ಮಾನಸಿಕ, ದೈಹಿಕ ಸದೃಢತೆಯಿಂದ ದೇಶ ಬಲಿಷ್ಠ

KannadaprabhaNewsNetwork | Published : Dec 16, 2024 12:48 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಇದರಿಂದ ಉತ್ತಮ ಸಮಾಜ ಮತ್ತು ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಬಹುದು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಇದರಿಂದ ಉತ್ತಮ ಸಮಾಜ ಮತ್ತು ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಬಹುದು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಭಾನುವಾರ ವೃಕ್ಷಥಾನ್ ಹೆರಿಟೇಜ್ ರನ್-2024ರ ಅಂಗವಾಗಿ ನಡೆದ 21 ಕಿ. ಮೀ. ಪ್ರಿ ಇವೆಂಟ್ ಸೈಕ್ಲಿಂಗ್ ರೈಡ್ ಪೂರ್ಣಗೊಳಿಸಿದ ಬಳಿಕ ಹೆರಿಟೇಜ್ ರನ್ ಮೆಡಲ್ ಬಿಡುಗಡೆ ಮಾಡಿ ಮಾತನಾಡಿದರು. ವಿದೇಶಗಳಲ್ಲಿ ಫಿಟ್ನೆಸ್‌ ಮತ್ತು ಸಿಕ್ಸ್‌ ಪ್ಯಾಕ್ ಎಂಬುದು ಅಲ್ಲಿನ ಜನರ ಸಂಸ್ಕೃತಿಯಾಗಿದೆ. ಅಲ್ಲಿ ಶೇ.80 ರಷ್ಟು ಜನ ಸಿಕ್ಸ್‌ ಪ್ಯಾಕ್ ಹೊಂದಿರುತ್ತಾರೆ. ಹಗಲಿರಲಿ ರಾತ್ರಿಯಿರಲಿ ಯಾವುದೇ ಸಮಯದಲ್ಲಿ ಬಿಡುವು ಸಿಕ್ಕರೂ ವ್ಯಾಯಾಮವನ್ನು ಮಾಡುವ ಮೂಲಕ ಸದೃಢ ಆರೋಗ್ಯಕ್ಕೆ ಒತ್ತು ನೀಡುತ್ತಾರೆ. ಈ ಅಭಿರುಚಿ ನಮ್ಮಲ್ಲಿಯೂ ಬರಬೇಕು. ಎಲ್ಲರೂ ವಾಕಿಂಗ್, ರನ್ನಿಂಗ್ ಸೇರಿದಂತೆ ದೈಹಿಕ ಆರೋಗ್ಯಕ್ಕೆ ಸಮಯ ನೀಡಬೇಕು ಎಂದು ಕರೆ ನೀಡಿದರು.ಇಂದು ಪಾಲ್ಗೊಂಡ 21 ಕಿ.ಮೀ. ಓಟದ ರೂಟ್ ಹೆರಿಟೇಜ್ ರನ್‌ನಲ್ಲಿ ಪಾಲ್ಗೊಳ್ಳುವ ಓಟಗಾರರಿಗೆ ಹೇಳಿ ಮಾಡಿಸಿದಂತಿದೆ. ಬಸವ ನಾಡಿನ ಅಸ್ಮಿತೆಯಾಗಿರುವ ಪ್ರಾಚೀನ ಸ್ಮಾರಕಗಳಾದ ಐತಿಹಾಸಿಕ ಗೋಳಗುಮ್ಮಟ, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಚೌಕ್, ಗಾಂಧಿ ಮತ್ತು ಶಿವಾಜಿ ಚೌಕಗಳು, ಇಬ್ರಾಹಿಂ ರೋಜಾ, ಸೈನಿಕ ಶಾಲೆ, ಜ್ಞಾನಯೋಗಾಶ್ರಮ, ಶ್ರೀ ಸಿದ್ದೇಶ್ವರ ದೇವಸ್ಥಾನಗಳ ಮೂಲಕ ಈ ಓಟ ನಡೆಯಲಿದೆ. ಇದರಿಂದ ಓಟಗಾರರಿಗೆ ವಿಜಯಪುರ ನಗರದ ಪ್ರಮುಖ ಪ್ರವಾಸಿ ತಾಣಗಳ ಪರಿಚಯದ ಜೊತೆಗೆ ಸುಂದರ ಪರಿಸರ ಮತ್ತು ಪ್ರವಾಸೋದ್ಯಮದ ಬಗ್ಗೆಯೂ ಹೊಸ ಅನುಭವ ನೀಡಲಿದೆ. ಅಲ್ಲದೇ, ಪರಿಸರ, ಪ್ರವಾಸೋದ್ಯಮ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.ಸಚಿವ ಎಂ.ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ವೃಕ್ಷಥಾನ್ ಗೆ ದಿನಗಣನೆ ಆರಂಭವಾಗಿದ್ದು ಎಸ್ಪಿ ಸ್ವಯಂ ಪ್ರೇರಣೆಯಿಂದ ಮತ್ತು ಮುಂಚೂಣಿಯಲ್ಲಿದ್ದುಕೊಂಡು ಇಂದು ಸೈಕ್ಲಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಇಲಾಖೆಯ ಅಧಿಕಾರಿಗಳೂ ಅವರೊಂದಿಗೆ ಭಾಗವಹಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಸ್ಪೂರ್ತಿ ನೀಡಿದ್ದಾರೆ. ಈವರೆಗೆ ನಡೆದ ವೃಕ್ಷಥಾನ್ ಗಳಲ್ಲಿ ಪೊಲೀಸರು ಮತ್ತು ಸಾರ್ವಜನನಿಕರ ಸಂಪೂರ್ಣ ಸಹಕಾರದಿಂದ ಈ ಓಟ ದೇಶಾದ್ಯಂತ ಹೆಸರು ಮಾಡಲು ಅನುಕೂಲವಾಗಿದೆ. ಮುಂಬರುವ ದಿನಗಳಲ್ಲಿ ಈ ಹೆರಿಟೇಜ್ ರನ್ ದೇಶದ ಪ್ರತಿಷ್ಠಿತ ಮ್ಯಾರಾಥಾನ್ ಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದರು.ಎಸ್ಪಿ ಲಕ್ಷ್ಮಣ ನಿಂಬರಗಿ 21 ಕಿ.ಮೀ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ 10 ಕಿ.ಮೀ. ಮತ್ತು ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಸುನೀಲ ಕಾಂಬಳೆ 5 ಕಿ.ಮೀ. ಮೆಡಲ್ ಗಳನ್ನು ಬಿಡುಗಡೆ ಮಾಡಿದರು. ಇದಕ್ಕೂ ಮುಂಚೆ ಡಾ.ಬಿ.ಆರ್.ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಪ್ರಿ ಇವೆಂಟ್ ಸೈಕ್ಲಿಂಗ್ ರೈಡ್ ಗೆ ರಾಷ್ಟ್ರೀಯ ಸೈಕ್ಲಿಸ್ಟ್ ಚಾಂಪಿಯನಶಿಪ್ ಗಳಲ್ಲಿ ಚಿನ್ನದ ಪದಕ ವಿಜೇತರಾದ ಕಾವೇರಿ ಡೊಳ್ಳಿ, ಗೌತಮ ಬೇಲೆರಿ ಹಸಿರು ನಿಶಾನೆ ತೋರಿದರು.ಈ ಸೈಕ್ಲಿಂಗ್‌ನಲ್ಲಿ ಉಪಮೇಯರ್ ದಿನೇಶ ಹಳ್ಳಿ, ಎಸ್ಪಿ, ಹೆಚ್ಚುವರಿ ಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್ಪಿಗಳಾದ ಬಸವರಾಜ ಯಲಿಗಾರ, ಸುನೀಲ ಕಾಂಬಳೆ, ಸಿಪಿಐ ಮಲ್ಲಯ್ಮ ಮಠಪತಿ, ರವಿ ಯಡವಣ್ಣನವರ, ಪರಶುರಾಮ ಮನಗೂಳಿ, ಮುಖಂಡರಾದ ಸುರೇಶ ಘೊಣಸಗಿ, ಬಸವರಾಜ ದೇವರ, ಡಿ.ಕೆ.ತಾವಸೆ, ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿಯ ಪದಾಧಿಕಾರಿಗಳಾದ ಮುರುಗೇಶ ಪಟ್ಟಣಶೆಟ್ಟಿ, ಡಾ.ರಾಜು ಯಲಗೊಂಡ, ಸಂತೋಷ ಔರಸಂಗ, ಶಿವನಗೌಡ ಪಾಟೀಲ, ಅಪ್ಪು ಭೈರಗೊಂಡ, ಗುರುಶಾಂತ ಕಾಪಸೆ, ಮಹೇಶ ಶಟಗಾರ, ಅನೀಲ ಧಾರವಾಡಕರ, ಸೋಮು ಮಠ, ಸಮೀರ ಬಳಿಗಾರ, ವೀಣಾ ದೇಶಪಾಂಡೆ, ಶಿವರಾಜ ಪಾಟೀಲ, ಸೈಕ್ಲಿಂಗ್ ಕೋಚ್ ರಾಠೋಡ, ಶಿವಾನಂದ ಯರನಾಳ, ಹಣಮಂತ ಚಿಂಚಲಿ, ನವೀದ ನಾಗಠಾಣ, ವಿಜಯಪುರ ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆಯ ತರಬೇತುದಾರ ರಮೇಶ ರಾಠೋಡ ಮತ್ತು 35ಕ್ಕೂ ಹೆಚ್ಚು ವೃತ್ತಿಪರ ಸೈಕ್ಲಿಂಗ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Share this article