ಬ್ಯಾಡಗಿ: ಕಳೆದೆರಡು ದಿನಗಳ ಹಿಂದಷ್ಟೇ ಸುರಿದ ಮಳೆಗೆ ತಾಲೂಕಿನ ಅಂಗರಗಟ್ಟಿ-ಮಾಸಣಗಿ (ಬ್ಯಾಡಗಿ-ತಿಳವಳ್ಳಿ ರಸ್ತೆ) ನಡುವೆ ಮಾರ್ಗ ಮಧ್ಯದಲ್ಲಿರುವ ಸಂತೆ ಹಳ್ಳ ನದಿಯಂತೆ ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಳಿಸಿದೆ. ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ಗ್ರಾಮದ ರೈತರು ಅತ್ಯಂತ ಖುಷಿಯಿಂದ ಮಾಡಬೇಕಾಗಿದ್ದ ದೀಪಾವಳಿ ಹಬ್ಬಕ್ಕೆ ತಣ್ಣೀರೆರೆಚಿದಂತಾಗಿದೆ.
ರೈತರ ಬದುಕಿಗೆ ಮುಳುವಾದ ಮಳೆ:ಅಕಾಲಿಕ ಸುರಿಯುತ್ತಿರುವ ಮಳೆ ಬಹಳಷ್ಟು ಅನಾಹುತಗಳನ್ನು ಮಾಡುತ್ತಿದ್ದು ಸರ್ಕಾರ ಸೇರಿದಂತೆ ಸಾರ್ವಜನಿಕರನ್ನು ನಿದ್ದೆಗೆಡಿಸಿದ್ದರು ಕೆಲವೊಮ್ಮೆ ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ. ಸದರಿ ಘಟನೆಯಿಂದ ಸಂತೆ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಅಂಗರಗಟ್ಟಿ ಮಾಸಣಗಿ ಸೇರಿದಂತೆ ಸದರಿ ರಸ್ತೆಯನ್ನು ಬಳಸುವ ಪ್ರತಿಯೊಬ್ಬರ ಬೇಡಿಕೆಯನ್ನಿಡುತ್ತಿದ್ದಾರೆ.
ಅಧಿಕಾರಿಗಳ ಎಡವಟ್ಟು ಕಂಗಾಲಾದ ರೈತ:ಸದರಿ ಸಮಸ್ಯೆ ಇದೇ ವರ್ಷ ನಡೆದಿದ್ದಲ್ಲ ಮಳೆ ಅರಂಭವಾಯಿತೆಂದರೆ ಸಂತೆ ಹಳ್ಳದ ನೀರು ರಸ್ತೆ ಮೇಲೆ ಹರಿಯಲಾರಂಭಿಸುತ್ತದೆ, ಹೊಸರಸ್ತೆ ನಿರ್ಮಿಸಲಾಗಿದೆಯಾದರೂ ಈ ವೇಳೆ ಸದರಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರಾದರೂ ಕಿವಿಗೊಡದ ಲೋಕೋಪಯೋಗಿ ಇಲಾಖೆ ಕೇವಲ ಸಿಮೆಂಟ್ ಪೈಪ್ಹಾಕಿ ಕೈತೊಳೆದುಕೊಂಡಿದೆ, ಅಧಿಕಾರಿಗಳ ಎಡವಟ್ಟಿನಿಂದ ಹಳ್ಳದ ಅಕ್ಕಪಕ್ಕದಲ್ಲಿರುವ ನೂರಾರು ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ.ನೀರಲ್ಲಿ ಕೊಚ್ಚಿಹೋದ ದೀಪಾವಳಿ: ಮಳೆ ಸೃಷ್ಟಿಸಿದ ಅವಾಂತರದಿಂದ ಮಾಸಣಗಿ ಗ್ರಾಮಸ್ಥರು ಅತ್ಯಂತ ಖುಷಿಯಿಂದ ನ ಡೆಸಬೇಕಾಗಿದ್ದ ದೀಪಾವಳಿ ನೀರಿನಲ್ಲಿ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಇನ್ನೂ ಕೆಲವರಂತೂ ಸುಮಾರು 10 ಕಿ.ಮೀ. (ಮಲ್ಲೂರ ಗ್ರಾಮದ ರಸ್ತೆ) ಸುತ್ತು ಬಳಸಿಕೊಂಡು ಸಂಚರಿಸಬೇಕಾಯಿತು, ಇನ್ನೂ ಹಬ್ಬಕ್ಕೆ ಬಂದವರು ಊರು ತಲುಪದೇ ಕಂಗಾಲಾಗುವಂತೆ ಮಾಡಿದೆ.