕರ್ತವ್ಯದಲ್ಲಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೊರೆತಾಗೊಮ್ಮೆ ಶ್ರೀಗಳು ಕರೆದು ಹರಸಿ ಆಶಿರ್ವದಿಸುತ್ತಾ ಬಂದಿದ್ದಾರೆ. ಪೂಜ್ಯರಿಗೆ ಯಾವುದೇ ಆಸೆ, ದುರಾಸೆಗಳಿರುವುದಿಲ್ಲ. ಸಮಾಜವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವುದು ಶ್ರೀಗಳ ಉದ್ದೇಶವಾಗಿರುತ್ತದೆ. ಅನ್ನದಾನೀಶ್ವರರು ನಮಗೆ ಅನ್ನ, ವಿದ್ಯ ಜತೆಗೆ ಸಂಸ್ಕಾರವನ್ನು ಕಲಿಸಿದ್ದಾರೆ ಎಂದರು.

ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಠದ 8ನೇ ಪೀಠಾಧಿಪತಿಗಳಾದ ಸೊರಟೂರು ಅಜ್ಜನವರ ಲಿಂಗೈಕ್ಯ ಶತಮಾನೋತ್ಸವ ಹಾಗೂ ವಿದ್ಯಾ ಸಮಿತಿ ಶತಮಾನೋತ್ಸವ ಎರಡೂ ಏಕಕಾಲದಲ್ಲಿ ಆಚರಿಸಲಾಗುತ್ತಿದೆ. ಸೊರಟೂರು ಅಜ್ಜನವರು ಸರ್ವಧರ್ಮದ ಸಮನ್ವಯಿಗಳಾಗಿದ್ದರು. ತಾವು 10ನೇ ಪೀಠಾಧಿಪತಿಯಾದ ನಂತರ ಎಲ್ಲರ ಸಹಾಯ, ಸಹಕಾರದಿಂದ ಅನೇಕ ಅಭಿವೃದ್ದಿ ಕಾರ್ಯಗಳನ್ನು, ಸಾಹಿತ್ಯದ ಚಟುವಟಿಕೆ ಹಾಗೂ ಸಮಾಜೋಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಅದನ್ನು ಕಿರಿಯ ಪೂಜ್ಯರು ಸಹ ಮುಂದುರಿಸಿಕೊಂಡು ಹೋಗಬೇಕು ಎಂದರು.

ಶಿವಕುಮಾರ ಬಳೂಟಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರಿಗೆ ಅನ್ನದಾನೀಶ್ವರ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಸಂಸ್ಥೆಯಲ್ಲಿ ಕಳೆದ ವರ್ಷ ಸೇವಾ ನಿವೃತ್ತಿ ಹೊಂದಿದ ಡಿ.ಟಿ. ಪಾಟೀಲ, ಎಸ್.ಎಸ್. ಇನಾಮತಿ, ಡಿ.ಸಿ. ಮಠ ಸೇರಿದಂತೆ ಅನೇಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ವಿದ್ಯಾ ಸಮಿತಿಯ ಆರ್.ಆರ್. ಹೆಗಡಾಳ, ಕರಬಸಪ್ಪ ಹಂಚಿನಾ‍ಳ, ವೀರನಗೌಡ ಗುಡದಪ್ಪನವರ, ಯು.ಸಿ. ಹಂಪಿಮಠ, ಡಾ.ಅನ್ನದಾನಿ ಮೇಟಿ, ಎಸ್.ಬಿ. ಹಿರೇಮಠ, ಸಿ.ಎಸ್. ಅರಸನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಎಸ್.ಎಸ್. ಮಠದ, ದೀಪುಶ್ರೀ ಕಣವಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಬಜೆಟ್ ‘ವಿಕಸಿತ ಭಾರತ’ದತ್ತ ಧೃಡ ಹೆಜ್ಜೆ : ಕ್ಯಾ. ಗಣೇಶ್ ಕಾರ್ಣಿಕ್
ಹೆಣ್ಣೆಂಬ ಕೀಳರಿಮೆ ಬಿಟ್ಟು ಮುನ್ನುಗ್ಗಿ: ಶಾರದಾ