- ನೋಟ್ಬುಕ್ ವಿತರಣೆ-ರಸಮಂಜರಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ
ಕನ್ನಡಪ್ರಭ ವಾರ್ತೆ ಹರಿಹರ
ಅಂಬೇಡ್ಕರ್ ಹೋರಾಟದ ಫಲವಾಗಿಯೇ ಇಂದು ದಲಿತರು, ಹಿಂದುಳಿದವರು, ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಾಣಲು ಸಾಧ್ಯವಾಗಿದೆ. ಅವರು ಸಂವಿಧಾನ ರಚಿಸದಿದ್ದರೆ ಭಾರತದ ಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಹಲವರ ವಿರೋಧದ ನಡುವೆಯೂ ನಗರದ ಆಯಕಟ್ಟಿನ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನಕ್ಕೆ ನಿವೇಶನ ಮಂಜೂರು ಮಾಡಿಸಿದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.ನಗರದ ಎ.ಕೆ. ಕಾಲೋನಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಮಿತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಣಿಜ್ಯ ಪ್ರದೇಶ ಆಗುವುದರಿಂದ ಹಳೇ ಕೋರ್ಟ್ ಜಾಗದಲ್ಲಿ ಅಂಬೇಡ್ಕರ್ ಭವನಕ್ಕೆ ನಿವೇಶನ ಕೊಡಿಸುವುದು ಬೇಡ ಎಂದು ಹಲವರು ತಕರಾರು ಮಾಡಿದರು. ಆದರೆ, ಆಗ ಶಾಸಕನಿದ್ದ ನಾನು ಸರ್ಕಾರದ ಮೇಲೆ ಒತ್ತಡ ಹೇರಿ, ವಾಣಿಜ್ಯ ಪ್ರದೇಶದಲ್ಲೇ ನಿವೇಶನ ಮಂಜೂರು ಮಾಡಿಸಿದೆ ಎಂದರು.
ಒಳ ಮೀಸಲಾತಿಯ ಬೀಜವನ್ನು ನಾಡಿನಲ್ಲಿ ಮೊದಲು ಬಿತ್ತಿದ ಕೀರ್ತಿ ಪ್ರೊ. ಬಿ.ಕೃಷ್ಣಪ್ಪರಿಗೆ ಸಲ್ಲುತ್ತದೆ. ಈ ಕೇರಿಯಲ್ಲಿರುವ ಅವರು ಜನಿಸಿದ ಮನೆ ಶಿಥಿಲಾವಸ್ಥೆಯಲ್ಲಿದೆ. ಅದನ್ನು ಜೀರ್ಣೋದ್ಧಾರ ಮಾಡಿ, ಜಿಲ್ಲಾಡಳಿತ ಸ್ಮಾರಕವನ್ನಾಗಿ ರೂಪಿಸಬೇಕು. ಅಲ್ಲಿ ವಾಸವಿರುವ ಅವರ ಬಂಧುಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಬೇಕಿದೆ ಎಂದರು.
ಮುಖ್ಯ ಅತಿಥಿ, ದೂಡಾ ಮಾಜಿ ಸದಸ್ಯ ಜಿ.ವಿ. ವೀರೇಶ್ ಮಾತನಾಡಿದರು. ಶ್ರೀಶೈಲ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಬಿ.ಆರ್. ಗುರುದೇವ ಸಂವಿಧಾನ ಪೀಠಿಕೆ ವಾಚಿಸಿದರು, ವಿದ್ಯಾರ್ಥಿಗಳಿಗೆ ೧೦೦೦ ನೋಟ್ಬುಕ್ಗಳನ್ನು ವಿತರಿಸಲಾಯಿತು. ಸಹನಾ ಆರ್ಕೇಷ್ಟ್ರಾ ತಂಡದವರಿಂದ ರಸ ಮಂಜರಿ ಕಾರ್ಯಕ್ರಮ ನಡೆಸಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಸುರೇಶ್, ಎಚ್.ಜೆ.ಮರಿದೇವ, ಯಶವಂತಪ್ಪ, ಮೂಕ ಮೈಲಪ್ಪ, ನೋಟದವರ ಕರಿಲಿಂಗಪ್ಪ, ಹಾಲೇಶಪ್ಪ ಡಿ., ರಾಜೂ ಜೆ., ಶಣ್ಮುಖಪ್ಪ, ಮಾರುತಿ ಪಿ.ಬಿ., ಕುಮಾರ್ ಡಿ., ಗೋಣಿಬಸಪ್ಪ, ಗಾಯಕರಾದ ಬಿ.ಆರ್.ಹನುಮಂತಪ್ಪ, ಚಂದ್ರಶೇಖರ್ ಅಮ್ರದ್ ಇದ್ದರು.
- - --26ಎಚ್ಆರ್ಆರ್01:
ಕಾರ್ಯಕ್ರಮವನ್ನು ಮಾಜಿ ಶಾಸಕ ಎಸ್.ರಾಮಪ್ಪ ಉದ್ಘಾಟಿಸಿದರು.