ರೈತರ ಪಂಪ್ಸೆಟ್ ಕಳ್ಳತನ ಮಾಡುತ್ತಿದ್ದ ತಂಡದ ಓರ್ವ ಸದಸ್ಯನನ್ನು ಮಧ್ಯರಾತ್ರಿ ರೈತರೆ ಹಿಡಿದು, ಕಟ್ಟಿಹಾಕಿ ಬೆಳಿಗ್ಗೆ ಪೊಲೀಸರಿಗೆ ಒಪ್ಪಿಸಿದ ಘಟನೆ ಮುದ್ದೇಬಿಹಾಳ ತಾಲೂಕಿನ ಅಡವಿಹುಲಗಬಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಅಡವಿ ಹುಲಗಬಾಳ ಕೆರೆ, ಜಮೀನುಗಳಲ್ಲಿನ ಕೊಳವೆ ಬಾವಿ, ತೆರೆದ ಬಾವಿ ಮುಂತಾದವುಗಳಿಗೆ ಪಂಪ್ಸೆಟ್ ಅಳವಡಿಸಿದ್ದಾರೆ. ಮೇಲಿಂದ ಮೇಲೆ ಪಂಪ್ಸೆಟ್ ಕಳ್ಳತನವಾಗುತ್ತಿದ್ದವು. ಆದರೆ ಕಳ್ಳರು ಸಿಕ್ಕಿಬಿದ್ದಿರಲಿಲ್ಲ.
ಕನ್ನಡಪ್ರಭ ವಾರ್ತೆ ವಿಜಯಪುರ
ರೈತರ ಪಂಪ್ಸೆಟ್ ಕಳ್ಳತನ ಮಾಡುತ್ತಿದ್ದ ತಂಡದ ಓರ್ವ ಸದಸ್ಯನನ್ನು ಮಧ್ಯರಾತ್ರಿ ರೈತರೆ ಹಿಡಿದು, ಕಟ್ಟಿಹಾಕಿ ಬೆಳಿಗ್ಗೆ ಪೊಲೀಸರಿಗೆ ಒಪ್ಪಿಸಿದ ಘಟನೆ ಮುದ್ದೇಬಿಹಾಳ ತಾಲೂಕಿನ ಅಡವಿಹುಲಗಬಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಅಡವಿ ಹುಲಗಬಾಳ ಕೆರೆ, ಜಮೀನುಗಳಲ್ಲಿನ ಕೊಳವೆ ಬಾವಿ, ತೆರೆದ ಬಾವಿ ಮುಂತಾದವುಗಳಿಗೆ ಪಂಪ್ಸೆಟ್ ಅಳವಡಿಸಿದ್ದಾರೆ. ಮೇಲಿಂದ ಮೇಲೆ ಪಂಪ್ಸೆಟ್ ಕಳ್ಳತನವಾಗುತ್ತಿದ್ದವು. ಆದರೆ ಕಳ್ಳರು ಸಿಕ್ಕಿಬಿದ್ದಿರಲಿಲ್ಲ. ಶುಕ್ರವಾರ ಮಧ್ಯರಾತ್ರಿ ರೈತನೊಬ್ಬ ಆರೋಗ್ಯ ಸಮಸ್ಯೆಯಿಂದಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವಾಗ ಸೇತುವೆ ಹತ್ತಿರ ಯಾರೋ ಅಪರಿಚಿತರು ಓಡಾಡಿದಂತಾಗಿದೆ. ಆತ ಕೆಲ ರೈತರನ್ನು ಕರೆದು ಹುಡುಕಾಡಿದಾಗ ಒಬ್ಬ ಸೇತುವೆ ಕೆಳಗೆ ಅಡಗಿ ಕುಳಿತಿದ್ದನ್ನು ಗಮನಿಸಿ ಹಿಡಿದಿದ್ದಾರೆ. ಇನ್ನಿಬ್ಬರು ಸ್ಥಳದಿಂದ ಓಡಿ ಹೋಗಿದ್ದು, ಸಿಕ್ಕಿಬಿದ್ದ ಯುವಕನ್ನು ಅಲ್ಲೇ ಇದ್ದ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ 112ಗೆ ಕರೆ ಮಾಡಿ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸರೆಸಿಕ್ಕ ಮುದ್ದೇಬಿಹಾಳ ಪಟ್ಟಣದ ಯುವಕನನ್ನು ಒಪ್ಪಿಸುವುದಕ್ಕೂ ಮುನ್ನ ಗ್ರಾಮವ್ಯಾಪ್ತಿಯ ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಸ್ಥಳಕ್ಕೆ ಕರೆಸುವಂತೆ ರೈತರು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಗೊಂದಲ ಕೂಡ ನಿರ್ಮಾಣವಾಗಿತ್ತು. 112 ಸಿಬ್ಬಂದಿ ಹಾಗೂ ರೈತರ ಮಧ್ಯೆ ವಾಗ್ವಾದ ನಡೆದಿದ್ದು, ಪಿಎಸ್ಐ ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ಚುನಾವಣಾ ಕರ್ತವ್ಯದಲ್ಲಿ ಇರುವುದರಿಂದ 112 ದಲ್ಲಿ ಕಳ್ಳನನ್ನು ಕಳಿಸಲು ತಿಳಿಸಿದ ಮೇಲೆ ಗ್ರಾಮಸ್ಥರು ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.