ಕನ್ನಡಪ್ರಭ ವಾರ್ತೆ ಅಫಜಲ್ಪುರ
ರೈತರು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿದರೆ, ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ. ಜೆ.ಎಂ. ಕೊರಬು ಅವರ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆ ಇತರೆ ರೈತರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.ಅವರು ತಾಲೂಕಿನ ಮಾಶಾಳ ಗ್ರಾಮದ ಪ್ರಗತಿಪರ ರೈತರಾದ ಜೆ.ಎಂ. ಕೊರಬು ತೋಟಕ್ಕೆ ಭೇಟಿ ನೀಡಿ, ದ್ರಾಕ್ಷಿ ಬೆಳೆ ವೀಕ್ಷಣೆ ಮಾಡಿ, ಜಿಲ್ಲೆಯಲ್ಲೇ ಈ ರೀತಿ ದ್ರಾಕ್ಷಿ ಬೆಳೆದಿರುವುದು ನಾನು ನೋಡಿಲ್ಲ.
ಒಳ್ಳೆಯ ಸಾವಯವ ಕೃಷಿಗೆ ಒತ್ತು ನೀಡಿ ವಿವಿಧ ಬಗೆಯ ದ್ರಾಕ್ಷಿಗಳನ್ನು ಬೆಳೆದಿದ್ದೀರಿ, ತೋಟಗಾರಿಕೆ ಇಲಾಖೆಯವರು ಈ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರಿಸಿಲ್ಲ ಎಂದು ಕಾಣುತ್ತಿದೆ. ಮುಂದೆ ನಿಮ್ಮ ಜಮೀನಿಗೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯಿಂದ ಒಂದು ತಂಡ ರಚನೆ ಮಾಡಿ ಆಸಕ್ತಿ ಇರುವ ರೈತರಿಗೆ ಕಳುಹಿಸಲಾಗುವುದು. ಸಾಧ್ಯವಾದಷ್ಟು ರೈತರಿಗೆ ಮಾಹಿತಿ ನೀಡಿದರೆ ಬೇರೆ ರೈತರು ಸಹ ಇಂತಹ ದ್ರಾಕ್ಷಿ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಜೆ.ಎಂ. ಕೊರಬು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಗತಿಪರ ರೈತ ಜೆ.ಎಂ.ಕೊರಬು ಮಾತನಾಡಿ, ಮಾಂಜರಿ ಕಿಸ್ ಮಿಸ್, ಮಾಂಜರಿ ನವೀನ್, ಮಾಂಜರಿ ಮೇಡಿಕಾ, ಮಾಂಜರಿ ಶಾಮಾ, ಮಾಣಿಕ್ ಚಂದ್ ಹೀಗೆ ಹಲವು ಹೊಸ ಮತ್ತು ಹಳೆಯ ತಳಿಯ ದ್ರಾಕ್ಷಿ ಬೆಳೆಗಳನ್ನು ಬೆಳೆಯಲಾಗಿದೆ. ಇದನ್ನು ಒಣ ದ್ರಾಕ್ಷಿ ಮಾಡಿ ವಿವಿಧ ನಗರ ಪ್ರದೇಶಗಳಿಗೆ ಮಾರಾಟಕ್ಕೆ ಕಳುಹಿಸಲಾಗುವುದು. ಇದರಿಂದ ರೈತರಿಗೆ ಸಾಕಷ್ಟು ಲಾಭ ಬರಲಿದೆ. ಆದರೆ ಇಲ್ಲಿನ ರೈತರು ಕಬ್ಬು, ಹತ್ತಿ, ತೊಗರಿ ಮಾತ್ರ ಹಾಕುತ್ತಾರೆ. ಇದರಿಂದ ಹೆಚ್ಚಿನ ಲಾಭ ಬರುವುದಿಲ್ಲ ಎಂದು ತಿಳಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಎಷ್ಟೇ ರೈತರಿಗೆ ಕಳುಹಿಸಿದರೂ ಸಹ ನಾನು ಖುದ್ದಾಗಿ ರೈತರಿಗೆ ದ್ರಾಕ್ಷಿ ಬೆಳೆಯ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಗಜಾನನ ಬಾಳೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ತಹಸೀಲ್ದಾರ್ ಸಂಜೀವಕುಮಾರ ದಾಸರ, ಪಿಎಸ್ಐ ಮಹೆಬೂಬ ಅಲಿ ಸೇರಿದಂತೆ ಇತರರಿದ್ದರು.