ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ಮತ ಚಲಾಯಿಸುವ ಮೂಲಕ ಬರೆಯಲಿದ್ದಾನೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ಮತ ಚಲಾಯಿಸುವ ಮೂಲಕ ಬರೆಯಲಿದ್ದಾನೆ. ಕಳೆದ ಒಂದು ವಾರದಿಂದ ತುರಿಸಿನಿಂದ ನಡೆದಿದ್ದ ಪ್ರಚಾರ ಬುಧವಾರ ಶಾಂತಗೊಂಡಿತ್ತು. ಹೊರಗಿನ ಮುಖಂಡರು, ಕಾರ್ಯಕರ್ತರು ಕ್ಷೇತ್ರ ತೊರೆದರೆ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕೊನೆಯ ಹಂತದ ಪ್ರಯತ್ನ ನಡೆಸಿದರು.ಏ.9ರಂದು ಮತದಾನ ನಡೆಯಲಿದ್ದು, ನವನಗರದ ಸೆಕ್ಟರ್ ನಂ.43ರಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಸಾಮಾನ್ಯ ವೀಕ್ಷಕರಾದ ಪಾರುಲ್ ಪಟವಾರಿ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು.
ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಚುನಾವಣೆ ಕರ್ತವ್ಯ ನಿರ್ವಹಿಸಲಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇವಿಎಂ ಮಷೀನ್ ಸೇರಿ ಅಗತ್ಯ ವಸ್ತುಗಳೊಂದಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ಬುಧವಾರ ಸಂಜೆ ಪ್ರಯಾಣ ಬೆಳೆಸಿದರು.
ಸಿದ್ಧತೆ ಪರಿಶೀಲನೆ:
ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದುಕೊಂಡ ಸಾಮಾನ್ಯ ವೀಕ್ಷಕರು ಸಿದ್ಧತೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಚುನಾವಣೆ ಸಾಮಗ್ರಿ, ಸಿದ್ಧತಾ ಕೊಠಡಿಗಳಿಗೆ ತೆರಳಿ ಆಯೋಗದ ಮಾರ್ಗಸೂಚಿ ಪಾಲಿಸಿ ಕರ್ತವ್ಯ ನಿರ್ವಹಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿದರು. ಮತದಾನಕ್ಕೆ ಬೇಕಾದ ಎಲ್ಲ ಅಗತ್ಯ ಸಾಮಗ್ರಿ ಪರಿಶೀಲಿಸಿಕೊಂಡು ಮತಗಟ್ಟೆಗೆ ತೆರಳಲು ತಿಳಿಸಿದರು. ಮತಗಟ್ಟೆ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದ ಅವರು ಚುನಾವಣೆ ಕಾರ್ಯಗಳು ನಿಯಮಾನುಸಾರ ಹಾಗೂ ಅಡಚಣೆಗಳಿಲ್ಲದೆ ನಡೆಯುವಂತೆ ಸೂಚನೆ ನೀಡಿದರು. ನಂತರ ಚುನಾವಣೆ ಸಾಮಗ್ರಿಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಸಂಗಪ್ಪ ಮಾತನಾಡಿ, ಉಪ ಬಾಗಲಕೋಟೆ ಚುನಾವಣೆಗೆ 2,59,797 ಜನ ಮತ ಚಲಾಯಿಸಲಿದ್ದು, 322 ಮತಗಟ್ಟೆ ಸ್ಥಾಪಿಸಲಾಗಿದೆ. ಕಾಯ್ದಿರಿಸಿದ ಸಿಬ್ಬಂದಿ ಒಳಗೊಂಡಂತೆ 1564 ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ಆಯಾ ಮತಗಟ್ಟೆಗಳಿಗೆ ತೆರಳಲು 35 ಬಸ್, 9 ಮಿನಿ ಬಸ್ಗಳು, 11 ಮ್ಯಾಕ್ಸಿಕ್ಯಾಬ್, 10 ಟ್ರಾಕ್ಸ್ ವಾಹನಗಳಲ್ಲಿ ಸಂಜೆ ಮತಗಟ್ಟೆಗಳಿಗೆ ತೆರಳಿದರು.
ಜಿಪಂ ಸಿಇಒ ಶಶಿಧರ ಕುರೇರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತದಾನಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ವಿತರಣೆ ಕಾರ್ಯ ವೀಕ್ಷಣೆ ಮಾಡಿದರು. ತಮಗೆ ನೀಡಲಾದ ಸಾಮಗ್ರಿಗಳನ್ನು ಚೆಕ್ ಲಿಸ್ಟ್ ಪ್ರಕಾರ ಪರೀಕ್ಷಿಸಿಕೊಂಡು ಮತಗಟ್ಟೆಗೆ ತೆರಳಲು ತಿಳಿಸಿದರು. ವೈದ್ಯಕೀಯ ಸೌಲಭ್ಯ ಒದಗಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಚುನಟ್ಣೆಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭೇಟಿ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ವಾಸುದೇವ ಸ್ವಾಮಿ, ಡಾ.ಪ್ರದೀಪಕುಮಾರ ಸೇರಿದಂತೆ ಇತರರು ಇದ್ದರು.
ಚುನಾವಣೆ ಕಾರ್ಯಕ್ಕೆ ನಿಯೋಜಿಸಿದ ಮತಗಟ್ಟೆ ಸಿಬ್ಬಂದಿಗೆ ಬೆಳಗಿನ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸವಿದು ತಮ್ಮ ತಮ್ಮ ಕೇಂದ್ರಗಳಿಗೆ ತೆರಳಿದರು. ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಸಿಬ್ಬಂದಿ ಅಗತ್ಯ ಸಾಮಗ್ರಿಗಳೊಂದಿಗೆ ನಿಯೊಜಿತ ಮತಗಟ್ಟೆಗಳಿಗೆ ತೆರಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.