ಡಿಕೆಶಿಗೆ ಮಂಡಿಯೂರಿಸುವ ಶಕ್ತಿ ರೈತ ಚಳವಳಿಗಿದೆ

KannadaprabhaNewsNetwork |  
Published : Jun 23, 2026, 01:15 AM IST
22ಕೆಆರ್ ಎಂಎನ್ 3.ಜೆಪಿಜಿಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಈ ದೇಶದ 56 ಇಂಚಿನ ಪ್ರಧಾನಿ ಮೋದಿ ಅವರೇ ರೈತ ಚಳವಳಿ ಮುಂದೆ ಮಂಡಿಯೂರಿ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆದರು. ಇನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀವ್ಯಾವ ಲೆಕ್ಕ ಹೇಳಿ. ನಿಮಗೆ ಮಂಡಿಯೂರಿಸುವುದು ರೈತ ಚಳವಳಿಗೆ ಕಷ್ಟ ಅಲ್ಲ ಎಂದು ಕರ್ನಾಟಕ ರಾಜ್ಯ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು

ರಾಮನಗರ: ಈ ದೇಶದ 56 ಇಂಚಿನ ಪ್ರಧಾನಿ ಮೋದಿ ಅವರೇ ರೈತ ಚಳವಳಿ ಮುಂದೆ ಮಂಡಿಯೂರಿ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆದರು. ಇನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀವ್ಯಾವ ಲೆಕ್ಕ ಹೇಳಿ. ನಿಮಗೆ ಮಂಡಿಯೂರಿಸುವುದು ರೈತ ಚಳವಳಿಗೆ ಕಷ್ಟ ಅಲ್ಲ ಎಂದು ಕರ್ನಾಟಕ ರಾಜ್ಯ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯಲ್ಲ ಅನ್ನುತ್ತಿದ್ದರು. ರೈತ ಚಳವಳಿಗೆ ದೇಶ ದ್ರೋಹಿ ಪಟ್ಟ ಕಟ್ಟಿದರು. ಕೊನೆಗೆ ಪ್ರಧಾನಿಗಳೇ ಮಂಡಿಯೂರಿ ಕಾಯಿದೆ ಹಿಂಪಡೆದರು. ಇನ್ನು ಡಿ.ಕೆ.ಶಿವಕುಮಾರ್ ನೀವ್ಯಾಯ ಲೆಕ್ಕ ಹೇಳಿ ಎಂದರು.

ಡಿಕೆಶಿ ಮಣ್ಣು ಹಿಡಿದು ತೀರ್ಮಾನಿಸಲಿ:

ಡಿಕೆಶಿಗೆ ರಾಜಕಾರಣ 3ನೇ ಆಯ್ಕೆಯಾದರೆ, ಉದ್ಯಮ ಎರಡನೇ ಆಯ್ಕೆ. ಕೃಷಿ ಮೊದಲ ಆಯ್ಕೆ ಎಂದು ಹೇಳಿಕೊಂಡಿದ್ದಾರೆ. ನೀವು ರೈತನ ಮಗನೇ ಆಗಿದ್ದರೆ ಬಿಡದಿ ಟೌನ್ ಶಿಪ್ ಯೋಜನೆ ವಿಚಾರವನ್ನು ಕೃಷಿ ಭೂಮಿಯಲ್ಲಿ ನಿಂತು ಮಣ್ಣು ಹಿಡಿದು ತೀರ್ಮಾನ ಮಾಡಲಿ ಎಂದು ಸವಾಲು ಹಾಕಿದರು.

ಡಿಕೆಶಿ ರೈತನಾಗಲ್ಲ ಬ್ಯುಸಿನೆಸ್ ಮ್ಯಾನ್ ಆಗಿ ಆಲೋಚನೆ ಮಾಡುತ್ತಿದ್ದಾರೆ. ವ್ಯಾಪರಸ್ಥರಿಗೆ ಯಾವುದೇ ವಸ್ತು ಸರಕಾಗಿ ಕಾಣುತ್ತದೆ. ಅದೇ ರೀತಿ ಡಿಕೆಶಿಗೆ ಅನ್ನ ಹಾಕುವ, ರೈತರು ಭಾವನಾತ್ಮಕ ಸಂಬಂಧ ಹೊಂದಿರುವ, ಜೀವನಾಧಾರವಾಗಿರುವ ಹಾಗೂ ಉದ್ಯೋಗ ಸೃಷ್ಟಿಸುವ ಭೂಮಿ ಸರಕಾಗಿ ಕಾಣುತ್ತಿದೆ. ಅದಕ್ಕಾಗಿಯೇ 2 ಕೋಟಿ ಪರಿಹಾರ ನೀಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭೂಮಿ ಸರಕಲ್ಲ, ಅದು ತಾಯಿಗೆ ಸಮಾನ. ಹಾಗಾಗಿಯೇ ಬೆಲೆ ಕಟ್ಟಲಾಗುವುದಿಲ್ಲ. ಆದರೆ, ದಲ್ಲಾಳಿಗಳ ಪರವಾಗಿರುವ ಸರ್ಕಾರಗಳು ಭೂ ತಾಯಿಗೆ ಬೆಲೆ ಕಟ್ಟುತ್ತಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳೆಲ್ಲವೂ ಕಾರ್ಪೋರೇಟ್ ಗಳ ಪರವಾಗಿವೆ. ರಿಯಲ್ ಎಸ್ಟೇಟ್ ಮಾಫಿಯಾದ ಕೈ ಗೊಂಬೆಯಾಗಿ, ಅವರಿಗೆ ಬೇಕಾದ ಭೂಮಿಯನ್ನು ಸುಲಭ ದರದಲ್ಲಿ ಕೊಡಿಸುತ್ತಿದ್ದಾರೆ ಎಂದು ಟೀಕಿಸಿದರು.

ರೈತ ಕುಲಕ್ಕೆ ಕೈ ಹಾಕಿದ್ರೆ ದೇವ್ರು ಕೈ ಹಿಡಿಯಲ್ಲ:

ಎಲ್ಲರು ಅನ್ನದಾತ ಸುಖಿಭವ ಎನ್ನುತ್ತಾರೆ. ದೇವರುಗಲೇ ರೈತರಿಗೆ ಮೊದಲ ಆದ್ಯತೆ ನೀಡುತ್ತಾರೆ. ಮುಖ್ಯಮಂತ್ರಿಗಳೇ ನೀವು ದೈವ ಭಕ್ತರು. ಭೂಮಿ ಕಸಿದುಕೊಂಡು ರೈತ ಕುಲಕ್ಕೆ ಕೈ ಹಾಕಿದರೆ ಯಾವ ದೇವರು ನಿಮ್ಮ ಕೈ ಹಿಡಿಯಲ್ಲ. ನೀವು ನಂಬಿದ ದೇವರೂ ಕೈ ಕೊಡುತ್ತಾನೆ. ಅನ್ನದಾತನ ಬದುಕು ಕಸಿದುಕೊಂಡವನಿಗೆ ದೇವರು ಎಂದೂ ಆಶೀರ್ವಾದ ಮಾಡುವುದಿಲ್ಲ ಎಂದು ಎಚ್ಚರಿಸಿದರು.

ಈ ಹಿಂದೆ ಗುಂಡೂರಾವ್ ಸರ್ಕಾರ ರೖೆತರಿಗೆ ಗುಂಡಿಟ್ಟಿತು. ಆ ಸರ್ಕಾರವನ್ನೇ ರೈತರು ಕಿತ್ತೊಗೆದರು. ಇಲ್ಲಿವರೆಗೆ ರೈತರ ವಿರುದ್ಧ ಬಂದವರ ಕುರ್ಚಿ ಹೋಗಿದಿಯೇ ಹೊರತು, ಯಾರೂ ರೈತರನ್ನು ಸೋಲಿಸಲು ಸಾಧ್ಯವಾಗಿಲ್ಲ. ರೈತ ಕುಲದ ಬದುಕನ್ನು ಕಸಿದುಕೊಳ್ಳಲು ಕೈ ಹಾಕಿದ ಯಾವುದೇ ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ರಾಜಕೀಯದಲ್ಲಿ ಮುಂದುವರೆದ ಉದಾಹರಣೆ ಇಲ್ಲ. ಅಂತಹ ಕೆಟ್ಟ ಇತಿಹಾಸಕ್ಕೆ ರೈತನ ಮಗನಾಗಿ ನೀವು ಸೇರಬೇಡಿ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಮಠಾಧೀಶರು-ಚಿತ್ರನಟರ ವಿರುದ್ಧ ಹೋರಾಟ :

ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಭೂಮಿ ಉಳಿಸಿಕೊಳ್ಳಲು ರೈತರು 470 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿವರೆಗೆ ಯಾವುದೇ ಮಠಾಧೀಶರಾಗಲಿ ಅಥವಾ ಚಲನಚಿತ್ರ ನಟರಾಗಲಿ ಬೆಂಬಲ ನೀಡದೆ ರೈತ ವಿರೋಧಿ ನಿಲುವು ತಾಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳು, ಸಚಿವರ ಪದಗ್ರಹಣ ಸಮಾರಂಭ ಹಾಗೂ ಮೀಸಲಾತಿ ಚಳವಳಿಗಳಲ್ಲಿ ಭಾಗವಹಿಸುವ ಮಠಾಧೀಶರಿಗೆ ಅನ್ನದಾತರು ಕಾಣುತ್ತಿಲ್ಲ. ಚಿತ್ರನಟರ ಸಿನಿಮಾಗಳು ಓಡಲು ಇದೇ ರೈತರು ಬೇಕು. ಆದರೆ, ಅವರಿಗೆ ರೈತರು ಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಮಠಾಧೀಶರು ಮತ್ತು ಸಿನಿ ತಾರೆಯರ ವಿರುದ್ಧವೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತಸಂಘ ನಾಯಕರಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಉಪಾಧ್ಯಕ್ಷ ಕೆ.ಮಲ್ಲಯ್ಯ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ್ ಕುಮಾರ್, ಕಾರ್ಯಾಧ್ಯಕ್ಷರಾದ ಮಹೇಶ್ ಪ್ರಭು, ಗೋವಿಂದರಾಜು, ರಾಜ್ಯ ಉಪಾಧ್ಯಕ್ಷ ಕೆಂಪುಗೌಡ, ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಭೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಮಯ್ಯ, ಕರ್ನಾಟಕ ಪ್ರಾಂತ ರೖತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ಕನಕಪುರ ನಗಸಭೆ ಸದಸ್ಯ ಸ್ಟುಡಿಯೋ ಚಂದ್ರು, ಮುಖಂಡರಾದ ಚೀಲೂರು ಮುನಿರಾಜು, ಕುಮಾರಸ್ವಾಮಿ, ಕೃಷ್ಣಯ್ಯ, ಗೋಪಾಲ್, ಶ್ರೀಶೖೆಲಾ, ರಮ್ಯಾ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

22ಕೆಆರ್ ಎಂಎನ್ 3.ಜೆಪಿಜಿ

ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ₹10 ಲಕ್ಷ ದೇಣಿಗೆ!
ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ