ಕೇವಲ ಚರಕ ಸುತ್ತುವುದರಿಂದ ದೇಶಕ್ಕೆ ಸ್ವಾತಂತ್ರ್ಯಸಿಗಲಿಲ್ಲ

KannadaprabhaNewsNetwork | Published : Aug 19, 2024 12:48 AM

ಸಾರಾಂಶ

ಕೇವಲ ಚರಕ ಸುತ್ತುವುದರಿಂದ ದೇಶಕ್ಕೆ ಸ್ವಾತಂತ್ರ್ಯಸಿಗಲಿಲ್ಲ. ನೇತಾಜಿ ಸುಭಾಷ್‌ಚಂದ್ರ ಬೋಸ್ ಭಯಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಗಾಂಧೀಜಿ ಮಹಾತ್ಮನಲ್ಲ, ಹಾಗೇ ಕರೆಯಲು ಬಾರದೆಂದು ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕೇವಲ ಚರಕ ಸುತ್ತುವುದರಿಂದ ದೇಶಕ್ಕೆ ಸ್ವಾತಂತ್ರ್ಯಸಿಗಲಿಲ್ಲ. ನೇತಾಜಿ ಸುಭಾಷ್‌ಚಂದ್ರ ಬೋಸ್ ಭಯಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಗಾಂಧೀಜಿ ಮಹಾತ್ಮನಲ್ಲ, ಹಾಗೇ ಕರೆಯಲು ಬಾರದೆಂದು ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ವಾರ್ಡ್‌ ನಂ.35 ರಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ನೇತಾಜಿ ಪುತ್ಥಳಿ ಅನಾವರಣಗೊಳಿಸುವ ಮೂಲಕ ವೃತ್ತ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶ್ರೀಮಂತನಾದ ನೇತಾಜಿ ಸುಭಾಷಚಂದ್ರ ಬೋಸ್ ಅವರು ಇಂದಿನ ಐಎಎಸ್‌ಗೆ ಸಮವಾದ ಐಸಿಎಸ್ ತ್ಯಜಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿಷ್ಠ ಸೈನ್ಯ ಹುಟ್ಟು ಹಾಕಿ ಶ್ರಮಿಸಿದ ಮಹಾನ್ ನಾಯಕ. ಈಗ ನನ್ನನ್ನು ಹೇಗೆ ತುಳಿಯಲು ಯತ್ನಿಸುತ್ತಿದ್ದಾರೋ ಹಾಗೆಯೇ ನಿರಂತರವಾಗಿ ಅವರನ್ನು ತುಳಿಯುತ್ತಲೇ ಬಂದರು. ಇಲ್ಲಿಯವರೆಗೂ ಅವರ ಸಾವಿನ ನಿಖರತೆ ಸಹ ತಿಳಿದಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರು ರಷ್ಯಾದಲ್ಲಿ ಹೇಗೆ ನಿಧನರಾದರು ಎನ್ನುವುದು ತಿಳಿಯದೇ ಇರುವುದು ನೋವಿನ ಸಂಗತಿ ಎಂದರು.ಜಾತಿ, ಜಾತಿ ಎಂದು ಕಚ್ಚಾಡುವುದು ಬಿಟ್ಟು ಹಿಂದುಗಳು ಒಂದಾಗದಿದ್ದರೇ ಅವರು ಶೇ.50 ರಷ್ಟಾದರೇ ನಿಮ್ಮನ್ನು ಸುಮ್ಮನೆ ಬಿಡಲ್ಲ. ಸುರಕ್ಷತೆಗಾಗಿ ಹಿಂದುತ್ವ, ದೇಶಕ್ಕಾಗಿ ಕೆಲಸ ಮಾಡುವವರನ್ನು ಬೆಂಬಲಿಸಿ ಮತ ಹಾಕಿ. ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ಬಿಜೆಪಿ, ಹಿಂದು ಸಂಘಟನೆಗಳು ಬಿಟ್ಟರೇ ಬೇರೆ ಯಾರು ಖಂಡಿಸಲಿಲ್ಲ. ರಾಹುಲ್ ಗಾಂಧಿ ಹೊಸ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರೇ, ಮೋದಿಯವರು ಅಭಿನಂದನೆ ಜತೆ ಅಲ್ಲಿನ ಹಿಂದುಗಳು, ಸಿಖ್ಖರು, ಕ್ರೈಸ್ತರ್‌ ರಕ್ಷಣೆ ನಿಮ್ಮ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದರು.ಯಾವ ಶಕ್ತಿ ಅಡ್ಡ ಬಂದರೂ ಮನಗೂಳಿ ಅಗಸಿ ಬಳಿ ದಲಿತರಿಗಾಗಿ ಮನೆ:

ನಗರದ ಮನಗೂಳಿ ಅಗಸಿ ಬಳಿ ದಲಿತ ಸಮುದಾಯವರು ನೂರಾರು ವರ್ಷಗಳಿಂದ ವಾಸಿಸುತ್ತಿರುವ ಮನೆಗಳ ಹತ್ತಿರದ ಕಂದಾಯ ಇಲಾಖೆಯ 7 ಎಕರೆ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಮಾಡಿಕೊಂಡಿರುವುದನ್ನು ಕರ್ನಾಟಕ ಸ್ಲಂ ಬೋರ್ಡ್‌ ಅಂತ ಉತಾರ ಮಾಡಿಕೊಡಿ. ಅಲ್ಲಿ ದಲಿತರಿಗಾಗಿ 200 ಆಶ್ರಯ ಮನೆಗಳನ್ನು ನಿರ್ಮಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವೆ. ಜಗತ್ತಿನ ಯಾವ ಶಕ್ತಿ ಅಡ್ಡ ಬಂದರೂ ಮನಗೂಳಿ ಅಗಸಿ ಬಳಿ ದಲಿತರಿಗಾಗಿ ಮನೆಗಳನ್ನು ಕಟ್ಟುವೆ. ಅದಕ್ಕೆ ಡಾ.ಅಂಬೇಡ್ಕರ್ ನಗರ ಅಂತ ಹೆಸರನ್ನೇ ಇಡುವೆ ಎಂದು ಭರವಸೆ ನೀಡಿದರು.ಭಾರತೀಯ ಸೇನೆ, ರೈಲ್ವೆ ಬಿಟ್ಟರೇ ಅತೀ ಹೆಚ್ಚು ಆಸ್ತಿ ಇರುವುದು ವಕ್ಫ್‌ದು. ಒಂದು ಪಾಕಿಸ್ತಾನಕ್ಕಿಂತಲೂ ಹೆಚ್ಚು ವಿಸ್ತಿರ್ಣ ಎನ್ನುವುದು ಯೋಚಿಸಬೇಕಾದ ವಿಚಾರ. ಮನಸ್ಸಿಗೆ ಬಂದಂತೆ ಸರ್ಕಾರದ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿಕೊಂಡಿರುವುದು ತಡೆಯಲಂದೇ ವಕ್ಫ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ವಕ್ಫ್ ಆಸ್ತಿ ಮುಕ್ತಗೊಳಿಸಿ ಕಂದಾಯ ಇಲಾಖೆಗೆ ನೀಡಬೇಕು. ಅದರಲ್ಲಿಯ ಅರ್ಧ ಆಸ್ತಿ ದಲಿತರಿಗೆ ಮನೆ ಕಟ್ಟಿಸಿಕೊಳ್ಳಲು ನೀಡುವಂತೆ ಪ್ರಧಾನಿಗಳಿಗೆ ಪತ್ರ ಬರೆಯುವೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ವೃತ್ತ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಜಿದ್ದಿ ಸೇರಿದಂತೆ ಮಾಜಿ ಸೈನಿಕರು ಮತ್ತಿತರನ್ನು ಸನ್ಮಾನಿಸಲಾಯಿತು.ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಮಹೇಶ ಒಡೆಯರ, ಮುಖಂಡರಾದ ರಾಜೇಶ ದೇವಗಿರಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಆನಂದ ಹಂಜಿ, ಪ್ರವಚನಕಾರ ಬಾಬುರಾವ್ ಮಹಾರಾಜ್ ಇದ್ದರು. ರೇವಣಸಿದ್ದ ಮುಳಸಾವಳಗಿ ಸ್ವಾಗತಿಸಿದರು. ಮರನೂರ ನಿರೂಪಿಸಿದರು.2018ರಲ್ಲಿ ನಿಮ್ಮ ಆಶೀರ್ವಾದಿಂದ ಶಾಸಕನಾದೆ. ನಮ್ಮದೇ ಸರ್ಕಾರವಿದ್ದರೂ ಜಗಳಾಡಿ ಮಂತ್ರಿ ಆಗಲಿಲ್ಲ. ಆದರೆ, ನಿರೀಕ್ಷೆ ಮೀರಿ ಅನುದಾನ ತಂದು, ವಿಜಯಪುರ ಮಾದರಿ ನಗರವನ್ನಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ನಗರದಲ್ಲಿ ನೇತಾಜಿ ಸೇರಿದಂತೆ ದೇಶಕ್ಕಾಗಿ ಶ್ರಮಿಸಿದ ಅನೇಕ ಮಹಾನ್ ನಾಯಕರ ವೃತ್ತ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪನೆ, ಮಾರ್ಗಗಳಿಗೆ ಮಹಾಪುರುಷರ ಹೆಸರು ನಾಮಕರಣಗೊಳಿಸಲಾಗಿದೆ. ಅವರ ಶ್ರಮ, ತತ್ವ ಸಿದ್ಧಾಂತಗಳು, ಸಾಧನೆ ಇಂದಿನ ಯುವ ಪೀಳಿಗೆ ತಿಳಿಸುವ ಉದ್ದೇಶವಾಗಿದೆ.

-ಬಸನಗೌಡ ಪಾಟೀಲ ಯತ್ನಾಳ,
ಶಾಸಕರು.

Share this article