ಹಾನಗಲ್ಲ: ಜನಕಲ್ಯಾಣದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ನುಡಿದಂತೆ ನಡೆದ ಶ್ರೇಯಸ್ಸು ರಾಜ್ಯ ಸರ್ಕಾರಕ್ಕೆ ಸಲ್ಲಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಹುಲ್ಲತ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಒಂದು ಕೋಟಿ ರು. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಅವರು ವಾರ್ಷಿಕ 58 ಸಾವಿರ ಕೋಟಿ ರು. ವ್ಯಯ ಮಾಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅತೀ ಹೆಚ್ಚು ತೆರಿಗೆ ಕರ್ನಾಟಕದಿಂದ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರ ವಾಪಸ್ ಬಿಡಿಗಾಸು ನೀಡುತ್ತಿದೆ. ಕರ್ನಾಟಕದ ನಾನಾ ಯೋಜನೆಗಳಿಗೆ ಅನುದಾನ ಬಿಡುಗಡೆಗೂ ಅನಾದರ ತೋರುತ್ತಿದೆ. ಇದೀಗ ಮನರೇಗಾ ಸ್ವರೂಪ ಬದಲಿಸಿ ಗಾಯದ ಮೇಲೆ ಬರೆ ಎಳೆದಿದೆ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ, ಮೋಸ ಮಾಡುತ್ತಿದ್ದರೂ ಸಹ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನ ದೊರಕಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹುಲ್ಲತ್ತಿ ಗ್ರಾಮದಲ್ಲಿ 40 ಲಕ್ಷ ರು. ಬೈಲವಾಳ ಮ ಆರೆಗೊಪ್ಪ ಗ್ರಾಮದಲ್ಲಿ 25 ಲಕ್ಷ ರು., ಯಲಿವಾಳ ಗ್ರಾಮದಲ್ಲಿ 20 ಲಕ್ಷ ರು., ಹಸನಾಬಾದಿ ಗ್ರಾಮದಲ್ಲಿ 10 ಲಕ್ಷ ರು. ಹಾಗೂ ಗಡೆಗುಂಡಿಯಲ್ಲಾಪುರ ಗ್ರಾಮದಲ್ಲಿ 5 ಲಕ್ಷ ಸೇರಿದಂತೆ ಒಟ್ಟು ಒಂದು ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸಿಸಿರಸ್ತೆ, ಸಿಡಿ, ಗಟಾರ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ತಾಪಂ ಕೆಡಿಪಿ ಸದಸ್ಯ ಮಹ್ಮದ್ಹನೀಫ್ ಬಂಕಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಹಾನಗಲ್ ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಮುನ್ನಾ ಪಠಾಣ, ಶಿವಪ್ಪ ಗೊಲ್ಲರ, ವಸಂತ ಕಿರವಾಡಿ, ಫಕ್ಕೀರಪ್ಪ ಜಿಗಳಿಕೊಪ್ಪ, ಅನ್ವರಸಾಬ ಮುಲ್ಲಾ, ರಾಜಾಹುಲಿ ಮಕ್ತೇಶ್ವರ, ಶೇರ್ಅಲಿ ಮುಲ್ಲಾ, ಸುರೇಶ ಪಾಳದ, ಮಹೇಶ ಪವಾರ, ಪುಟ್ಟಪ್ಪ ಜ್ಯೋತಿಬಾನವರ, ಬಸವಣ್ಣೆಪ್ಪ ಹಂಚಿನಮನಿ, ಅಪ್ಪಣ್ಣ ಕಂಬಾಳಿಮಠ, ಪರಶುರಾಮ ಕಾಳೇರ, ಯಲ್ಲಪ್ಪ, ರಾಜೂ ಕೋಲಕಾರ, ಉಮೇಶ ದಾನಪ್ಪನವರ, ಶಿವು ಭದ್ರಾವತಿ ಇದ್ದರು.