ಜಿಲ್ಲಾಧಿಕಾರಿಯೇ ನಮ್ಮ ಮಿಸ್ಸು!

KannadaprabhaNewsNetwork |  
Published : Jun 01, 2024, 12:45 AM IST
ಪಾಠ | Kannada Prabha

ಸಾರಾಂಶ

8ನೇ ತರಗತಿಗೆ ಇಂಗ್ಲಿಷ್‌ ಭಾಷೆಯಲ್ಲಿನ ಸ್ವಾನ್‌ ಆ್ಯಂಡ್‌ ದಿ ಪ್ರಿನ್ಸ್‌ಸ್‌ ಎಂಬ ಬುದ್ಧನ ಕುರಿತು ಜಾನಪದ ನಾಟಕದ ಪಾಠವಿದೆ. ಆ ಪಾಠವನ್ನು ಜಿಲ್ಲಾಧಿಕಾರಿ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧಿಸಿದರು.

ಧಾರವಾಡ:

ಇಡೀ ಕ್ಲಾಸ್‌ ಪಿನ್‌ಡ್ರಾಫ್‌ ಸೈಲೆನ್ಸ್‌.. ಮಕ್ಕಳ ಮುಖದಲ್ಲಿ ಗಾಂಭೀರತ್ಯೆ, ಮಕ್ಕಳನ್ನೇ ನಾಟಕದ ಪಾತ್ರಧಾರಿಯನ್ನಾಗಿಸಿ ನಟನೆ ಮಾಡಿಸಿದ ಶಿಕ್ಷಕಿ. ತಾವೇ ಸೂತ್ರಧಾರಿಯಾಗಿ, ಪಾತ್ರಧಾರಿಯಾಗಿ ಮಕ್ಕಳಿಗೆ ಪಾಠ ಮನವರಿಕೆ ಮಾಡಿಕೊಟ್ಟ ಶಿಕ್ಷಕಿ!

ಇದು ಧಾರವಾಡದ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸರ್ಕಾರಿ ಉರ್ದು ಮತ್ತು ಕನ್ನಡ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಒಂದು ಝಲಕ. ಅಂದ ಹಾಗೆ ಆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಬೋಧಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ್ದು ಜಿಲ್ಲಾಧಿಕಾರಿ ದಿವ್ಯಪ್ರಭು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾ ಪ್ರಾರಂಭೋತ್ಸವವನ್ನು ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಶಾಲೆಯಲ್ಲಿ ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಆಗಮಿಸಿದ್ದರು. ಎಲ್ಲರಂತೆ ಬರೀ ಜ್ಯೋತಿ ಬೆಳಗಿ ಉದ್ಘಾಟಿಸುವ ಕೆಲಸವನ್ನಷ್ಟೇ ಮಾಡಲಿಲ್ಲ ಜಿಲ್ಲಾಧಿಕಾರಿ. ಬದಲಿಗೆ 7 ಮತ್ತು 8ನೇ ತರಗತಿ ಮಕ್ಕಳಿಗೆ ಇಂಗ್ಲಿಷ್‌ ಪಾಠವೊಂದನ್ನು ತಾವೇ ಶಿಕ್ಷಕಿಯಾಗಿ ಬೋಧಿಸುವ ಮೂಲಕ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು.

8ನೇ ತರಗತಿಗೆ ಇಂಗ್ಲಿಷ್‌ ಭಾಷೆಯಲ್ಲಿನ ಸ್ವಾನ್‌ ಆ್ಯಂಡ್‌ ದಿ ಪ್ರಿನ್ಸ್‌ಸ್‌ ಎಂಬ ಬುದ್ಧನ ಕುರಿತು ಜಾನಪದ ನಾಟಕದ ಪಾಠವಿದೆ. ಆ ಪಾಠವನ್ನು ಜಿಲ್ಲಾಧಿಕಾರಿ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧಿಸಿದರು. ಬರೀ ಪಾಠ ಮಾಡುವುದಷ್ಟೇ ಅಲ್ಲ. ಮಕ್ಕಳನ್ನು ವೇದಿಕೆಗೆ ಕರೆದು ಅವರನ್ನೇ ನಾಟಕದ ಪಾತ್ರಧಾರಿಯನ್ನಾಗಿ ಮಾಡಿ, ತಾವೇ ಸೂತ್ರಧಾರರಾಗಿ ಬೋಧಿಸಿದರು. ಈ ಮೂಲಕ ಮಕ್ಕಳಿಗೆ ಪಾಠ ಮನದಾಳಕ್ಕೆ ಇಳಿಯುವಂತೆ ಮಾಡಿದರು. ಜತೆಗೆ ಶಿಕ್ಷಕರಿಗೆ ಯಾವ ರೀತಿ ಪಾಠ ಮಾಡಬೇಕು ಎಂಬುದರ ಝಲಕ್‌ ಕೂಡ ನೀಡಿದರು.

ಪಾಠದಲ್ಲಿ ಬರುವ ಶುದ್ಧೋಧನ, ಸಿದ್ಧಾರ್ಥ, ದೇವದತ್ತ, ಮಂತ್ರಿಗಳ ಪಾತ್ರವನ್ನು ಒಬ್ಬೊಬ್ಬ ವಿದ್ಯಾರ್ಥಿನಿಗೆ ವಹಿಸಿ, ಓದಿಸಿ ಅದರ ಅರ್ಥ ವಿವರಿಸಿದರು. ಪಾಠದಲ್ಲಿ ಬರುವ ವ್ಯಾಕರಣ, ಸಂಜ್ಞಾವಾಚಕಗಳನ್ನು ಉದ್ಧರಿಸಿ, ಅಭಿನಯಿಸಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಪಾಠ ಬೋಧಿಸಿದ ಜಿಲ್ಲಾಧಿಕಾರಿ, ಮಕ್ಕಳಿಗೆ ಪಾಠ ಅರ್ಥವಾಗಿದೆಯೋ ಇಲ್ಲವೋ ಎಂಬುದನ್ನು ಕೆಲ ಪ್ರಶ್ನೆ ಕೇಳಿ ತಿಳಿದುಕೊಂಡರು. ಈ ಮೂಲಕ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಪ್ರೇರಣೆ, ಪ್ರೋತ್ಸಾಹ ತುಂಬಿದರು.

ಸಭಾ ಕಾರ್ಯಕ್ರಮ:

ಇದಕ್ಕೂ ಮೊದಲು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಮೆದುಳು, ಮನಸ್ಸು ಮತ್ತು ದೇಹ ಸಶಕ್ತ, ಸದೃಢವಾಗಿದ್ದರೆ ಉತ್ತಮ ಶಿಕ್ಷಣದ ಮೂಲಕ ಕಂಡ ಕನಸು ಸಾಧಿಸಬಹುದು. ಕಲಿಕೆಯ ಆಸಕ್ತಿ ವಿದ್ಯಾರ್ಥಿಗಳಲ್ಲಿ ಮತ್ತು ಕಲಿಸುವ ಅಭಿರುಚಿ ಶಿಕ್ಷಕರಲ್ಲಿ ಇದ್ದರೆ ಮಾತ್ರ ಅದು ಒಂದು ಕೌಶಲ್ಯಯುತವಾಗಿ ಕೂಡಿ ಬರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರೇ ಆದರ್ಶ. ಅವರ ಜೀವನ ನಿರೂಪಣೆ ಪಾಲಕರ ಜತೆಗೆ ಶಿಕ್ಷಕರಿಗೂ ಸೇರಿದೆ ಎಂದರು.

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.74 ಆಗಿದೆ. ರಾಜ್ಯದಲ್ಲಿ 24ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ನಮ್ಮ ಜಿಲ್ಲೆ ಬಂದಿದೆ. ಇದು ನಾವು ಹೆಮ್ಮೆ ಪಡುವ ವಿಷಯವಲ್ಲ. ಈ ವರ್ಷ ಜಿಲ್ಲೆ ಶೇ. 100ರಷ್ಟು ಫಲಿತಾಂಶ ಪಡೆಯಬೇಕು. ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ. 10ನೇ ತರಗತಿ ಕಲಿಸುವ ಪ್ರತಿ ಶಿಕ್ಷಕ ಪ್ರತಿಜ್ಞೆ ಮಾಡಿ, ಫಲಿತಾಂಶಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡಬೇಕು. ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಶಾಲಾ ಕಟ್ಟಡಗಳ ದುರಸ್ತಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರದ ವಿಶೇಷ ಅನುದಾನ ಮತ್ತು ಅತಿವೃಷ್ಟಿ ನಿಧಿಯಲ್ಲೂ ಆರ್ಥಿಕ ನೆರವು ನೀಡಲಾಗಿದೆ. ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಇದೇ ವೇಳೆ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ವಿತರಿಸಲಾಯಿತು.

ಈ ವೇಳೆ ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಯಟ್‌ ಪ್ರಾಚಾರ್ಯ ಜಯಶ್ರೀ ಕಾರೇಕರ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಟಿಸಿಡಬ್ಲ್ಯೂ ಪ್ರಾಚಾರ್ಯ ಬಿ.ಎಂ. ಬಡಿಗೇರ, ಬಿಆರ್‌ಸಿ ಮಂಜುನಾಥ ಅಡವೆರ, ವಿಷಯ ಪರಿವೀಕ್ಷಕರಾದ ಬಿ.ಬಿ. ದುಬ್ಬನಮರಡಿ, ನಫಿಜಾಬಾನು ದಾವಲಸಾಬನವರ, ಶಿವಲೀಲಾ ಕಳಸಣ್ಣವರ ಸೇರಿದಂತೆ ಇಲಾಖೆ ಅಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು, ನಾಳೆ ಬೆಲ್ಕಾನ್ ಪ್ರದರ್ಶನ
ಬುರುಡೆ ಪ್ರಕರಣ: ವಿಚಾರಣೆ 13ಕ್ಕೆ ಮುಂದೂಡಿಕೆ