ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ ಉಪಲೋಕಾಯುಕ್ತರು

KannadaprabhaNewsNetwork |  
Published : Apr 19, 2025, 12:39 AM IST

ಸಾರಾಂಶ

ಪುರಸಭೆಯು ಬೀದಿ ಬದಿ ಅಂಗಡಿಯವರಿಂದ ನಿತ್ಯ ವಸೂಲಿ ಮಾಡುವ ಶುಲ್ಕಕ್ಕೆ ಜಿಎಸ್‌ಟಿ ಸೇರಿಸಿ ಪಡೆಯುತ್ತಿರುವುದನ್ನು ಗಮನಿಸಿದ ಉಪಲೋಕಾಯುಕ್ತರು, ಯಾವ ಪುರಸಭೆ ಆಡಳಿತ ಪುಸ್ತಕದಲ್ಲಿ ಈ ಕಾನೂನು ಇದೆ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಜಿಎಸ್ಟಿ ವಸೂಲು ಮಾಡದಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಾಲೂರು

ಉಪಲೋಕಯುಕ್ತ ವೀರಪ್ಪ ನೇತೃತ್ವದ ಲೋಕಾಯುಕ್ತ ತಂಡವು ಪಟ್ಟಣದ ಸರ್ಕಾರಿ ಕಚೇರಿಗಳಿಗೆ ಧಿಡೀರ್‌ ಭೇಟಿ ನೀಡಿ ಇಲಾಖೆಯ ಅಧಿಕಾರಿಗಳಿಗೆ ಬೆವರಿಳಿಸಿತಲ್ಲದೆ ಮೂವರು ಅಧಿಕಾರಿಗಳ ವಿರುದ್ಧ ಸುಮೋಟೋ ಕೇಸ್‌ ದಾಖಸಿತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಿಗಳನ್ನು ವಿತರಿಸುತ್ತಿದ್ದರೂ ಕ್ರಮ ಕೈಗೊಳ್ಳ ನಿರ್ಲಕ್ಷ ತೋರಿರುವ ಆಸ್ಪತ್ರೆಯ ಸೂಪರಿಂಡೆಂಟ್‌ ವಿರುದ್ಧ ಕ್ರಮ ಕೈಗೊಳ್ಳುವಂತ ತಹಸೀಲ್ದಾರ್‌ ಎ.ಸಿ.ಮೈತ್ರಿ ಅವರಿಗೆ ಉಪ ಲೋಕಾಯುಕ್ತರು ಆದೇಶಿಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಜಿಎಸ್ಟಿ

ಪುರಸಭೆಯು ಬೀದಿ ಬದಿ ಅಂಗಡಿಯವರಿಂದ ನಿತ್ಯ ವಸೂಲಿ ಮಾಡುವ ಶುಲ್ಕಕ್ಕೆ ಜಿಎಸ್‌ಟಿ ಸೇರಿಸಿ ಪಡೆಯುತ್ತಿರುವುದನ್ನು ಗಮನಿಸಿದ ಉಪಲೋಕಾಯುಕ್ತರು, ಯಾವ ಪುರಸಭೆ ಆಡಳಿತ ಪುಸ್ತಕದಲ್ಲಿ ಈ ಕಾನೂನು ಇದೆ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಇನ್ನು ಮುಂದೆ ಬೀದಿ ಬದಿ ಅಂಗಡಿಯವರಿಂದ ಜಿಎಸ್‌ಟಿ ಪಡೆದರೆ ಕ್ರಿಮಿನಲ್‌ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದರು.

ಬಿ.ಖಾತೆ ಸೇರಿದಂತೆ ಇತರೆ ಪುರಸಭೆ ಸೇವೆಗಳಿಗೆ ಹೆಚ್ಚು ಹಣ ಪೀಕುತ್ತಾರೆ ಎಂದು ಇಲ್ಲಿನ ಕಂದಾಯ ಅಧಿಕಾರಿ ರೇಣುಕಾ ಮೇಲೆ ಹೆಚ್ಚು ದೂರು ಇದ್ದ ಕಾರಣ ಆ ಅಧಿಕಾರಿಯ ಮೊಬೈಲ್‌ ಪೋನ್‌ ವಶಪಡಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಅದರಲ್ಲಿ ನಿರಂತರವಾಗಿ ಹತ್ತಾರು ಸಾವಿರ ರು.ಗಳ ವಹಿವಾಟು ನಡೆಸಿರುವುದನ್ನು ಪತ್ತೆ ಮಾಡಿದರು. ಈ ಬಗ್ಗೆ ಪ್ರಶ್ನಿಸಿ ಆ ಅಧಿಕಾರಿಯ ವಿರುದ್ಧ ಸುಮೋಟೋ ಕೇಸ್‌ ದಾಖಲಿಸಿದರು.

ಕೆರೆಗಳ ಬಗ್ಗೆ ಮಾಹಿತಿ ನೀಡಿ

ತಾಲೂಕು ಕಚೇರಿಯು ಕೆರೆಗಳನ್ನು ನುಂಗಿ ನಿವೇಶನ ಮಾಡುತ್ತಿರುವ ಬಗ್ಗೆ ಬಂದ ದೂರುಗಳ ಬಗ್ಗೆ ಪ್ರಶ್ನಿಸಿದ ಉಪಲೋಕಾಯುಕ್ತರು, ಒಂದು ವೇಳೆ ಇದನ್ನು ಸರಿಪಡಿಸದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ೧೫೫ ಕೆರೆಗಳ ಒತ್ತುವರಿ ತೆರವು ಮಾಡಿರುವುದಾಗಿ ತಹಸೀಲ್ದಾರ್‌ ರೂಪ ನೀಡಿದ ಉತ್ತರಕ್ಕೆ, ಉಳಿದ ಕೆರೆಯನ್ನೂ ಉಳಿಸಿ ತಮಗೆ ವರದಿ ನೀಡುವಂತೆ ಸೂಚಿಸಿದರು.

ಕೋಟಿ ಕೋಟಿ ರು.ಗಳ ವ್ಯವಹಾರ

ಪಟ್ಟಣದ ಮೂರು ಕಚೇರಿಗಳಿಗೆ ಧಾಳಿ ನಡೆಸಿದ ನಂತರ ಪತ್ರಕರ್ತರೂಡನೆ ಮಾತನಾಡುತ್ತ ಮಾಲೂರು ಬೆಂಗಳೂರಿಗೆ ಹತ್ತಿರ ಇರುವುದರಿಂದ ಇಲ್ಲಿ ಕೋಟಿ ಲೆಕ್ಕದಲ್ಲಿ ವ್ಯವಹಾರ ನಡೆಯುತ್ತಿದೆ. ಒಳ್ಳೆ ಕಂದಾಯ ಸಂಗ್ರಹವಾಗುತ್ತಿದೆ. ಇಲ್ಲಿಯ ಸರ್ಕಾರಿ ಅಧಿಕಾರಿಗಳು ಲಾಬಿಗಳ ಜತೆ ಶಾಮೀಲಾಗಿದ್ದಾರೆ. ಅಧಿಕಾರಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು ಅವರ ಜಾತಕವನ್ನು ಪರಿಶೀಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪಲೋಕಾಯುಕ್ತ ವೀರಪ್ಪ ಅವರ ಜತೆಯಲ್ಲಿ ನ್ಯಾ. ಅರವಿಂದ್‌, ಪೊಲೀಸ್‌ ಅಧಿಕ್ಷಕ ಧನಂಜಯ, ಉಪ ಅಧೀಕ್ಷ ಸುಧೀರ್‌, ಎಸಿ ಮೈತ್ರಿ, ಇನ್ಸ್‌ಪೆಕ್ಟರ್‌ ಆಂಜಿನಪ್ಪ, ರೇಣುಕಾ, ಯಶವಂತ ಕುಮಾರ್‌, ತಹಸೀಲ್ದಾರ್ ರೂಪ, ಲೋಕಾ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''